ಕನ್ನಡಿಗರು ಸಂಭಾಜಿ ಪಾಟೀಲ್ಅನ್ನು ಕ್ಷಮಿಸಬೇಕಂತೆ!
ಬೆಂಗಳೂರು, ಜ.22 : ಕನ್ನಡಿಗರ ವಿರುದ್ಧವಾಗಿ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ. ನನ್ನ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವು ಉಂಟಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸಂಭಾಜಿ ಪಾಟೀಲ್, ಮಹಾಮೇಳವ ಕಾರ್ಯಕ್ರಮದಲ್ಲಿ ಇಬ್ಬರು ಶಾಸಕರು ಆಯ್ಕೆಯಾಗಿ ಬಂದಿದ್ದೇವೆ. ಈ ಸಂಖ್ಯೆ ನಾಲ್ಕು ಆಗಿದ್ದರೆ ಮರಾಠಿಗರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಹೆಗಲು ಕೊಡುತ್ತಿದ್ದೇವು ಎಂದು ಹೇಳಿಕೆ ನೀಡಿದ್ದೆ. ಆದರೆ, ಅದನ್ನು 'ಕರ್ನಾಟಕ ಸರ್ಕಾರದ ಶವ ಯಾತ್ರೆ'ಗೆ ಹೆಗಲು ಕೊಡುತ್ತಿದ್ದೆ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದರು. [ಕರ್ನಾಟಕದ ಶವಯಾತ್ರೆ ಮಾಡುತ್ತಿದ್ದೆವು]

ನಾನು ಕನ್ನಡಿಗರ ವಿರೋಧಿಯಲ್ಲ, ಮುದೊಂದು ದಿನ ಸುವರ್ಣ ವಿಧಾನಸೌಧದಲ್ಲಿ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತೇನೆ. ನಾನು ಎಂದಿಗೂ ಕನ್ನಡ-ಮರಾಠಿ, ಹಿಂದೂ-ಮುಸ್ಲಿಂ ಎಂಬ ಭೇದಭಾವ ಮಾಡಿಲ್ಲ. ಸುಪ್ರೀಂ ಕೋರ್ಟ್ ಗಡಿ ವಿವಾದ ವಿಚಾರವಾಗಿ ನೀಡುವ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದು ಪಾಟೀಲ್ ತಿಳಿಸಿದರು. [ನಾಲ್ವರು ಕನ್ನಡಿಗರ ಬಲಿ ಪಡೆದು ಸಾಯುವೆ]
ಬೆಳಗಾವಿಯ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ. ಬೆಂಗಳೂರು ಹಾಗೂ ಬೆಳಗಾವಿಯ ಪಾಲಿಕೆಯಲ್ಲಿರುವ ನನ್ನ ಕಚೇರಿ ಧ್ವಂಸ ಮಾಡಲಾಯಿತು. ಅಲ್ಲದೆ, ಗುಲ್ಬರ್ಗ ಪ್ರವಾಸದ ವೇಳೆ ನನ್ನ ಮೇಲೆ ದಾಳಿ ನಡೆಸಲಾಯಿತು. ಅದು ಅವರ ಕನ್ನಡಪರ ಭಾವನೆ ಎಂದು ಭಾವಿಸಿದ್ದೇನೆ ಎಂದು ಸಂಭಾಜಿ ಪಾಟೀಲ್ ಹೇಳಿದರು.
ದಾಳಿ ನಡೆಯುವ ಭೀತಿ ಇದೆ : ಜ.22ರ ಬುಧವಾರದಿಂದ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಇದರಲ್ಲಿ ನಾನು ಭಾಗವಹಿಸುತ್ತೇನೆ. ಅಲ್ಲಿಯೂ ನನ್ನ ಮೇಲೆ ಕನ್ನಡಪರ ಸಂಘಟನೆಗಳಿಂದ ದಾಳಿ ನಡೆಯುವ ಸಾಧ್ಯತೆಯಿದೆ. ನಾನು ಯಾವುದೇ ಕಾರಣಕ್ಕೂ ಕನ್ನಡಗರ ವಿರೋಧಿಯಲ್ಲ. ನನಗೆ ಮರಾಠಿ, ಕನ್ನಡ ಮತ್ತು ಉರ್ದು ಭಾಷಿಕರು ಮತ ನೀಡಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.












Click it and Unblock the Notifications