ಹೈಕಮಾಂಡ್ ಟಿಕೆಟ್ ನೀಡಿದರೆ ಬೆಳಗಾವಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ: ಶ್ರದ್ಧಾ ಶೆಟ್ಟರ್
ಬೆಳಗಾವಿ, ಮಾರ್ಚ್ 24: ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದರೆ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದು ದಿ.ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಶ್ರದ್ಧಾ ಶೆಟ್ಟರ್, ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧಳಾಗಿದ್ದೇನೆ ಎಂದರು.
ಬೆಳಗಾವಿಯಲ್ಲಿ ಅಚ್ಚರಿ: ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಸ್ವಾಮೀಜಿ!
ದಿ.ಸುರೇಶ್ ಅಂಗಡಿ ಪುತ್ರಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಸೊಸೆ ಅಗಿರುವ ಶ್ರದ್ಧಾ ಶೆಟ್ಟರ್, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಬೇರೆ ಅಭ್ಯರ್ಥಿಗಳ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದ್ದು, ಹೈಕಮಾಂಡ್ ಈಗ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ಆದರೆ, ಟಿಕೆಟ್ ನೀಡುವ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದು, ಚುನಾವಣೆಗೆ ಸ್ಪರ್ಧಿಸಬೇಕೆಂದು ಅಭಿಮಾನಿಗಳ ಒತ್ತಾಯವಾಗಿದೆ. ಬಿಜೆಪಿ ಹೈಕಮಾಂಡ್ಗೂ ಕನ್ವೇ ಮಾಡಲಾಗಿದೆ ಎಂದರು.
ಹೈಕಮಾಂಡ್ಗೆ ಎಲ್ಲಾ ವಿಷಯ ಪ್ರಸ್ತಾಪ ಮಾಡಿದ್ದೇವೆ, ಇನ್ನೆರಡು ದಿನಗಳಲ್ಲಿ ನಿಮಗೂ ಗೊತ್ತಾಗುತ್ತದೆ. ನಾನು ದೆಹಲಿಗೆ ಹೋಗಿಲ್ಲ, ಬೆಂಗಳೂರಿನಲ್ಲಿದ್ದೆ. ಹೈಕಮಾಂಡ್ ಅಥವಾ ಪಕ್ಷದ ವರಿಷ್ಠರು ಯಾರೂ ನನ್ನ ಜೊತೆ ಮಾತನಾಡಿಲ್ಲ ಎಂದು ಹೇಳಿದರು.
ಟಿಕೆಟ್ ಬಗ್ಗೆ ಏನೂ ಚರ್ಚೆ ಆಗಿಲ್ಲ, ಅದರೆ ನಮ್ಮ ಕುಟುಂಬಕ್ಕೆ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇವೆ ಅಂತಾ ಹೇಳಿದ್ದೇವೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ನಮ್ಮ ತಂದೆ ಜನರ ಜೊತೆ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರು. ಅಭಿಮಾನಿಗಳು ಕರೆದ ಸಮಾರಂಭಗಳಿಗೆ ಹೋಗುತ್ತಿದ್ದೇವೆ. ಮುಂದೆಯೂ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇವೆ ಎಂದು ಶ್ರದ್ಧಾ ಶೆಟ್ಟರ್ ತಿಳಿಸಿದರು.
ನಮ್ಮ ತಂದೆಯವರ ಜೊತೆಗಿದ್ದ ಎಲ್ಲರ ಜೊತೆಯೂ ನಾವು ಇರುತ್ತೇವೆ, ಹೈಕಮಾಂಡ್ ನಿರ್ಣಯವೇ ಅಂತಿಮ. ಟಿಕೆಟ್ ನೀಡಿದರೆ ಸ್ಪರ್ಧೆಗೆ ಸಿದ್ಧ ಎಂದು ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ನಲ್ಲಿ ಶ್ರದ್ಧಾ ಶೆಟ್ಟರ್ ಪುನರುಚ್ಚರಿಸಿದರು.