ದೂಧ್ ಸಾಗರ್- ಸೋನಾಲಿಯಂ ಮಧ್ಯೆ ರೈಲು ಹಳಿ ಮೇಲೆ ಗುಡ್ಡ ಕುಸಿತ
ಬೆಳಗಾವಿ, ಸೆಪ್ಟೆಂಬರ್ 8: ದೂಧ್ ಸಾಗರ್ ಮತ್ತು ಸೋನಾಲಿಯಂ ಮಧ್ಯೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ವಿಪರೀತ ಮಳೆ ಸುರಿದ ಪರಿಣಾಮವಾಗಿ ಭೂಕುಸಿತ ಉಂಟಾಗಿದೆ. ಆ ಕಾರಣಕ್ಕೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಶನಿವಾರ ಸಂಜೆ 5 ಗಂಟೆ ವೇಳೆಗೆ ಭೂ ಕುಸಿತ ಆಗಿದೆ.
ವಾಸ್ಕೋಡ ಗಾಮಾ -ಹಜರತ್ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಮಾರ್ಗ ಬದಲಿಸಿ, ಮಡಗಾಂವ್ ರೋಹಾ, ಪನವೇಲ್, ಕಲ್ಯಾಣ, ಮನಮಾಡ್ ಮೂಲಕ ಸಂಚರಿಸಿದೆ. ಹುಬ್ಬಳ್ಳಿ- ಲೋಂಡಾ/ ನಿಜಾಮುದ್ದೀನ್ ಲಿಂಕ್ ಎಕ್ಸಪ್ರೆಸ್ ಧಾರವಾಡದಲ್ಲಿ ನಿಲ್ಲಿಸಲಾಗಿದೆ. ವಾಸ್ಕೋಡ ಗಾಮಾ- ಬೆಳಗಾವಿ ಪ್ಯಾಸೆಂಜರ್ ರೈಲು ಕುಲೆಂನಲ್ಲಿ ನಿಲ್ಲಿಸಲಾಗಿದೆ.
ವಾಸ್ಕೋಡ ಗಾಮಾ -ಕೆಎಸ್ ಆರ್ ಬೆಂಗಳೂರು ಸ್ಲೀಪರ್ ಕೋಚ್ ರೈಲು ಮಡಗಾಂವ್ ನಲ್ಲಿ ನಿಲ್ಲಿಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿಗೂ ಪ್ರವಾಹ ಭೀತಿ ತಟ್ಟಿದೆ. ಸವದತ್ತಿಯ ಮಲಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆಯಲ್ಲಿ ರಾಮದುರ್ಗದ ಹಳ್ಳಿಗಳಿಗೆ ನೀರು ನುಗ್ಗಿದೆ.

ಮಲಪ್ರಭಾ ಜಲಾಶಯದಿಂದ ಶನಿವಾರ 21 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆಗಿದ್ದು, ರಾಮದುರ್ಗ ತಾಲೂಕಿಗೂ ಈಗ ಪ್ರವಾಹ ಭೀತಿ ಎದುರಾಗಿದೆ. ರಾಮದುರ್ಗ ತಾಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಿಗೆ ಹೈ ಅಲರ್ಟ್ ಘೋಷಣೆ ಆಗಿತ್ತು. ತಾಲೂಕಿನ ಸುನ್ನಾಳ ಸರ್ಕಾರಿ ಶಾಲೆ ಸೇರಿದಂತೆ ಮನೆಗಳಿಗೆ ನೀರು ನುಗ್ಗಿದೆ.

ನದಿಪಾತ್ರದಲ್ಲಿ ವಾಸಿಸುತ್ತಿರುವವರ ಮನೆ ಹಾಗೂ ಜಾನುವಾರುಗಳ ಸ್ಥಳಾಂತರ ಕಾರ್ಯ ಪ್ರಾರಂಭವಾಗಿದೆ. ಸುನ್ನಾಳ ಗ್ರಾಮದಲ್ಲಿ ದರ್ಗಾವನ್ನು ಮಲಪ್ರಭಾ ನೀರು ಸುತ್ತುವರಿದಿದೆ. ಸುನ್ನಾಳ ಗ್ರಾಮದ ಗೈಬುಸಾಬ ದರ್ಗಾಗೆ ನೀರು ನುಗ್ಗಿದೆ.












Click it and Unblock the Notifications