ಎಂ.ಇ.ಎಸ್ ಪುಂಡಾಟಿಕೆ ವಿರೋಧಿಸಿದ ಕರವೇ ಕಾರ್ಯಕರ್ತರ ಬಂಧನ
ಬೆಳಗಾವಿ, ನವೆಂಬರ್ 13 : ಬೆಳಗಾವಿ ಅಧಿವೇಶನದ ವಿರುದ್ಧವಾಗಿ ಎಂ.ಇ.ಎಸ್ ಆಯೋಜಿಸಿದ್ದ ಮಹಾಮೇಳಾವ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕ.ರ.ವೇ ಕಾರ್ಯಕರ್ತರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಅಧಿವೇಶನದ ದಿನದಂದೆ ಮಹಾಮೇಳಾವ ಆಯೋಜಿಸಿದ್ದ ಎಂ.ಇ.ಎಸ್ ನ ನಾಡ ವಿರೋಧಿ ನೀತಿಯನ್ನು ಖಂಡಿಸಿ ನಗರದ ಚೆನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಟೈರುಗಳಿಗೆ ಬೆಂಕಿ ಹಚ್ಚಿ ಎಂ.ಇ.ಎಸ್ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಮೇಳಾವಕ್ಕೆ ಆಗಮಿಸಿರುವ ಎಂ.ಇ.ಎಸ್ ನಾಯಕರನ್ನು ಗಡಿ ಪಾರು ಮಾಡಬೇಕೆಂದು ಒತ್ತಾಯಿಸಿದರು. ಕಾರ್ಯಕ್ಕೆ ಅಡ್ಡಿಪಡಿಸಲೆಂದು ಮೇಳಾವದ ಕಡೆಗೆ ಕಾರ್ಯಕರ್ತರು ಹೊರಟಾಗ ಪೊಲೀಸರು ಅವರನ್ನು ಬಂಧಿಸಿದರು.
ಅನುಮತಿ ನಿರಾಕರಿಸಿದ್ದರೂ ಕಾರ್ಯಕ್ರಮ ನಡೆಸುತ್ತಿದ್ದ ಎಂ.ಇ.ಎಸ್ ನ ಪುಂಡಾಟಿಕೆಯನ್ನು ಕರವೇ ಕಾರ್ಯಕರ್ತರು ವಿರೋಧಿಸಿದರು. ಕರವೇ ಕಾರ್ಯಕರ್ತರನ್ನು ಬಂಧಿಸಲು ಬಂದ ಪೊಲೀಸರೊಂದಿಗೆ ಕೆಲವು ಸದಸ್ಯರು ವಾಗ್ವಾದ ಸಹ ಮಾಡಿದರು.

ಕೈಕಟ್ಟಿ ಕೂತ ಜಿಲ್ಲಾಡಳಿತ
ಅಧಿವೇಶನ ದಿನದಂದೆ ಮಹಾಮೇಳಾವ ನಡೆಸಲು ಅನುಮತಿ ಕೋರಿದ್ದ ಎಂ.ಇ.ಎಸ್ ನ ನಾಡದ್ರೋಹಿ ಬುದ್ಧಿಯನ್ನು ಗಮನಿಸಿ ಜಿಲ್ಲಾಡಳಿತ ಅನುಮತಿ ನೀಡದೆ ನಿರಾಕರಿಸಿತ್ತು. ಆದರೂ ಮೊಂಡು ತನ ಪ್ರದರ್ಶಿಸಿರುವ ಎಂ.ಇ.ಎಸ್ ವ್ಯಾಕ್ಸಿನಾ ಡಿಪೊದ ನಡು ರಸ್ತೆಯಲ್ಲಿ ವೇದಿಕೆ ಹಾಕಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಆದರೂ ಜಿಲ್ಲಾಡಳಿತ ಮತ್ತು ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಅಧಿವೇಶನದ ವಿರುದ್ಧ ಎಂ.ಇ.ಎಸ್ ಘೋಷಣೆ
ಬೆಳಗಾವಿ, ಕಾರವಾರ, ನಿಪ್ಪಾಣಿ, ಬಾಲ್ಕಿಗಳು ಸಂಯುಕ್ತ ಮಹಾರಾಷ್ಟ್ರದ ಭಾಗವಾಗಬೇಕು ಎಂದು ಎಂ.ಇ.ಎಸ್ ಸದಸ್ಯರು ಘೋಷಣೆ ಹಾಕಿದರು. ಇದಲ್ಲದೆ ಬೆಳಗಾವಿ ಅಧಿವೇಶನದ ವಿರುದ್ಧವೂ ಘೋಷಣೆಗಳನ್ನು ಹಾಕಿದರು.

ಸೂಪರ್ ಸೀಡ್ ಬೆದರಿಕೆ
ಸೂಪರ್ ಸೀಡ್ ಗೆ ಹೆದರಿದ ಬೆಳಗಾವಿ ಪಾಲಿಕೆ ಮೇಯರ್ ಸಂಜೋತಾ ಬಾಂದೇಕರ್ ಅವರು ಮಹಾಮೇಳವಕ್ಕೆ ಗೈರಾಗಿದ್ದಾರೆ. ಆದರೆ ಮೇಳಾವದಲ್ಲಿ ಎಂ.ಇ.ಎಸ್ ನ ದೀಪಕ ದಳವಿ, ಮಾಜಿ ಶಾಸಕರಾದ ಮನೋಹರ ಕಿಣೀಕರ, ದಿಗಂಬರ ಮನೋಹರ ಕಿಣಿಕರ, ದಿಗಂಬರ ಪಾಟೀಲ, ,ಆಲೋಜಿ ಅಷ್ಠೇಕರ ಭಾಗಿಯಾಗಿದ್ದರು.

ಕನ್ನಡಪರ ಸಂಘಟನೆಗಳ ವಿರೋಧ
ಮಹಾಮೇಳವಕ್ಕೆ ಪೊಲೀಸರ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕನ್ನಡಪರ ಸಂಘಟನೆಗಳು, ಹಾಗೂ ಹಲವು ಸ್ಥಳೀಯರ ವಿರೋಧ ಕಾರ್ಯಕ್ರಮಕ್ಕೆ ಇರುವ ಕಾರಣ ಮಹಾಮೇಳವಕ್ಕೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.












Click it and Unblock the Notifications