ಸಿದ್ದರಾಮಯ್ಯ ವಾಚ್ ಬಗ್ಗೆ ಜಾರಿ ನಿರ್ದೇಶನಾಲಯದ ತನಿಖೆ?
ಬೆಳಗಾವಿ, ಫೆಬ್ರವರಿ 15 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಿಸುವ ವಾಚ್ ಅನ್ನು ಉಡುಗೊರೆಯಾಗಿ ನೀಡಿದವರು ಯಾರು?' ಎಂದು ಅವರು ಬಹಿರಂಗಪಡಿಸಬೇಕು ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, 'ರಾಹುಲ್ ಗಾಂಧಿ ಅವರು ಮೋದಿ ಸರ್ಕಾರ ಸೂಟು ಬೂಟಿನ ಸರ್ಕಾರ ಎಂದು ಪದೇ-ಪದೇ ಟೀಕೆ ಮಾಡುತ್ತಾರೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಚ್ ಪ್ರಕರಣದ ಬಗ್ಗೆ ಅವರು ಏನು ಹೇಳುತ್ತಾರೆ?' ಎಂದು ಪ್ರಶ್ನಿಸಿದರು. [ವಾಚ್ ಗಲಾಟೆ : ಕಿಡಿಕಾರಿದ ಪೂಜಾರಿ]

'ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸುತ್ತಿದ್ದ ವಜ್ರ ಖಚಿತವಾದ ವಾಚ್ ಅನ್ನು ಉಡುಗೊರೆಯಾಗಿ ನೀಡಿದವರು ಯಾರು?, ಯಾವ ಕಾರಣಕ್ಕಾಗಿ' ಎಂದು ಸಿದ್ದರಾಮಯ್ಯ ಅವರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಜೋಶಿ ಅವರು, ರಾಜ್ಯದ ಜನರಿಗೂ ಈ ಬಗ್ಗೆ ತಿಳಿಯಬೇಕು ಎಂದರು. [ಸಿದ್ದರಾಮಯ್ಯ ಧರಿಸುವ ವಾಚ್, ಗ್ಲಾಸ್ ಬೆಲೆ ಇಷ್ಟೊಂದಾ?]
ಸಂಸತ್ನಲ್ಲಿ ವಿಷಯ ಪ್ರಸ್ತಾಪಿಸುವೆ : 'ಸಿದ್ದರಾಮಯ್ಯ ಅವರಿಗೆ ವಿದೇಶದಿಂದ ವಾಚ್ ಗಿಫ್ಟ್ ಬಂದಿದೆ. ಇದನ್ನು ಯಾರು ನೀಡಿದರು?, ಖರೀದಿ ಮಾಡಿದ್ದರೆ ರಶೀದಿ ಇದೆಯೇ? ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು' ಎಂದು ಜೋಶಿ ಒತ್ತಾಯಿಸಿದರು.
'ಸಿದ್ದರಾಮಯ್ಯ ಅವರು ವಾಚ್ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ಸಂಸತ್ತಿನಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸುತ್ತೇನೆ. ಕೇಂದ್ರ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒತ್ತಾಯ ಮಾಡುವುದಾಗಿ' ಪ್ರಹ್ಲಾದ್ ಜೋಶಿ ಅವರು ಎಚ್ಚರಿಕೆ ನೀಡಿದರು.
ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರು 50 ರಿಂದ 70 ಲಕ್ಷ ಬೆಲೆಯ ವಾಚ್ ಕಟ್ಟುತ್ತಾರೆ ಎಂದು ಆರೋಪಿಸಿದ್ದರು. ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ವಾಚ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.












Click it and Unblock the Notifications