2019ರ ಲೋಕಸಭೆ ಚುನಾವಣೆಗೆ ಪ್ರಭಾಕರ ಕೋರೆ ಸ್ಪರ್ಧೆ
ಬೆಳಗಾವಿ, ಸೆಪ್ಟೆಂಬರ್ 30 : ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಬಿಜೆಪಿ ನಾಯಕ ಪ್ರಭಾಕರ ಕೋರೆ ಅವರು 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಅಚ್ಚರಿಯ ವಿಷಯವೆಂದರೆ ಪ್ರಭಾಕರ ಕೋರೆ ಮತ್ತು ಅವರ ಪುತ್ರ ಇಬ್ಬರೂ ಒಂದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಭಾಕರ ಕೋರೆ ಅವರು, 'ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ' ಎಂದು ಹೇಳಿದರು.
'ನಾನು ಮತ್ತು ನನ್ನ ಪುತ್ರ ಅಮಿತ್ ಇಬ್ಬರೂ ಚಿಕ್ಕೋಡಿ ಕ್ಷೇತ್ರದಿಂದ ಚುನಾವನಾ ಕಣಕ್ಕಿಳಿಯಲು ನಿರ್ಧರಿಸಿದ್ದೇವೆ. ಆದರೆ, ಸ್ಪರ್ಧೆ ಕುರಿತು ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕು' ಎಂದರು.

2014ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಪ್ರಕಾಶ್ ಹುಕ್ಕೇರಿ ಅವರು 474373 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ ಅವರನ್ನು ಲೋಕಸಭೆ ಚುನಾವಣಾ ಕಣಕ್ಕಿಳಿಸಿ ಕಾಂಗ್ರೆಸ್ ಗೆಲ್ಲಿಸಿತ್ತು.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕತ್ತಿ ರಮೇಶ್ ವಿಶ್ವನಾಥ್ ಸ್ಪರ್ಧೆ ಮಾಡಿದ್ದರು. 471370 ಮತಗಳನ್ನು ಪಡೆದು ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.
ಮಹಿಳಾ ನಾಯಕಿ ಹೆಸರು ಹೇಳಲಿ : ಬಿಜೆಪಿ ನನಗೆ ಸಚಿವ ಸ್ಥಾನ ಮತ್ತು 30 ಕೋಟಿ ಹಣದ ಆಮಿಷ ನೀಡಿತ್ತು ಎಂಬ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಭಾಕರೆ ಕೋರೆ ಅವರು, 'ಅಮಿಷವೊಡ್ಡಿದ ಬಿಜೆಪಿ ನಾಯಕಿ ಹೆಸರನ್ನು ಅವರು ಬಹಿರಂಗ ಪಡಿಸಲಿ' ಎಂದರು.












Click it and Unblock the Notifications