ದಯನೀಯ ಸ್ಥಿತಿಯಲ್ಲಿ ಬೆಳಗಾವಿ ಬಸ್ ನಿಲ್ದಾಣ
ಬೆಳಗಾವಿ, ಆ. 6 : ಇದು ಹೆಸರಿಗಷ್ಟೇ ಕೇಂದ್ರೀಯ ಬಸ್ ನಿಲ್ದಾಣ. ಅನುಕೂಲಗಳು ವಿರಳ, ಸ್ವಚ್ಛತೆಯಿಲ್ಲದ ವಾತಾವರಣ, ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಇಲಾಖೆ... ಹೀಗೆ ಎಣಿಸುತ್ತಾ ಹೋದರೆ ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ನಾವು ತಯಾರಿಸಬಹುದು. ಇದು ಬೆಳಗಾವಿ ನಗರದ ಕೇಂದ್ರೀಯ ಬಸ್ ನಿಲ್ದಾಣದ ಸದ್ಯದ ಹದಗೆಟ್ಟ ಪರಿಸ್ಥಿತಿ.
ಕಳೆದ ಸುಮಾರು ದಿನಗಳಿಂದಲೂ ಇದೇ ಪರಿಸ್ಥಿತಿ. ಬೇಸಿಗೆಯಲ್ಲಿ ಪ್ರಯಾಣಿಕರು ದೊಡ್ಡದೊಡ್ಡ ಗುಂಡಿಗಳು ಹಾಗೂ ಧೂಳಿನಿಂದ ನೋವು ಅನುಭವಿಸಿದರೆ, ಮಳೆಗಾಲದಲ್ಲಂತೂ ಇದರ ಪರಿಸ್ಥಿತಿ ಹೇಳಬಾರದು. ನಿಲ್ದಾಣದಲ್ಲಿಯ ಕಿತ್ತುಹೋಗಿರುವ ಡಾಂಬರು ರಸ್ತೆ, ಉಂಟಾಗಿರುವ ಗುಂಡಿಗಳನ್ನು ನಾವು ನೋಡಿಯೇ ಅಲ್ಲಿನ ಸ್ಥಿತಿಯನ್ನು ತಿಳಿದುಕೊಳ್ಳಬೇಕು.
ಈ ಬಸ್ ನಿಲ್ದಾಣದಲ್ಲಿ ನಿಲ್ದಾಣಕ್ಕಿಂತಲೂ ಅಲ್ಲಿ ಕಂಡುಬರುವ ಸಮಸ್ಯೆಗಳೇ ದೊಡ್ಡವಾಗಿವೆಯೆಂದರೆ ತಪ್ಪಾಗಲಿಕ್ಕಿಲ್ಲ. ನಾವು ನಿಲ್ದಾಣವನ್ನು ಪ್ರವೇಶಿಸುತ್ತಲೇ ದೊಡ್ಡದೊಡ್ಡ ಗುಂಡಿಗಳು ನಮ್ಮನ್ನು ಸ್ವಾಗತಿಸುತ್ತ,ನಮ್ಮನ್ನು ಮಣ್ಣು ಮುಕ್ಕಿಸಲು ಪ್ರಯತ್ನಿಸುತ್ತವೆ. ಕೈಕಾಲು ಮುರಿದು ನಮ್ಮನ್ನು ಆಸ್ಪತ್ರೆಗೆ ಕಳುಹಿಸಲು ಹಾತೊರೆಯುತ್ತಿರುತ್ತವೆ. [ಕರವೇಯಿಂದ ಯಳ್ಳೂರು ಚಲೋ]

ದಿನಬೆಳಗಾದರೆ ಸಾಕು ಈ ನಿಲ್ದಾಣದಲ್ಲಿ ಓಡಾಡುವಂಥ ಪ್ರಯಾಣಿಕರು ಇಲ್ಲಿಯ ಗುಂಡಿಗಳನ್ನು ಅವ್ಯವಸ್ಥೆಗಳನ್ನು ಕಂಡು ಇಲಾಖೆಯ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಬಾಯಿಗೆ ಬಂದಂತೆ ಬೈಯುತ್ತಲೇ ಓಡಾಡುತ್ತಾರೆ. ಇನ್ನು ಇಲ್ಲಿಯ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳೂ ಅಷ್ಟೇ. ವ್ಯವಸ್ಥೆಯೆನ್ನುವುದು ಇಲ್ಲವೇ ಇಲ್ಲ, ಇಲ್ಲಿ ಎಲ್ಲವೂ ಅಸ್ತವ್ಯಸ್ತ.
ಇಲ್ಲಿನ ಜನರು ಕೂಡ ಬಾಯಿತುಂಬ ತಂಬಾಕು ಹಾಕಿಕೊಂಡು ಪಿಚಕ್ ಪಿಚಕ್ ಅಂತ ಕಂಡಕಂಡಲ್ಲಿ ಉಗಿಯುತ್ತ ಓಡಾಡುವುದು ಬಸ್ ನಿಲ್ದಾಣವನ್ನು ಇನ್ನಷ್ಟು ಅಸಹ್ಯವಾಗಿಸಿದೆ. ಕಾಲಿಡುವ ಮುನ್ನ ಎಲ್ಲಿ ಏನು ಬಿದ್ದಿರುತ್ತೋ ಅಂತ ನೋಡುತ್ತಲೇ ಮುಂದಡಿಯಿಡಬೇಕು. [ಬೆಳಗಾವಿ ಜನರಿಗೆ ಬೇಕಾಗಿರುವುದು]
ಬಸ್ ನಿಲ್ದಾಣವನ್ನು ವ್ಯವಸ್ಥಿತ ರೀತಿಯಲ್ಲಿ ಕಾಪಾಡಿಕೊಳ್ಳಲಾಗದಂಥ ಅಸಮರ್ಥತೆ ಇಲಾಖೆಯಲ್ಲಿ ಕಂಡುಬರುತ್ತದೆ. ಒಟ್ಟಿನಲ್ಲಿ ಈ ಬಸ್ ನಿಲ್ದಾಣ ಸಮಸ್ಯೆಗಳ ಸಾಗರವಾಗಿರುವುದು ಪ್ರಯಾಣಿಕರ ದುರದೃಷ್ಟ.. ಹೇಳಿಕೊಳ್ಳುವಂಥ ದೊಡ್ಡ ಬಸ್ ನಿಲ್ದಾಣವಲ್ಲದಿದ್ದರೂ, ಇಲ್ಲಿ ಕಂಡುಬರುವ ಸಮಸ್ಯೆಗಳಿಗೆ ಕೊರತೆ ಇಲ್ಲ.
ಸುಮಾರು ದಿನಗಳಿಂದಲೂ ನಿಲ್ದಾಣದಲ್ಲಿಯ ಸಮಸ್ಯೆಗಳು, ಅವ್ಯವಸ್ಥೆಗಳು ಪ್ರತಿದಿನ ಇಲಾಖೆಯ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಕಾಣಿಸುತ್ತಿದ್ದರೂ ಯಾರೊಬ್ಬರೂ ಈ ಸಮಸ್ಯೆಗಳ ಪರಿಹಾರಕ್ಕಾಗಿ ತಲೆಕೆಡಿಸಿಕೊಳ್ಳುತ್ತಿಲ. ಸಂಬಂಧಪಟ್ಟ ಇಲಾಖೆಯೂ ಕೂಡ ನಿಲ್ದಾಣದಲ್ಲಿಯ ಅವ್ಯವಸ್ಥೆಗಳ ಬಗ್ಗೆ ಚಕಾರವೆತ್ತದೆ ಕಣ್ಮುಚ್ಚಿ ಕುಳಿತಿರುವುದರಿಂದ, ಪ್ರಯಾಣಿಕರಿಗೆ ಮಾತ್ರ ಕಿರಿಕಿರಿ ತಪ್ಪುತ್ತಿಲ್ಲ.
ದಯವಿಟ್ಟು ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ನಿಲ್ದಾಣದಲ್ಲಿಯ ಅವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು, ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡರೆ ಪ್ರಯಾಣಿಕರಿಗೂ ಒಳ್ಳೆಯದು ಹಾಗೂ ಇಲಾಖೆಗೂ ಒಳ್ಳೆಯ ಹೆಸರು.












Click it and Unblock the Notifications