'ವಿದ್ಯುತ್ ಖರೀದಿ ಹಗರಣ, ಇವರ ಬಂಡವಾಳ ನನಗೆ ಗೊತ್ತಿದೆ'
ಬೆಳಗಾವಿ, ನವೆಂಬರ್ 22 : 'ಇವರ ಬಂಡವಾಳ ನನಗೆ ಗೊತ್ತಿದೆ, ನಾಲ್ಕು ವರ್ಷಗಳಲ್ಲಿ ಏನೇನು ಮಾಡಿದ್ದಾರೆ? ಎಂದು ಗೊತ್ತಿದೆ. ವರದಿಯ ಬಗ್ಗೆ ಚರ್ಚೆ ನಡೆಯಲಿ ಇವರ ಬಂಡವಾಳ ಬಿಚ್ಚಿಡುತ್ತೇನೆ' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಳಗಾವಿಯಲ್ಲಿ ಬುಧವಾರ ಮಾತನಾಡಿದ ಅವರು ವಿದ್ಯುತ್ ಖರೀದಿ ಹಗರಣದ ಬಗ್ಗೆ ಸದನ ಸಮಿತಿ ನೀಡಿದ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.'ಸದನದಲ್ಲಿ ವರದಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು' ಎಂದು ಒತ್ತಾಯಿಸಿದರು.

'ಇವರ ಅವಧಿಯಲ್ಲಿ ನಾಲ್ಕು ವರ್ಷ ಏನೇನು ಮಾಡಿದ್ದಾರೆ ಅಂತ ಗೊತ್ತಿದೆ. ಈ ವರದಿಗೆ ನಾಚಿಕೆಯಾಗಬೇಕು. ವರದಿಗೆ ನಾನು ಸಹಿ ಹಾಕಿಲ್ಲ, ಸರ್ಕಾರ ದಾಖಲೆಗಳನ್ನು ನಾಶ ಮಾಡುವುದರಲ್ಲಿ ಎಕ್ಸ್ಪರ್ಟ್' ಎಂದು ದೂರಿದರು.
'ಮುಖ್ಯಮಂತ್ರಿಗಳ ಮಗನ ಮೇಲೆ ದೂರು ಬಂದರೆ 24 ಗಂಟೆಯಲ್ಲಿ ಅದು ರದ್ದಾಗುತ್ತದೆ.
ಸದನದ ಸಮಿತಿ ವರದಿಯ ಬಗ್ಗೆ ಚರ್ಚೆಯಾಗಬೇಕು. ಆಗ ಇವರ ಬಂಡವಾಳ ಬಿಚ್ಚಿಡುತ್ತೇನೆ. ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ಗೆ ಮನವಿ ಮಾಡಿಕೊಂಡಿದ್ದೇವೆ' ಎಂದು ಕುಮಾರಸ್ವಾಮಿ ಹೇಳಿದರು.
ಇದಕ್ಕೂ ನನಗೂ ಸಂಬಂಧವಿಲ್ಲ : ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಇಂಧನ ಸಚಿವ ಎಚ್.ಡಿ.ರೇವಣ್ಣ ಅವರು ಸದನ ಸಮಿತಿ ವರದಿಗೆ ಅಸಮಾಧಾನ ವ್ಯಕ್ತಪಡಿಸಿದರು. 'ನನ್ನ ಅವಧಿಯಲ್ಲಿ 63 ಕೋಟಿ ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದಕ್ಕೂ ನನಗೂ ಸಂಬಂಧವಿಲ್ಲ' ಎಂದರು.
'ಕೆಪಿಸಿಎಲ್ ವ್ಯವಸ್ಥಾಪಕರು ಇದನ್ನು ನೋಡಿಕೊಳ್ಳುತ್ತಾರೆ. ನನ್ನ ಅವಧಿಯಲ್ಲಿ ಒಂದೇ ಒಂದು ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ಕೆಲವು ಅಧಿಕಾರಿಗಳು ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆ' ಎಂದು ಆರೋಪಿಸಿದರು.
'ಹಾಲಿ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆಯಾಗಲಿ. ಯಡಿಯೂರಪ್ಪ ಅವಧಿ, ನನ್ನ ಅವಧಿ ಹಾಗೂ ಈ ಸರ್ಕಾರದ ಅವಧಿಯಲ್ಲಿನ ಖರೀದಿ ಬಗ್ಗೆಯೂ ತನಿಖೆ ನಡೆಯಲಿ' ಎಂದು ರೇವಣ್ಣ ಒತ್ತಾಯಿಸಿದರು.












Click it and Unblock the Notifications