ಬಿಜೆಪಿ ಸೇರಲಿದ್ದಾರೆ ಕುಡಚಿ ಶಾಸಕ ಪಿ.ರಾಜೀವ
ಬೆಳಗಾವಿ, ಅ.16 : ಕುಡಚಿ ಶಾಸಕ ಪಿ.ರಾಜೀವ ಬಿಜೆಪಿ ಸೇರಲಿದ್ದಾರೆ. ಸಾವಿರಾರು ಕಾರ್ಯಕರ್ತರು ಸೇರಿದ್ದ ಸಮಾವೇಶದಲ್ಲಿ ರಾಜೀವ ಅವರು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
ಶಾಸಕ ರಾಜೀವ ಅವರು ರಾಯಭಾಗ ತಾಲೂಕಿನ ಆಲಕನೂರು ಗ್ರಾಮದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದರು. ಈ ಸಮಾವೇಶದಲ್ಲಿ ಕುಡಚಿ ಕ್ಷೇತ್ರದ ಸಾವಿರಾರು ಮತದಾರರು ಪಾಲ್ಗೊಂಡಿದ್ದರು.
ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ ಅವರು ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದಾರೆ. ಆದರೆ, ಈಗ ಬಿಎಸ್ಆರ್ ಪಕ್ಷ ಸ್ಥಾಪನೆ ಮಾಡಿದ್ದ ಬಿ.ಶ್ರೀರಾಮುಲು ಅವರು ಬಿಜೆಪಿ ಸೇರಿದ್ದಾರೆ.
ಕ್ಷೇತ್ರದ ಮತದಾರರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿದ ಬಳಿಕ ರಾಜೀವ ಅವರು ಈ ಕುರಿತು ತೀರ್ಮಾನ ಕೈಗೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಚಿಹ್ನೆ ಹೊಂದಿರುವ ನಾಲ್ಕು ಸಾವಿರ ಕರಪತ್ರಗಳನ್ನು ಕ್ಷೇತ್ರದಲ್ಲಿ ಜನರಿಗೆ ಹಂಚಲಾಗಿತ್ತು.
ನಿಮ್ಮ ರಾಜೀವ ಯಾವ ಪಕ್ಷದಲ್ಲಿದ್ದರೆ ಉತ್ತಮ ಎಂದು ಪ್ರಶ್ನಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ 90ರಷ್ಟು ಜನರು ಬಿಜೆಪಿ ಸೇರಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ರಾಜೀವ ಅವರು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ.