ಚಾಲಕನ ಸಮಯಪ್ರಜ್ಞೆ: ಕಿತ್ತೂರು ಪಟ್ಟಣದಲ್ಲಿ ತಪ್ಪಿದ ಭಾರೀ ಬಸ್ ದುರಂತ
ಬೆಳಗಾವಿ, ಜೂನ್.14 : ಕೆ.ಎಸ್.ಆರ್.ಟಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಇಂದು ಗುರುವಾರ ನಡೆಯಬೇಕಿದ್ದ ಭಾರೀ ಅನಾಹುತವೊಂದು ತಪ್ಪಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಪ್ರಯಾಣಿಕರು ಈಗ ನಿಟ್ಟುಸಿರು ಬಿಡುತ್ತಿದ್ದಾರೆ.
ಧಾರವಾಡದಿಂದ ಕಿತ್ತೂರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ ಬಸ್ ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿರುವುದು ಚಾಲಕನಿಗೆ ತಿಳಿದು ಬಂದಿದೆ. ಕೂಡಲೇ ಎಚ್ಚೆತ್ತುಕೊಂಡ ಚಾಲಕ ತಕ್ಷಣ ಕೆರೆಯ ಕಟ್ಟೆಗೆ ಬಸ್ ತಿರುಗಿಸಿ ಢಿಕ್ಕಿ ಹೊಡೆಸಿದ್ದಾರೆ.
ಬಸ್ ನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಘಟನೆಯಲ್ಲಿ ಯಾರಿಗೂ ಪ್ರಾಣಪಾಯವಾಗಿಲ್ಲ. ಚಾಲಕನ ಸಮಯ ಪ್ರಜ್ಞೆ, ಕರ್ತವ್ಯ ನಿರ್ವಹಣೆ ಕಂಡು ಇದೀಗ ಸಾರಿಗೆ ಅಧಿಕಾರಿಗಳು ಚಾಲಕನನ್ನು ಪ್ರಶಂಸಿಸುತ್ತಿದ್ದಾರೆ.

ಬಸ್ ನಲ್ಲಿದ್ದ ಪ್ರಯಾಣಿಕರು ಸಹ ಚಾಲಕನ ಸಮಯಪ್ರಜ್ಞೆ ಕೊಂಡಾಡುತ್ತಿದ್ದು, ಮುಂದಾಗುವ ಘಟನೆ ನೆನೆದು ನಿಟ್ಟುಸಿರು ಬಿಡುತ್ತಿದ್ದಾರೆ.
ಕಳೆದ ವಾರವಷ್ಟೆ, ಮಡಿಕೇರಿ ತಾಲೂಕಿನ ಕೋಯನಾಡು ಬಳಿ ಸುಬ್ರಮಣ್ಯದಿಂದ ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಸರ್ಕಾರಿ ಬಸ್ ಎದುರಿಗೆ ಟ್ಯಾಂಕರ್ವೊಂದು ಬಂದಿತ್ತು.
ಈ ಟ್ಯಾಂಕರ್ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು, ಬಸ್ಗೆ ಡಿಕ್ಕಿ ಹೊಡೆಯಲು ಹೊರಟ್ಟಿದ್ದ. ಈ ವೇಳೆ ಎಚ್ಚೆತ್ತ ಸರ್ಕಾರಿ ಬಸ್ ಚಾಲಕ ಅಪಘಾತ ತಪ್ಪಿಸಲು ಹೋಗಿ ರಸ್ತೆಯ ಪಕ್ಕಕ್ಕೆ ಡಿಕ್ಕಿ ಹೊಡೆದಿದ್ದನ್ನು ನೆನಪಿಸಿಕೊಳ್ಳಬಹುದು.












Click it and Unblock the Notifications