ಬೆಳಗಾವಿಯಲ್ಲಿ ಕ್ರೀಡಾ ಅಕಾಡೆಮಿ, ಕುಂಬ್ಳೆ ಮುಂದಾಳತ್ವ
ಬೆಳಗಾವಿ, ಫೆ. 6: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮುೂಡಿಸಿರುವ ಕೆಎಲ್ಇ ಶಿಕ್ಷಣ ಸಂಸ್ಥೆ ಈಗ ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ವಿಶ್ವ ವಿಖ್ಯಾತ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಮುಂದಾಳತ್ವದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಮುಂದಾಗಿದೆ.
ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಡಾ. ಕೋರೆ ಈ ವಿಷಯ ತಿಳಿಸಿದ್ದಾರೆ.
ಕ್ರೀಡಾ ಅಕಾಡೆಮಿ ಸ್ಥಾಪಿಸುವಂತೆ ಸಲಹೆ ನೀಡಿದ್ದು ಅನಿಲ್ ಕುಂಬ್ಳೆ ಅವರು. ಅವರದ್ದೇ ಮುಂದಾಳತ್ವದಲ್ಲಿ ಅಕಾಡೆಮಿ ಸ್ಥಾಪಿಸಲಾಗುವುದು. ಕೆಎಲ್ಇ ಸಂಸ್ಥೆಯಲ್ಲಿ ಈಗಾಗಲೇ ಟೆನ್ನಿಸ್, ಈಜು, ಬ್ಯಾಡ್ಮಿಂಟನ್ ಸೇರಿದಂತೆ ಇತರ ಕ್ರೀಡೆಗಳ ಅಂಗಣಗಳು ಇವೆ ಎಂದು ತಿಳಿಸಿದ್ದಾರೆ.
ಕೆಎಲ್ಇ ಶತಮಾನೋತ್ಸವದ ಹಿನ್ನೆಲೆಯಲ್ಲಿ 18 ತಿಂಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅನಿಲ್ ಕುಂಬ್ಳೆ ಚಾಲನೆ ನೀಡಿದರು. ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ವಿಆರ್ಎಲ್ ಸಮೂಹದ ಆನಂದ ಸಂಕೇಶ್ವರ್ ಶತಮಾನೋತ್ಸವದ ಲಾಂಛನ ಬಿಡುಗಡೆ ಮಾಡಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಕ್ರಿಕೆಟ್ ಆಡಬೇಕೆಂದು ಅನಿಲ್ ಕುಂಬ್ಳೆ ಸಲಹೆ ನೀಡಿದರು. ಜೆಎನ್ಎಂಸಿಯಲ್ಲಿ ನನಗೆ ವೈದ್ಯಕೀಯ ಅಧ್ಯಯನಕ್ಕೆ ಸೀಟ್ ಸಿಕ್ಕಿತ್ತು. ಆದರೆ, ಕ್ರಿಕೆಟ್ ಕಾರಣದಿಂದ ಇಂಜಿನಿಯರಿಂಗ್ ಸೇರಿಕೊಂಡೆ ಎಂದು ನೆನಪಿಸಿಕೊಂಡರು.

ಸಪ್ತರ್ಷಿಗಳ ದೂರದೃಷ್ಟಿ ಮತ್ತು ಡಾ. ಪ್ರಭಾಕರ ಕೋರೆ ಅವರ ಸಮರ್ಥ ನಿರ್ವಹಣೆಯಿಂದ ಕೆಎಲ್ಇ ಸಂಸ್ಥೆ ಈ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಅನಿಲ್ ಕುಂಬ್ಳೆ ಶ್ಲಾಘಿಸಿದರು.
ನಂತರ ಡಾ. ಪ್ರಭಾಕರ ಕೋರೆ ಅವರು ಶತಮಾನೋತ್ಸವದ ಧ್ವಜ ಹಾರಿಸಿದರು. ಅನಿಲ್ ಕುಂಬ್ಳೆ ಜ್ಯೋತಿ ಬೆಳಗಿದರು. ಕೆಎಲ್ಇ ಶತಮಾನೋತ್ಸವ ಹಾಗೂ ಕ್ರೀಡಾ ಅಕಾಡಮಿ ಸ್ಥಾಪನೆ ನಿಮಿತ್ತ ರಸ್ತೆಗಳಲ್ಲಿ ಜ್ಯೋತಿ ಹಿಡಿದು ಜಾಥಾ ನಡೆಸಲಾಯಿತು.












Click it and Unblock the Notifications