ಸುವರ್ಣಸೌಧ ಮುತ್ತಿಗೆಗೆ ಯತ್ನ: ವಾಟಾಳ್ ಬಂಧನ
ಬೆಳಗಾವಿ, ನವೆಂಬರ್ 22 : ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವ ಉದ್ದೇಶ ಸಚಿವರು ಹಾಗೂ ಶಾಸಕರಿಗೆ ಗೊತ್ತಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ನಡೆಸಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬುಧವಾರ ಹೇಳಿದರು.
ಸಂಭಾಜಿ ಪಾಟೀಲ ಅವರನ್ನು ಇರಿಸಿಕೊಂಡು ಅಧಿವೇಶನ ಮಾಡುವುದು ಸೂಕ್ತವಲ್ಲ. ಅವರನ್ನು ಗಡಿಪಾರು ಮಾಡಬೇಕು, ಸದನದಿಂದ ಹೊರಹಾಕಬೇಕು, ಸದನವನ್ನು ಕೂಡಲೇ ವಿಸರ್ಜನೆ ಮಾಡಬೇಕು. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದರು.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ ಆಗಬೇಕಿದ್ದ ಬೆಳಗಾವಿ ಚಳಿಗಾಲದ ಅಧಿವೇಶನ ಈ ಭಾಗದ ಅಭಿವೃದ್ಧಿ ಕುರಿತು ಚರ್ಚೆ ಮಾಡುವಲ್ಲಿ ವಿಫಲಾವಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬುಧವಾರ ಹೇಳಿದರು.
ಸುವರ್ಣಸೌಧದ ಎದುರು ತಮ್ಮ ಕಾರ್ಯಕರ್ತರ ಜತೆ ಆಗಮಿಸಿದ ಅವರು ಶಾಸಕರಿಗೆ ಜವಾಬ್ದಾರಿ ಇಲ್ಲ ವಿರೋಧ ಪಕ್ಷದವರಿಗೆ ಈ ಭಾಗದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ. ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ, ಕಳಸಾ ಬಂಡೂರಿ, ಮಹಾದಾಯಿಯ ಬಗ್ಗೆ ಚರ್ಚೆ ನಡೆಯಲಿಲ್ಲ. ಕರ್ನಾಟಕ ಏಕೀಕರಣದ ನಂತರ ಕರ್ನಾಟಕ ಪ್ರದೇಶ ಸಂಪೂರ್ಣವಾಗಿ ಹಿಂದುಳಿದಿದ್ದು, ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾಡಿದ್ದೇನು ಎನ್ನುವುದರ ಕುರಿತು ಶ್ವೇತ ಪತ್ರ ಹೊರಡಿಸಬೇಕು ಎಂದರು.
ಬೆಳಗಾವಿ ಅಧಿವೇಶನ ಪೂರ್ಣವಾಗಿ ವಿಫಲ ಎಂದು ಕೂಗುತ್ತ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ವಾಟಾಳ್ ನಾಗರಾಜ್ ಮತ್ತು ಕನ್ನಡ ಪರ ಕಾರ್ಯಕರ್ತರನ್ನು ಬಂಧಿಸಿದರು.











Click it and Unblock the Notifications