'ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್ ನೀಡಿದರು, ನಾನು ತಿರಸ್ಕರಿಸಿದೆ'
ಬೆಳಗಾವಿ, ಜೂನ್ 24 : 'ಕೆ.ಸಿ.ವೇಣುಗೋಪಾಲ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್ ನೀಡಿದ್ದರು. ಆದರೆ, ನಾನು ಅದನ್ನು ನಿರಾಕರಿಸಿದೆ' ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, 'ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದಕ್ಕೆ
ನಿಖರವಾದ ಕಾರಣಗಳಿಲ್ಲ. ಮುಂದಿನ ಐದು ವರ್ಷಗಳ ಕಾಲ ನಾನು ಇಂತಹ ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸಮ್ಮಿಶ್ರ ಸರ್ಕಾರದ ಸಂಪುಟ ರಚನೆ ವೇಳೆ ತಮ್ಮನ್ನು ಪರಿಗಣಿಸಿಲ್ಲ ಎಂದು ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದರು. ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

'ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದರೆ ರಾಜ್ಯದ ತುಂಬಾ ಸಂಚಾರ ನಡೆಸಬೇಕು. ಜಿಲ್ಲೆ, ಪಟ್ಟಣಗಳಿಗೆ ಭೇಟಿ ನೀಡಬೇಕು. ಪ್ರಮುಖ ನಾಯಕರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಮಾಡಬೇಕು. ಆದರೆ, ನನಗೆ ಪಕ್ಷ ಸಂಘನೆ ಮಾಡಲು ಯಾವುದೇ ಹುದ್ದೆ ಬೇಡ. ಸತೀಶ್ ಜಾರಕಿಹೊಳಿಯಾಗಿಯೇ ರಾಜ್ಯದ ಜನರು ನನ್ನನ್ನು ಗುರುತಿಸಬೇಕು' ಎಂದು ಅವರು ಹೇಳಿದರು.
'ನನ್ನ ಗಮನವೆಲ್ಲಾ ಉತ್ತರ ಕರ್ನಾಟಕ ಭಾಗದ ಮೇಲಿದೆ. ಈ ಭಾಗದ ಜನರು ಸರಿಯಾದ ಮೂಲ ಸೌಕರ್ಯಗಳಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ನಾನು ರಾಜಕೀಯ ಅಧಿಕಾರದ ಹಿಂದೆ ಬಿದ್ದಿಲ್ಲ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇಲ್ಲಿನ ತಾರತಮ್ಯ ನಿವಾರಣೆ ಮಾಡಲು ಗಮನ ಹರಿಸಬೇಕು' ಎಂದು ಒತ್ತಾಯಿಸಿದರು.












Click it and Unblock the Notifications