ಜಾತ್ಯಾತೀತರನ್ನು ಟೀಕಿಸುವವರ ಅಪ್ಪ 'ಮನು' : ಮಲ್ಲಿಕಾ ಘಂಟಿ
ಹೊಸಪೇಟೆ, ಡಿಸೆಂಬರ್ 26: ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರ ಜಾತ್ಯಾತೀತರಿಗೆ ಅಪ್ಪ-ಅಮ್ಮನ ಗುರುತಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗೆ ಆಕ್ರೋಶದ ಪ್ರತಿಕ್ರಿಯೆಯನ್ನು ಹಂಪಿ ವಿವಿ ಕುಲಪತಿ ಮಲ್ಲಿಕಾ ಎಸ್.ಘಂಟಿ ನೀಡಿದ್ದಾರೆ.
ಹಂಪಿ ವಿ.ವಿ.ಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಮಹಿಳೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಜಾತ್ಯತೀತವಾದಿಗಳಿಗೆ ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವಂರಂತಹಾ ಮಹನೀಯರು ಅಪ್ಪ, ಅಮ್ಮ. ಆದರೆ ಜಾತ್ಯತೀತವಾದಿಗಳನ್ನು ಟೀಕಿಸುವವರಿಗೆ ಮನು ಒಬ್ಬನೇ ಅಪ್ಪ ಎಂದು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಎಸ್.ಘಂಟಿ ತಿಳಿಸಿದರು.

ಬಸವಣ್ಣ, ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ನಾಶ ಮಾಡುವ ಹುನ್ನಾರ ನಡೆದಿದೆ. ಐಕ್ಯತೆಯ ಮರವಾದ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ವರದಿ
ನಗರದಲ್ಲಿನ ಇಲ್ಲಿನ ನೆಹರೂ ಮೈದಾನದಲ್ಲಿ ಮಾತನಾಡಿದ ಸಿಪಿಐ ಹಿರಿಯ ಮುಖಂಡ ಡಾ.ಸಿದ್ದನಗೌಡ ಪಾಟೀಲ ಅವರು 'ಜಾತ್ಯತೀತರ ತಂದೆ ಭಗತ್ ಸಿಂಗ್ ಆದರೆ ನಮ್ಮ ರಕ್ತದ ಗುರುತು ಕೇಳುತ್ತಿರುವ ಕೇಂದ್ರ ಅನಂತಕುಮಾರ್ ಹೆಗ್ಡೆಯ ತಂದೆ ನಾಥೂರಾಮ್ ಗೋಡ್ಸೆ' ಎಂದು ಹರಿಹಾಯ್ದರು.
ಪಕ್ಷದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಬಹಿರಂಗ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ಯತೀತರಿಗೆ ಬುದ್ಧ, ಬಸವಣ್ಣ ತಾತಂದಿರು. ಭಗತ್ ಸಿಂಗ್ ತಂದೆ, ಗಾಂಧಿ ದೊಡ್ಡಪ್ಪ, ಅಂಬೇಡ್ಕರ್ ಚಿಕ್ಕಪ್ಪ, ಪೆರಿಯಾರ್, ನಾರಾಯಣ ಗುರುಗಳು, ಶಿಶುನಾಳ ಶರೀಫರು ಬಂಧುಗಳು ಎಂದರು.
'ದೇಶದಲ್ಲಿ ಮೊಟ್ಟಮೊದಲ ರಾಜಕೀಯ ಕೊಲೆ ನಡೆಸಿದ ಗೋಡ್ಸೆ ವಂಶ ನಿಮ್ಮದು ಎಂದು ಅನಂತ್ ಕುಮಾರ್ ಹೆಗಡೆಗೆ ಛಾಟಿ ಬೀಸಿದ ಅವರು, ಸ್ವಾತಂತ್ರ್ಯ ಹೋರಾಟ ಮಾಡಿದ್ದು ತಪ್ಪು ಎಂದು ಬ್ರಿಟೀಷರಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದ ಸಾವರ್ಕರ್ ವಂಶಸ್ಥರು ನೀವು' ಎಂದು ತಿರುಗೇಟು ನೀಡಿದರು.












Click it and Unblock the Notifications