ಜೋಳಿಗೆ ಒಡ್ಡಿ ಹಣ ಹಾಕಿ ಎಂದ ಗೋಕಾಕ್ ಜೆಡಿಎಸ್ ಅಭ್ಯರ್ಥಿ!
ಬೆಳಗಾವಿ, ನವೆಂಬರ್ 25: ಗೋಕಾಕ್ ಉಪ ಚುನಾವಣೆ ಕಣ ಅತ್ಯಂತ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಜಾರಕಿಹೊಳಿ ಸಹೋದರರ ಮಧ್ಯೆ ನೇರಾ-ನೇರಾ ಸ್ಪರ್ಧೆ ಏರ್ಪಟ್ಟಿದೆ ಆದರೆ ಜೆಡಿಎಸ್ ಅಭ್ಯರ್ಥಿ ಸಹ ಕಡಿಮೆ ಇಲ್ಲ.
ಜೆಡಿಎಸ್ ಅಭ್ಯರ್ಥಿಯಾಗಿ ಅಶೋಕ್ ಪೂಜಾರಿ ಕಣಕ್ಕೆ ಇಳಿದಿದ್ದಾರೆ. ಅಶೋಕ್ ಪೂಜಾರಿ ಅವರು ಭಾವನಾತ್ಮಕವಾಗಿ ಮತಯಾಚನೆಗೆ ತೊಡಗಿದ್ದು, ಜನರ ಗಮನ ಸೆಳೆಯುತ್ತಿದೆ.
ಅಶೋಕ್ ಪೂಜಾರಿ ಅವರು ಜೋಳಿಗೆ ಒಡ್ಡಿ ತಮಗೆ ಒಂದು ರೂಪಾಯಿ ನಾಣ್ಯ ಹಾಕಿ ಜೊತೆಗೆ ಮತದಾನದ ದಿನದಂದು ಮತ ಭಿಕ್ಷೆ ಹಾಕುವಂತೆ ಪ್ರಚಾರ ಮಾಡುತ್ತಿದ್ದಾರೆ. ಅಶೋಕ್ ಪೂಜಾರಿ ಅವರ ಭಾವನಾತ್ಮಕ ಮತಯಾಚನೆಗೆ ಶೈಲಿ ಜನರ ಗಮನ ಸೆಳೆಯುತ್ತಿದೆ.

ಅಶೋಕ್ ಪೂಜಾರಿ ಅವರು ಇಂದು ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಅವರಿಂದ ದೀಕ್ಷೆ ಪಡೆದರು. ದೀಕ್ಷೆ ಪಡೆದ ನಂತರ ಹಣೆಗೆ ವಿಭೂತಿ ಇಟ್ಟು ಕೇಸರಿ ಬಣ್ಣದ ಜೋಳಿಗೆಯನ್ನು ಹೆಗಲಿಗೆ ಹಾಕಿಕೊಂಡು ಮತ ಭಿಕ್ಷೆ ನಡೆಸಿದರು.
ಧೀಕ್ಷೆ ಸ್ವೀಕರಿಸಿದ ನಂತರ ಮಾತನಾಡಿದ ಅಶೋಕ್ ಪೂಜಾರಿ, 'ನಾನು ಲಿಂಗಾಯತ ಕುಟುಂಬದಲ್ಲಿ ಹುಟ್ಟಿದ್ದೇನೆ, ಕಾಯಕದಿಂದ ಜೀವನ, ದಾಸೋಹ ನಮ್ಮ ಸಂಪ್ರದಾಯ' ಎಂದರು.
'ಜೋಳಿಗೆ ಒಡ್ಡಿ ಜೋಳಿಗೆಗೆ ಒಂದು ರೂಪಾಯಿ ನಾಣ್ಯ ಹಾಕಿ, ಮತದಾನದಂದು ನನಗೆ ಮತ ಹಾಕಿ' ಎಂದು ಪೂಜಾರಿ ಇಂದು ಮತಯಾಚನೆ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಪೂಜಾರಿ, 'ನಾನು ಮೂರು ಬಾರಿ ಚುನಾವಣೆಗೆ ನಿಂತು ಆರ್ಥಿಕ ಸಂಕಷ್ಟದಿಂದ ಸೋಲನುಭವಿಸಿದ್ದೇನೆ, ನನ್ನ ಜೋಳಿಗೆಗೆ ಹಣ ಹಾಕಿದರೆ ಅದನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳುತ್ತೇನೆ, ನಾನು ಆರ್ಥಿಕವಾಗಿ ಶಕ್ತನಲ್ಲ ಜನರೇ ಹಣ ನೀಡಿ ನನ್ನನ್ನು ಗೆಲ್ಲಿಸಬೇಕು' ಎಂದರು.
'ನಾನು ಹಣದ ಆಮೀಷಕ್ಕೆ ಒಳಗಾಗಿ ಚುನಾವಣೆಗೆ ನಿಂತಿಲ್ಲ, ನಾನು ಚುನಾವಣೆಗೆ ನಿಂತಿರುವುದು ಜನರ ಸೇವೆ ಮಾಡಲೆಂದು' ಎಂದು ಪೂಜಾರಿ ಹೇಳಿದರು.












Click it and Unblock the Notifications