ಸರ್ಕಾರ ಸ್ಪಂದಿಸದಿದ್ದರೆ ವೃತ್ತಿ ತ್ಯಜಿಸಬೇಕಾಗುತ್ತದೆ ಎಂದು ಕಣ್ಣೀರಿಟ್ಟ ವೈದ್ಯ!
ಬೆಳಗಾವಿ, ನವೆಂಬರ್ 17 : ವೈದ್ಯಕೀಯ ಸೇವೆ ಏಕೆ ಆರಂಭಿಸುತ್ತಿಲ್ಲ ಎಂದು ಎಲ್ಲರೂ ಕೇಳುತ್ತಿದ್ದಾರೆ. ನಮ್ಮನ್ನು ಭಯೋತ್ಪಾದಕರ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಯಾವ ಮನಸ್ಥಿತಿಯೊಂದಿಗೆ ನಾವು ಚಿಕಿತ್ಸೆ ನೀಡಬೇಕು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ನಾವು ನಮ್ಮ ವೃತ್ತಿಯನ್ನು ತ್ಯಜಿಸಬೇಕಾಗುತ್ತದೆ ಎಂದು ಡಾ. ಶಶಿಕಾಂತ ಕುರಕೋಟ ಅವರು ಕಣ್ಣೀರಿಟ್ಟರು.
ಕೆಪಿಎಂಇ ಕಾಯ್ದೆ ವಿಚಾರ ಬೆಳಗಾವಿಯ ಐಎಂಎ ಆವರಣದಲ್ಲಿ ನಡೆಯುತ್ತಿರುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಸೇವೆಯನ್ನು ಯಾಕೆ ಆರಂಭಿಸುತ್ತಿಲ್ಲ ಎಂದು ಎಲ್ಲರೂ ಕೇಳುತ್ತಾರೆ. ರಾಜಕಾರಣಿಗಳ ಆಟಕ್ಕೆ ವೈದ್ಯರು ಮನನೊಂದಿದ್ದಾರೆ.

ರೋಗಿಗಳ ಕಷ್ಟ, ನೋವು ನಮಗೂ ಅರ್ಥವಾಗುತ್ತದೆ. ನಮ್ಮ ಸ್ವಾರ್ಥಕ್ಕೆ ನಾವು ಹೋರಾಟ ಮಾಡುತ್ತಿಲ್ಲ. ನಾವು ತೊಂದರೆ ನೀಡುತ್ತಿದ್ದೇವಾ ಅಥವಾ ರಾಜಕಾರಣಿಗಳು ನೀಡುತ್ತಿದ್ದಾರಾ ಎನ್ನುವುದನ್ನು ತಿಳಿಸಿ. ಪ್ರತಿಯೊಬ್ಬರು ವೈದ್ಯರದ್ದೇ ತಪ್ಪು ಎಂದು ಬಿಂಬಿಸುತ್ತಿದ್ದಾರೆ.
ನಾನು ಈ ಬಿಲ್ ಪಾಸ್ ಮಾಡುತ್ತೇನೆ ಎಂದು ಆರೋಗ್ಯ ಸಚಿವರು ಹೇಳುತ್ತಾರೆ, ಆದರೆ ವೈದ್ಯರಿಗೆ ಆಗುತ್ತಿರುವ ಕಷ್ಟಗಳು ಅವರಿಗೆ ಗೋಚರಿಸುತ್ತಿಲ್ಲ. ವೆಸ್ಟ್ ಬೆಂಗಾಲ್ ಕಾಯ್ದೆಯನ್ನು ಇಲ್ಲಿಗೆ ತರಲಾಗುತ್ತಿದೆ. ೨೦೧೦ರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ್ದು ಮಾಡೋದು ಬಿಟ್ಟು ಇದನ್ನು ತರುವುದು ಸರಿಯಿಲ್ಲ.

ಬೆಳಗಾವಿಯಲ್ಲಿ ಪ್ರತಿಭಟನೆ ಕೇಂದ್ರಬಿಂದುವಾಗಿದೆ. ನಮ್ಮ ನೋವನ್ನು ಮಾಧ್ಯಮದ ಮುಂದೆ ತೋಡಿಕೊಳ್ಳಲು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ. ಸರ್ಕಾರ ಇದೇ ಕಾನೂನು ಜಾರಿಗೆ ತಂದರೆ ನಾವು ಈ ವೃತ್ತಿಯನ್ನು ಬಿಡುತ್ತೇವೆ. ನಾವು ಸಮಾಜದ ನಾಗರಿಕರು ನಮಗೆ ನ್ಯಾಯ ಒದಗಿಸಿ ಎಂದು ಡಾ. ಶಶಿಕಾಂತ್ ಅವರು ಮನವಿ ಮಾಡಿದರು.
ನಮ್ಮನ್ನ ಮಾತುಕಥೆಗೆ ಕರೆಯಬಹುದು ಎಂದು ಬೆಳಗಾವಿ ಸುವರ್ಣ ಸೌಧದ ಹೊರಗಡೆ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದೇವೆ. ಆದರೆ ಇನ್ನು ಸರ್ಕಾರ ಕರೆಯುತ್ತಿಲ್ಲ. ವೈದ್ಯರುಗಳನ್ನು ಭಯೋತ್ಪಾದಕರು ಎಂದು ಕರೆಯುತ್ತಿರುವಾಗ ನಾವು ಜನರಿಗೆ ಯಾವ ಮನಸ್ಥಿತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಮಾಧ್ಯಮದ ಎದುರಿಗೆ ಭಾವನಾತ್ಮಕವಾಗಿ ಕಣ್ಣೀರಿಟ್ಟರು.












Click it and Unblock the Notifications