ಜಾರಕಿಹೊಳಿ ಸಹೋದರರ ವಿರುದ್ಧ ಡಿ.ಕೆ.ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್
Recommended Video

ಬೆಳಗಾವಿ, ಡಿಸೆಂಬರ್ 18: ಜಾರಕಿಹೊಳಿ ಸಹೋದರರ ಮೇಲೆ ರಾಜಕೀಯ ಬಾಣಗಳನ್ನು ಎಸೆಯುತ್ತಿರುವ ಡಿ.ಕೆ.ಶಿವಕುಮಾರ್ ಇದೀಗ ಡಿನ್ನರ್ ಪಾಲಿಟಿಕ್ಸ್ ಬಾಣವನ್ನು ಜಾರಕಿಹೊಳಿ ಸಹೋದರರ ಮೇಲೆ ಎಸೆದಿದ್ದಾರೆ.
ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆದಾಗ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಶಾಸಕರಿಗೆ ಔತಣ ಕೂಟ ಏರ್ಪಡಿಸುತಿದ್ದರು. ಆದರೆ ಈ ಬಾರಿ ಆ ಕೆಲಸವನ್ನು ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ.
ಇಂದು ಡಿ.ಕೆ.ಶಿವಕುಮಾರ್ ಅವರು ಔತಣಕೂಟ ಏರ್ಪಡಿಸಿದ್ದು, ಜಾರಕಿಹೊಳಿ ಸಹೋದರರು ಸೇರಿದಂತೆ ಎಲ್ಲ ಶಾಸಕರಿಗೂ ಬುಲಾವ್ ಹೋಗಿದೆ. ಆದರೆ ಜಾರಕಿಹೊಳಿ ಸಹೋದರರು ಇದರಲ್ಲಿ ಭಾಗವಹಿಸುವುದು ಅನುಮಾನ.
ರಮೇಶ್ ಜಾರಕಿಹೊಳಿ ಅವರಂತೂ 'ನಾನು ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿರುವ ಡಿಕೆಶಿ
ಇತ್ತೀಚೆಗಷ್ಟೆ ಬೆಳಗಾವಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರು. ಇದು ಸಹ ಜಾರಕಿಹೊಳಿ ಸಹೋದರರ ಮೇಲೆ ರಾಜಕೀಯವಾಗಿ ಗೆಲ್ಲುವ ತಂತ್ರವೆಂದೇ ವಿಶ್ಲೇಷಿಸಲಾಯಿತು. 'ನೀರು ಕುಡಿಸಿದ ಕೂಡಲೇ ಡಿಕೆಶಿ ದೊಡ್ಡ ಲೀಡರ್ ಆಗುತ್ತಾರಾ" ಎಂದು ರಮೇಶ್ ಜಾರಕಿಹೊಳಿ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು.

ಜಾರಕಿಹೊಳಿ ಬದಲಿಗೆ ಡಿಕೆಶಿ ಔತಣಕೂಟ ಆಯೋಜನೆ
ಜಾರಕಿಹೊಳಿ ಸಹೋದರರು ಆಯೋಜಿಸುತ್ತಿದ್ದ ಔತಣಕೂಟವನ್ನು ಅದೇ ಸ್ಥಳದಲ್ಲಿ ಡಿ.ಕೆ.ಶಿವಕುಮಾರ್ ಆಯೋಜಿಸಿ ರಮೇಶ್ ಬೆಂಬಲಿತ ಶಾಸಕರನ್ನೂ ಕರೆದಿರುವುದು, ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಬೇರು ಅಲುಗಿಸಿ, ತಾವು ಬೇರೂರುವ ಯತ್ನ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ ಎಂದೇ ಪರಿಗಣಿಸಲಾಗುತ್ತಿದೆ.

ಡಿ.ಕೆ.ಶಿವಕುಮಾರ್ ವಿರೋಧ ಕಟ್ಟಿಕೊಂಡ ಜಾರಕಿಹೊಳಿ
ಡಿ.ಕೆ.ಶಿವಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದ ಜಾರಕಿಹೊಳಿ ಸಹೋದರರು ಲಕ್ಷ್ಮಿ ಹೆಬ್ಬಾಳ್ಕರ್ ವಿಷಯವಾಗಿ ಅವರ ವಿರೋಧ ಕಟ್ಟಿಕೊಂಡರು. ಬೆಳಗಾವಿಯ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬೆಂಬಲ ನೀಡಿದ್ದು ಸಹೋದರರಿಗೆ ಪಥ್ಯವಾಗಲಿಲ್ಲ.

ಡಿ.ಕೆ.ಶಿವಕುಮಾರ್ ವಿರುದ್ಧ ದೂರು ನೀಡಿದ್ದರು
ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ರಾಜಕೀಯದಲ್ಲಿ ತಲೆ ಹಾಕಬಾರದು ಎಂದು ಜಾರಕಿಹೊಳಿ ಸಹೋದರರು ಕೆಪಿಸಿಸಿ ನಾಯಕರು ಹಾಗೂ ಹೈಕಮಾಂಡ್ ಬಳಿ ದೂರು ನೀಡಿದ್ದರು. ಇದಕ್ಕೆ ಆಗ ಮೌನದ ಪ್ರತಿಕ್ರಿಯೆ ನೀಡಿದ್ದ ಡಿ.ಕೆ.ಶಿವಕುಮಾರ್ ಆ ನಂತರ ಒಂದೊಂದೇ ರಾಜಕೀಯ ದಾಳಗಳನ್ನು ಉರುಳಿಸುತ್ತಾ ಜಾರಕಿಹೊಳಿ ಸಹೋದರರಿಗೆ ಹಿನ್ನಡೆ ಆಗುವಂತೆ ಮಾಡುತ್ತಿದ್ದಾರೆ.












Click it and Unblock the Notifications