ಮತಾಂತರ ನಿಷೇಧ ಕಾಯ್ದೆ ಚರ್ಚೆ: ಧರ್ಮವಾರು ಜನಸಂಖ್ಯೆಯ ಅಂಕಿಅಂಶ ನೀಡಿದ ಸಿದ್ದರಾಮಯ್ಯ
ಬೆಳಗಾವಿ, ಡಿಸೆಂಬರ್ 23: ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಸದನದಲ್ಲಿ ತಮ್ಮ ವಾದ ಮಂಡಿಸಿದ ಸಿದ್ದರಾಮಯ್ಯ, "ಪಂಪ ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಿ. ನಂತರ ಜೈನ ಧರ್ಮಕ್ಕೆ ಮತಾಂತರವಾದರು. ರನ್ನ ಹುಟ್ಟಿದ್ದು ಬ್ರಾಹ್ಮಣ ಜಾತಿಯಲ್ಲಿ, ಜೈನ ಧರ್ಮಕ್ಕೆ ಮತಾಂತರವಾದರು. ಡಾ.ಬಿ.ಆರ್. ಅಂಬೇಡ್ಕರ್ ಬೌದ್ಧ ಮತಕ್ಕೆ ಸೇರಿದರು. ರಾಜ ಮಹಾರಾಜರು ಮತಾಂತರವಾಗಿದ್ದಾರೆ".
"ದೇಶದಲ್ಲಿ ದಲಿತರಾಗಲಿ, ಶೂದ್ರರಾಗಲಿ ಮತಾಂತರವಾಗಿಲ್ಲ. ಅಧಿಕಾರಕ್ಕಾಗಿ ಯಾರೂ ಮತಾಂತರವಾಗಿಲ್ಲ. ಮತಾಂತರದಿಂದ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ನಾನು ಸದನಕ್ಕೆ ಕೆಲ ಅಂಕಿ- ಅಂಶ ನೀಡುತ್ತೇನೆ," ಎಂದು ಸಿದ್ದರಾಮಯ್ಯ ಅಂಕಿ- ಅಂಶ ಮಾಹಿತಿ ನೀಡಿದ್ದಾರೆ.

ಹಿಂದೂಗಳು 2001ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.83.86ರಷ್ಟಿದ್ದರು. 2011ರಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 84ರಷ್ಟು ಆಗಿದೆ. ಹಿಂದೂಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
"ಮುಸ್ಲಿಮರು 2001ರಲ್ಲಿ ಶೇಕಡಾ 12.23ರಷ್ಟು ಇದ್ದರು. 2011ರಲ್ಲಿ ಶೇಕಡಾ 12.92ರಷ್ಟು ಆಗಿದ್ದರು, ಅವರು ಹೆಚ್ಚಾಗಿದ್ದಾರೆ. 2001ರಲ್ಲಿ ಕ್ರೈಸ್ತರು ಒಟ್ಟು ಜನಸಂಖ್ಯೆಯಲ್ಲಿ ಶೇ.1.91ರಷ್ಟು ಇದ್ದರು. 2011ರಲ್ಲಿ ಕ್ರೈಸ್ತರು ಒಟ್ಟು ಜನಸಂಖ್ಯೆಯಲ್ಲಿ ಶೇ.1.87ರಷ್ಟು ಆಗಿದ್ದಾರೆ. ಕ್ರೈಸ್ತರ ಸಂಖ್ಯೆ ಎಲ್ಲಿ ಹೆಚ್ಚಾಗಿದೆ," ಎಂದು ವಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.

ಶಾಸಕ ಗೂಳಿಹಟ್ಟಿ ಶೇಖರ್ ಮತಾಂತರ ಬಗ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಂಯ್ಯ, ''ತಮ್ಮ ತಾಯಿಯನ್ನು ಮತಾಂತರ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ಎಲ್ಲಾದರೂ ಪ್ರಕರಣ ದಾಖಲಾಗಿದೆಯಾ?'' ಎಂದು ಕೇಳಿದರು.
ಧರ್ಮವಾರು ಜನಸಂಖ್ಯೆ ಕುರಿತು ಸಿದ್ದರಾಮಯ್ಯ ಮಾಹಿತಿ
ಈ ಮೊದಲು ತಾವು ಹೇಳಿದ್ದು ರಾಜ್ಯದ ಗಣತಿ ಎಂದು ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, "2001ರಲ್ಲಿ ಹಿಂದೂಗಳು ಸಂಖ್ಯೆ 4,43,21,279ರಷ್ಟಿತ್ತು. 2011ರಲ್ಲಿ ಹಿಂದೂಗಳ ಸಂಖ್ಯೆ 5,13,17,472ರಷ್ಟಾಗಿದೆ," ಎಂದರು.
"ರಾಜ್ಯದಲ್ಲಿ ಶಾಂತಿ ಕಾಪಾಡಲು ಮಸೂದೆ ತಂದಿದ್ದೇವೆ ಎನ್ನುತ್ತಾರೆ, ಬೆಂಗಳೂರಿನ ಆರ್ಚ್ ಬಿಷಪ್ ಒಂದು ಮಾತು ಹೇಳಿದ್ದಾರೆ. ಕ್ರೈಸ್ತರು ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ಹಲವು ಹಿಂದೂ ಮಕ್ಕಳು ಕೂಡ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರನ್ನೆಲ್ಲಾ ಬಲವಂತವಾಗಿ ಮತಾಂತರ ಮಾಡುತ್ತಿದ್ದಾರಾ,?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಆರ್. ಅಶೋಕ್ ಶಾಲೆಗೆ ಹೋಗುತ್ತಿರುವ ಮಕ್ಕಳ ಮತಾಂತರ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅದನ್ನು ಉಲ್ಲೇಖಿಸಿದ್ದಾರೆ. ಅದಕ್ಕೆ ಚಾರ್ಜ್ಶೀಟ್ ಹಾಕಿ, ಅಪರಾಧಿಗಳಿಗೆ ಶಿಕ್ಷೆ ಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಇದಕ್ಕಾಗಿಯೇ ಬಿಲ್ ತರುತ್ತಿರುವುದು ಎಂದು ಆರ್. ಅಶೋಕ್ ತಕ್ಷಣ ಪ್ರತಿಕ್ರಿಯೆ ನೀಡಿದರು. ಈಗಾಗಲೇ ಕಾನೂನು ಇದೆಯಲ್ಲಾ ಎಂದ ಸಿದ್ದರಾಮಯ್ಯ ಮರು ಹೇಳಿಕೆಗೆ ''ಈ ಹಿಂದೆ ಶಿಕ್ಷೆ ಪ್ರಮಾಣ ಕಡಿಮೆ ಇದೆ'' ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಶಿಕ್ಷೆಯ ಪ್ರಮಾಣ ಹೆಚ್ಚಿಸುತ್ತಿದ್ದೇವೆ ಎಂದು ಸಚಿವರು ಉತ್ತರಿಸಿದ್ದಾರೆ.
ಸಿದ್ದರಾಮಯ್ಯ ನೀಡಿದ ಅಂಕಿಅಂಶ ತಪ್ಪು ಎಂದ ಬಿಜೆಪಿ ಶಾಸಕ ಪಿ. ರಾಜೀವ್
ಧರ್ಮಾಧಾರಿತ ಜನಸಂಖ್ಯೆಯನ್ನು ಸದನದಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಇದಕ್ಕೆ ಆಧಾರ ಯಾವುದು ಎಂದು ಆಡಳಿತ ಪಕ್ಷದವರು ಆಕ್ಷೇಪ ಎತ್ತಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಸಾಮಾಜಿಕ ಜಾಲತಾಣದ ಮಾಹಿತಿ ಆಧರಿಸಿ ಸೆನ್ಸೆಕ್ಸ್ ವರದಿಯ ಮಾಹಿತಿ ನೀಡಿದ್ದೇನೆ. ಸೆನ್ಸೆಕ್ಸ್ ವರದಿಯನ್ನು ನಾನು ಓದಿಲ್ಲ ಎಂದಿದ್ದಾರೆ. ಇದಕ್ಕೆ ಆಡಳಿತ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದು, ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಪಿ. ರಾಜೀವ್, "ಹಿಂದೂಗಳು 2001ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.83.86ರಷ್ಟಿದ್ದರು. 2011ರಲ್ಲಿ ಹಿಂದೂಗಳ ಸಂಖ್ಯೆ ಶೇಕಡಾ 79.80ರಷ್ಟು ಆಗಿದೆ," ಎಂದು ಸರ್ಕಾರದ ದಾಖಲೆಯನ್ನು ಉಲ್ಲೇಖಿಸಿದರು.
ಗುಜರಾತ್, ಕರ್ನಾಟಕದ ವಿಧೇಯಕಗಳಲ್ಲಿ ಒಂದೇ ಪದಗಳಿವೆ; ಇದರ ಹಿಂದೆ ಯಾರಿದ್ದಾರೆ?
"ಪ್ರೀತಿಸಿ ಮದುವೆಯಾದವರನ್ನು ಪ್ರಶ್ನಿಸಲು ನೀವ್ಯಾರು ಎಂದು ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ ಎಂದು ಸಿದ್ದರಾಮಯ್ಯ ಚರ್ಚೆಯಲ್ಲಿ ಪ್ರಸ್ತಾಪಿಸಿದರು. ಮದುವೆಯಾಗುವುದು ಅವರವರ ಹಕ್ಕು. ಹೀಗಾಗಿ ಗುಜರಾತ್ನಲ್ಲಿ ಆ ಬಿಲ್ಗೆ ಸ್ಟೇ ತಂದಿದ್ದಾರೆ. ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಈ 4 ರಾಜ್ಯದಲ್ಲಿ ಒಂದು ಬಿಲ್ ತಂದಿದ್ದಾರೆ. ನಾಲ್ಕೂ ಕಡೆಯೂ ಕಟ್ ಆ್ಯಂಡ್ ಪೇಸ್ಟ್ ಮಾಡಿದ್ದಾರೆ," ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
"ಗುಜರಾತ್ ಸರ್ಕಾರಕ್ಕೆ ಕರಡು ಪ್ರತಿ ರಚಿಸಿಕೊಟ್ಟವರು, ಕರ್ನಾಟಕಕ್ಕೆ ಕರಡು ಪ್ರತಿ ರಚಿಸಿಕೊಟ್ಟವರು ಒಂದೇ ಅನಿಸುತ್ತಿದೆ. ಅಲ್ಲೂ, ಇಲ್ಲೂ ಒಂದೇ ರೀತಿಯ ಪದಗಳು ಇವೆ. ಸೆಕ್ಷನ್ 3, 5, 12ನಲ್ಲಿ ಒಂದೇ ರೀತಿಯ ಪದಗಳು ಇವೆ, ಯಾರು ಈ ಕರಡು ಪ್ರತಿ ರಚಿಸಿದವರು," ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕರಡು ಹಿಂದೆ ಬೇರೆ ಯಾರೋ ಇದ್ದಾರೆ ಅನಿಸುತ್ತಿದೆ. ಯಾರೋ ಡಿಕ್ಟೇಟ್ ಮಾಡಿದಂತೆ ಕರಡು ರಚನೆ ಮಾಡಿದಂತಿದೆ. ಬಲವಂತ, ಮೋಸ, ಆಮಿಷದ ಮತಾಂತರ ಕಾನೂನು ವಿರೋಧಿ. ಸಂವಿಧಾನದಲ್ಲಿಯೇ ಈ ಬಗ್ಗೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications