ಸುವರ್ಣಸೌಧ ರಾಜಕೀಯಕ್ಕೆ ಮಾತ್ರವಲ್ಲ ಪ್ರತಿಭಟನೆಗಳಿಗೂ ಫೇಮಸ್ಸು
ಬೆಳಗಾವಿ, ನವೆಂಬರ್ 17 : ಕಲಾಪದ ಅವಧಿ ರಾಜಕೀಯ ಚರ್ಚೆಗಳಿಗೆ, ರಾಜಕಾರಣಿಗಳ ಪರಸ್ಪರ ಕೆಸರೆರಚಾಟಕ್ಕೆ, ಅಲ್ಪ ಸ್ವಲ್ಪ ಅಭಿವೃದ್ಧಿ ಕುರಿತ ಮಾತುಕತೆಗೆ ಮೀಸಲಾದ ಸಮಯ ಎಂದರೆ ತಪ್ಪಾಗುತ್ತದೆ. ಇದರಿಂದ ಪ್ರತಿಭಟನಾಕಾರರಿಗೆ ಕೋಪವೂ ಬರಬಹುದು.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ಕಲಾಪದ ಅವಧಿ ರಾಜಕಾರಣಿಗೆ ಮಾತ್ರವಲ್ಲ ಪ್ರತಿಭಟನಾಕಾರರಿಗೂ ತಮ್ಮ ಒತ್ತಾಯ ಹೇರಲು ಪ್ರಶಸ್ತವಾದ ಸಮಯ. ಹಾಗಾಗಿಯೇ ಕಲಾಪ ನಡೆಯುವ ಅಷ್ಟೂ ದಿನ ಇಂತಿಂಥಹಾ ಸಂಘಟನೆಗಳು ಪ್ರತಿಭಟನೆ ಮಾಡುತ್ತೇವೆಂದು ಮೊದಲೇ ಪೊಲೀಸರ ಬಳಿ ಅನುಮತಿ ಪಡೆದು ಬಿಡುತ್ತಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಲಾಪ ನಡೆಯುವ ಹತ್ತೂ ದಿನವೂ ಸುವರ್ಣಸೌಧ ಹಲವಾರು ವಿವಿಧ ರೀತಿಯ ಪ್ರತಿಭಟನೆಗಳಿಗೆ ಸಾಕ್ಷಿಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರತಿಭಟನೆಗಳು ಸುವರ್ಣಸೌಧ ಮುಂದೆ ನಡೆಯಲಿದೆಯಂತೆ.
ಅಧಿವೇಶನ ಪ್ರಾರಂಭವಾಗಿ ಮೂರು ದಿನಗಳಲ್ಲೇ ಹಲವಾರು ಪ್ರತಿಭಟನೆಗಳು ಸುವರ್ಣಸೌಧದ ಮುಂದೆ ನಡೆದಿವೆ. ಮೊನ್ನೆ ಕುರುಬ ಜನಾಂಗದವರು ಕುರಿಗಳನ್ನು ಸುವರ್ಣಸೌಧದ ಅಂಗಳಕ್ಕೆ ತಂದು ಮಾಡಿದ ಪ್ರತಿಭಟನೆ ಗಮನ ಸೆಳೆದಿದೆ. ಮಹಾದಾಯಿ ಹೊರಾಟಗಾರರ ಪ್ರತಿಭಟನೆ, ರೈತ ಸಂಘದ ಹೋರಾಟಗಳು ಗಮನ ಸೆಳೆದವು. ವೈದ್ಯರ ಪ್ರತಿಭಟನೆಯಂತೂ ದೇಶದ ಗಮನವನ್ನೇ ಸೆಳೆದುಬಿಟ್ಟಿವೆ.
ಆದರೆ ಇವುಗಳನ್ನು ಬಿಟ್ಟು ಇನ್ನೂ ಹಲವು ಜನ ತಮ್ಮ ಧನಿ ಸರ್ಕಾರಕ್ಕೆ ತಲುಪುಲೆಂಬ ಉದ್ದೇಶದಿಂದ ಸುವರ್ಣಸೌಧದ ಮುಂದೆ ಚೀರುತ್ತಿದ್ದಾರೆ. ಇವರ ಮೇಲೆ ಮಾಧ್ಯಮಗಳ ಕ್ಯಾಮೆರಾಗಳ ಬೆಳಕು ಬೀಳುವುದಿಲ್ಲ. ಏಕೆಂದರೆ ಇವರೆಲ್ಲ ಹಣವಂತರಲ್ಲ. ಯಾವ ರಾಜಕೀಯ ಹಿತಾಸಕ್ತಿ ಇವರಿಗಿಲ್ಲ, ಸಮಾಜದಲ್ಲಿ ತಾವೂ ಎಲ್ಲರಂತೆ ಬದುಕುವ ಹಕ್ಕನ್ನು ತಮಗೆ ನೀಡಿರೆಂದು ಕೇಳಲಷ್ಟೆ ಬಂದಿದ್ದಾರೆ ಇವರು.
ಬನ್ನಿ, ಇಂದು (ನವೆಂಬರ್ 17) ರಂದು ಸುವರ್ಣಸೌಧದ ಎದುರು ಯಾವ ಯಾವ ಸಂಘಟನೆಗಳು ಯಾವ ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದವು ತಿಳಿಯಲು ಮುಂದೆ ಓದಿ...

ಸಂಗೀತ ಶಿಕ್ಷಕರ ನೇಮಕಕ್ಕೆ ಒತ್ತಾಯ
ಸಂಗೀತ ಶಿಕ್ಷಕರ ಹುದ್ದೆಗಳಿಗೆ ಕೂಡಲೇ ನೇಮಕ ಮಾಡಬೇಕು ಎಂದು ಒತ್ತಾಯಿಸಿ ಸಂಗೀತ ಪದವೀಧರರು ಸುವರ್ಣಸೌಧದ ಮುಂದೆ ಹಾಡುಗಳನ್ನು ಹಾಡಿ ಪ್ರತಿಭಟನೆ ಮಾಡಿದರು. ರಾಜ್ಯ ನಿರುದ್ಯೋಗಿ ಸಂಗೀತ ಪದವೀಧರರ ಸಮಿತಿಯು ಈ ಪ್ರತಿಭಟನೆ ಮಾಡಿತು.ಹೀಗೆ ಹಾಡುಗಳಿಂದ ಮನರಂಜಿಸಿದರೆ ಇನ್ನಷ್ಟು ದಿನ ಪ್ರತಿಭಟನೆ ಮಾಡಿ ಎನ್ನುತ್ತಾರೆಯೇ ವಿನಃ ಕೆಲಸವೆಲ್ಲಿ ಕೊಡುತ್ತಾರೆ ಎಂಬುದು ಅಲ್ಲಿ ಕೇಳಿ ಬಂದ ಕುಚೋದ್ಯ.

ಪ್ರಧಾನಿ ಮಧ್ಯ ಪ್ರವೇಶಕ್ಕೆ ಮನವಿ
ಮಹದಾಯಿ ವಿವಾದ ಬಗೆಹರಿಸಬೇಕು. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಭಾರತೀಯ ರಿಪಬ್ಲಿಕನ್ ಪಕ್ಷದಿಂದ ಸುವರ್ಣಸೌಧದ ಬಳಿಯ ಕೊಂಡಸಕೊಪ್ಪ ಗ್ರಾಮದ ಗುಡ್ಡದಲ್ಲಿ ಪ್ರತಿಭಟನೆ ನಡೆಸಲಾಯಿತು.

ದೇವರ ಹೆಸರಲ್ಲಿ ಜೀವ ತೇದವರಿಗೆ ಬದುಕುವ ಅವಕಾಶ ನೀಡಿ
ದೇವರು, ಸಂಪ್ರದಾಯದ ಹೆಸರಿನಲ್ಲಿ ಜೀವ ತೇದಿರುವ ಮಾಜಿ ದೇವದಾಸಿಯರಿಗೆ ಉಚಿತವಾಗಿ ಎರಡು ಎಕರೆ ಜಮೀನು ನೀಡಿ ಅವರ ಬದುಕಿಗೆ ಆಸರೆ ಆಗಬೇಕೆಂದು ಒತ್ತಾಯಿಸಿ ದಲಿತ ಸೇನಾ ಸಮಿತಿಯಿಂದ ಪ್ರತಿಭಟನೆ ಮಾಡಿದರು.(ಚಿತ್ರ: ನ್ಯಾಷನಲ್ ಮ್ಯೂಸಿಯಮ್ ಲಿವರ್ ಫೂಲ್)

ಕಲ್ಯಾಣಮ್ಮ ಗದ್ದುಗೆ ಅಭಿವೃದ್ಧಿ ಸಮಿತಿ ಒತ್ತಾಯ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡಿಯಲ್ಲಿರುವ ಶರಣ ಸಮಗಾರ ಹರಳಯ್ಯ ಅವರ ಪತ್ನಿ ಕಲ್ಯಾಣಮ್ಮ ಸಮಾಧಿ ಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸುವಂತೆ ಕಲ್ಯಾಣಮ್ಮ ಗದ್ದುಗೆ ಅಭಿವೃದ್ಧಿ ಸಮಿತಿಯಿಂದ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.

ಶಿಕ್ಷಣದ ಹಣತೆ ಬೆಳಗಿದವರು ಕತ್ತಲಲ್ಲಿ
ಸಾಕ್ಷರತಾ ಆಂದೋಲನದ ಪ್ರಮುಖ ಆಧಾರ ಸ್ಥಂಭಗಳೆಂದು ಕರೆಸಿಕೊಂಡಿದ್ದ ಸಾಕ್ಷರತಾ ಪ್ರೇರಕರು ಹಾಗೂ ಸಂಯೋಜಕರನ್ನು ಮರುನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ರಾಜ್ಯ ಸಾಕ್ಷರತಾ ಪ್ರೇರಕ ಹಾಗೂ ಸಂಯೋಜಕರ ಸಂಘ ಪ್ರತಿಭಟನೆ ಮಾಡಿದರು. ಇದರ ಜೊತೆಗೆ ವಸತಿ ಶಾಲೆಗಳ ಶಿಕ್ಷಕರು ಹಾಗೂ ಪ್ರಾಂಶುಪಾಲರಿಗೆ ಕುಮಾರ ನಾಯಕ ವರಿಯಂತೆ ವಿಶೇಷ ವೇತನ, ಬಡ್ತಿಯನ್ನು ೨೦೧೬ರ ಜೂನ್ ನಿಂದಲೇ ಪೂರ್ವಾನ್ವಯ ಆಗುವಂತೆ ಜಾರಿ ಮಾಡಬೇಕು ಎಂದು ಒತ್ತಾಯಿಸಿ ವಸತಿ ಶಾಲೆಗಳ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಹಡಪದ, ಕೊರಮ, ಕೊರಚ ಸಮುದಾಯದಿಂದ ಒತ್ತಾಯ
ಹಡಪದ ಸಮಾಜ ಹಾಗೂ ಕೊರಮ ಹಾಗೂ ಕೊರಚ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಹಡಪದ ಹೋರಾಟ ಯುವಸೇನೆ ಹಾಗೂ ಕೊರಚ, ಕೊರಮ ಸಮುದಾಯದವರು ಪ್ರತ್ಯೇಕ ಪ್ರತಿಭಟನೆ ಮಾಡಿದರು.












Click it and Unblock the Notifications