ಸೂರ್ಯ-ಚಂದ್ರ ಇರುವ ತನಕ ಬೆಳಗಾವಿ ಕರ್ನಾಟಕದ್ದೇ: ಡಿಸಿಎಂ ಸವದಿ
ಬೆಳಗಾವಿ, ನವೆಂಬರ್ 1: ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಸಚಿವರು ಖ್ಯಾತೆ ತೆಗೆದಿರುವ ಹಿನ್ನೆಲೆ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬೆಳಗಾವಿಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸೂರ್ಯ-ಚಂದ್ರ ಇರುವ ತನಕ ಬೆಳಗಾವಿ ಕರ್ನಾಟಕ ರಾಜ್ಯದ್ದೇ, ಮಹಾರಾಷ್ಟ್ರದವರು ಏನೇ ಹೇಳಿದರು ಬೆಳಗಾವಿ ನಮ್ಮದೇ ಎಂದು ಮಹಾರಾಷ್ಟ್ರ ಸಚಿವರಿಗೆ ಡಿಸಿಎಂ ಲಕ್ಷ್ಮಣ್ ಸವದಿ ತಿರುಗೇಟು ಕೊಟ್ಟಿದ್ದಾರೆ.
ಮಹಾರಾಷ್ಟ್ರ ತೀಟೆ ತೀರಿಸಿಕೊಳ್ಳಲು ಈ ರೀತಿ ಮಾತನಾಡುತ್ತಾರೆ, ಒಂದು ಸಂಘಟನೆಗಾಗಿ ಮಹಾರಾಷ್ಟ್ರ ನಾಯಕರು ಹೀಗೆ ಮಾಡುತ್ತಿದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶ ಅವರದ್ದಾಗಿದ್ದು, ಕೇವಲ ನವೆಂಬರ್ ಒಂದರಂದು ಮಾತ್ರ ಅವರ ಹಾರಾಟ, ಚೀರಾಟವಿರುತ್ತದೆ ಎಂದು ಹೇಳಿದರು.

ಮಹಾರಾಷ್ಟ್ರದವರು ನಮ್ಮ ಕನ್ನಡ ನೆಲದಲ್ಲಿ ನಿಂತು ಹೇಳಿಕೆ ನೀಡಿದರೆ ನಾವು ತಿರುಗೇಟು ಕೊಡುತ್ತೇವೆ, ಅವರ ನೆಲದಲ್ಲಿ ಕುಳಿತು ಹೇಡಿಯ ಹಾಗೆ ಈ ರೀತಿ ಹೇಳಿಕೆ ನೀಡಿದರೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದರು.
ಇಲ್ಲಿದ್ದೂ ಕನ್ನಡ ನೆಲದ ವಿರುದ್ಧ ಯಾರೇ ಮಾತನಾಡಿದರೂ ಕರ್ನಾಟಕ ಸರ್ಕಾರ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತದೆ. ಆಗಲಾರದ ಕೆಲಸಕ್ಕೆ ಅವರು ಹೇಳಿಕೆ ನೀಡಿದರೆ ನಾವೇಕೆ ತಲೆಕೆಡಿಸಿಕೊಳ್ಳಬೇಕು. ಆನೆ ಹೊರಟರೆ ನಾಯಿ ಬೊಗಳುತ್ತವೆ. ಅದಕ್ಕೆ ನಾವು ಚಿಂತಿಸಬೇಕಿಲ್ಲ ಎಂದು ತಿಳಿಸಿದರು.
ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿರೋಧಿಸಿ ಎಂಇಎಸ್ ನ ಕರಾಳ ದಿನಾಚರಣೆ ಮಾಡುವುದಕ್ಕೆ ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡಿತ್ತು.
ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರ್ಕಾರ ನಿರಂತರ ಅನ್ಯಾಯ, ದಬ್ಬಾಳಿಕೆ ಮಾಡುತ್ತಿದೆ. ಮರಾಠಿ ಭಾಷಿಕರ ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರದಿಂದ ಕಾನೂನು ಹೋರಾಟ ನಡೆಯಲಿದೆ ಎಂದು ಮಹಾರಾಷ್ಟ್ರ ಸಚಿವ ಏಕನಾಥ ಶಿಂಧೆ ಹೇಳಿಕೆ ನೀಡಿದ್ದರು.












Click it and Unblock the Notifications