ಪತ್ರಕರ್ತ ಸೋಮಶೇಖರ್ ಯಡವಟ್ಟಿ ನಿಧನಕ್ಕೆ ಡಿಸಿಎಂ ಸವದಿ ಸಂತಾಪ
ಬೆಳಗಾವಿ, ಆಗಸ್ಟ್ 16: ""ನನ್ನ ಆತ್ಮೀಯರು ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ ಸೋಮಶೇಖರ ಯಡವಟ್ಟಿ ಅವರು ನಿಧನರಾಗಿರುವ ಸುದ್ದಿ ತಿಳಿದು ನನಗೆ ಬೇಸರವಾಯಿತು'' ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಂತಾಪ ಸೂಚಿಸಿದರು.
ಸೋಮಶೇಖರ ಯಡವಟ್ಟಿ ಅವರು ಪತ್ರಿಕೋದ್ಯಮದಲ್ಲಿ ಅತ್ಯಂತ ನಿಷ್ಠುರರಾಗಿ, ಸದಾ ಸಕಾರಾತ್ಮಕವಾಗಿ ವರದಿಗಳನ್ನು, ವಿಶ್ಲೇಷಣೆಗಳನ್ನು ಬರೆಯುತ್ತಿದ್ದನ್ನು ನಾನು ಗಮನಿಸಿದ್ದೇನೆ. ವಿಧಾನ ಸೌಧದಲ್ಲಿ ಮತ್ತು ಅಧಿವೇಶನಗಳಲ್ಲಿ ಅವರು ಲವಲವಿಕೆಯಿಂದ ಸುದ್ದಿ ಸಂಗ್ರಹದಲ್ಲಿ ಯಾವತ್ತೂ ಚುರುಕಾಗಿರುತ್ತಿದ್ದರು ಎಂದು ತಿಳಿಸಿದರು.
ಸೋಮಶೇಖರ್ ಅವರು ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಮನಸ್ಥಿತಿಯಲ್ಲಿ ಬೆಳೆದು ಬಂದಿದ್ದರು. ಅವರ ನಿಧನ ಪತ್ರಿಕೋದ್ಯಮ ಕ್ಷೇತ್ರಕ್ಕೆ ನಿಜಕ್ಕೂ ದೊಡ್ಡ ನಷ್ಟವೇ ಸರಿ. ದಿವಂಗತರಿಗೆ ನನ್ನ ಅಂತಿಮ ಪ್ರಣಾಮಗಳನ್ನು ಸಲ್ಲಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಕಂಬನಿ ಮಿಡಿದಿದ್ದಾರೆ.

ಧಾರವಾಡ ಮೂಲದ ಸೋಮಶೇಖರ್ ಯಡವಟ್ಟಿ ಈ ಟಿವಿ, ಕರುನಾಡ ಸಂಜೆ, ಉದಯವಾಣಿ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಶುಕ್ರವಾರದ ತನಕ ಕೆಲಸ ಮಾಡಿದ್ದ ಅವರು ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಪತ್ರಕರ್ತ ಸೋಮಶೇಖರ್ ಯಡವಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೂ ಸಹ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳ, ಸಜ್ಜನ ವ್ಯಕ್ತಿಯಾಗಿದ್ದ ಸೋಮಶೇಖರ್ ಯಡವಟ್ಟಿ ನಿಷ್ಪಕ್ಷಪಾತ, ವಸ್ತುನಿಷ್ಠ ವರದಿಗಾರಿಕೆಗೆ ಮಾದರಿಯಾಗಿದ್ದರು ಎಂದಿದ್ದಾರೆ.












Click it and Unblock the Notifications