ವಿಜಯಪುರ ಬಾಲಕಿ ಅತ್ಯಾಚಾರ: ಮಾನವ ಬಂಧುತ್ವ ವೇದಿಕೆ ಪ್ರತಿಭಟನೆ
ಬೆಳಗಾವಿ, ಡಿಸೆಂಬರ್, 29 : ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಅಪ್ರಾಪ್ತ ದಲಿತ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಸಂಘಟನೆ ವತಿಯಿಂದ ಬೆಳಗಾವಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ಅತ್ಯಾಚಾರಿಗಳು ಮತ್ತು ಸರ್ಕಾರದ ನಿಷ್ಕ್ರಿಯ ನೀತಿಯ ವಿರುದ್ದ ಘೋಷಣೆ ಕೂಗಿದರು.

ಚನ್ನಮ್ಮ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆದು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ದಿಲೀಪ ಕಾಂಬಳೆ ಮಾತನಾಡಿ, ದೇಶದಲ್ಲಿ ಇತ್ತೀಚಿಗೆ ದಲಿತ ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ.
ಸರ್ಕಾರ ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ನಿಯಂತ್ರಿಸಲು ವಿಫಲವಾಗಿದೆ. ವಿಜಯಪುರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಿ ಬಾಲಕಿ ಪೋಷಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ವೇದಿಕೆ ತಾಲೂಕಾ ಸಂಚಾಲಕ ಯುವರಾಜ ತಳವಾರ ಮಾತನಾಡಿ, ವಿಜಯಪುರ ಶೋಷಿತ ಸಮುದಾಯದ ಅಪ್ರಾಪ್ತ ಬಾಲಕಿ ಮೇಲೆ ಕಾಮುಕರು ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದು, ಇದು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಪೈಶಾಚಿಕ ಕೃತ್ಯವಾಗಿದೆ. ಕೂಡಲೇ ಕಾಮುಕರುನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರ ಸೇವಕ ಅಂಜನ ಕುಮಾರ ಗಂಡಗುದರೆ, ಪ್ರಶಾಂತ ಪೂಜಾರಿ, ವಕೀಲ ಗಣೇಶ ರೋಣದ, ತಾಲೂಕಾ ಸಂಚಾಲಕ ಮಹಾಂತೇಶ ತಳವಾರ, ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಅಧ್ಯಕ್ಷ ವಿಜಯ ತಳವಾರ್, ಕಾರ್ಯಕರ್ತರಾದ ಸಿದ್ದಾರ್ಥ ಚೌವ್ಹಾಣ, ಅಮೀತ ರಜಪೂತ, ಶೋಭಾ ಅಂಚಿ, ಪ್ರವೀಣ ಹುಕ್ಕೇರಿ, ಈರಣ್ಣ ಗೋರವ, ಬಸವರಾಜ ನಾಯಕ, ಪವನ ಮಿರ್ಚಿ, ರಾಜು ನಾಯ್ಕ, ಕೃಷ್ಣಾ ಪಾಟೀಲ್, ಲಕ್ಕಪ್ಪ ಮುನವಳ್ಳಿ, ರಾಜು ಮರಿನಾಯ್ಕ, ರಮೇಶ ದಡ್ಡಿ, ಸಂಜಯ ಕಾಂಬಳೆ, ಬಸವರಾಜ ಇರಗಾರ, ಬಸವಣ್ಣಿ ಬಳಿಗಾರ ಮತ್ತಿತರರು ಉಪಸ್ತಿತರಿದ್ದರು.











Click it and Unblock the Notifications