ದಾಬೋಲ್ಕರ್ ಎದೆಹೊಕ್ಕ ಗುಂಡು ಕೊಂಡಿದ್ದು ಬೆಳಗಾವಿಯಲ್ಲಿ
ಬೆಂಗಳೂರು, ಜೂನ್ 17 : ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಗೆ ಬೆಳಗಾವಿಯಲ್ಲಿ ಗುಂಡುಗಳನ್ನು ಖರೀದಿ ಮಾಡಲಾಗಿತ್ತು. ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈ ಕುರಿತು ಮಾಹಿತಿ ಸಂಗ್ರಹಣೆ ಮಾಡಿದೆ.
ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಡಾ.ವಿರೇಂದ್ರ ತಾವಡೆ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಹತ್ಯೆ ಪ್ರಕರಣದಲ್ಲಿ ಸಾರಂಗ್ ಅಕೋಲ್ಕರ್ ಸೇರಿದಂತೆ 6 ಆರೋಪಿಗಳು ಭಾಗಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸಾರಂಗ್ 2009ರ ಗೋವಾ ಸ್ಫೋಟದಲ್ಲಿಯೂ ಭಾಗಿಯಾದ ಬಗ್ಗೆ ಆರೋಪಗಳಿವೆ. [ಕಲ್ಲುಬಂಡೆಯಂತೆ ಕುಳಿತಿರುವ ಎಂಎಂ ಕಲಬುರ್ಗಿ ಹತ್ಯೆ ತನಿಖೆ]

ಮೂರು ಹತ್ಯೆ ನಡುವೆ ಸಾಮ್ಯತೆ : ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡುವೆ ಸಾಮ್ಯತೆ ಇದೆ ಎಂಬುದು ಸಿಬಿಐ ವಾದ. ಒಂದೇ ಗುಂಪಿನ ಸದಸ್ಯರು ಈ ಮೂರು ಹತ್ಯೆ ಮಾಡಿದ್ದಾರೆ ಎಂಬುದು ತನಿಖೆ ವೇಳೆ ಖಚಿತಗೊಂಡಿದೆ. [ಕಲಬುರ್ಗಿ ಹತ್ಯೆಯ ತನಿಖೆ ವಿಳಂಬಕ್ಕೆ ಯಾರು ಕಾರಣ?]
2013ರ ಆಗಸ್ಟ್ 20ರಂದು ಪುಣೆಯಲ್ಲಿ ದಾಬೋಲ್ಕರ್ ಹತ್ಯೆ ನಡೆದಿತ್ತು. ಸಾರಂಗ್ ಅಕೋಲ್ಕರ್ ಮತ್ತೊಬ್ಬನ ಜೊತೆ ಸೇರಿ ದಾಬೋಲ್ಕರ್ ಮೇಲೆ ಗುಂಡು ಹಾರಿಸಿದ್ದ. ಸಾರಂಗ್ ಬಂಧನವಾದರೆ, ಮೂರು ಹತ್ಯೆಯ ಬಗ್ಗೆ ಖಚಿತವಾದ ಮಾಹಿತಿ ಲಭ್ಯವಾಗಲಿದೆ.
ಚಾಕೋಲೇಟ್ ತನ್ನಿ : ದಾಬೋಲ್ಕರ್ ಹತ್ಯೆಗೂ ಮುನ್ನ ಬೆಳಗಾವಿಯಲ್ಲಿ ಹಲವು ಚಟುವಟಿಕೆಗಳು ನಡೆದಿದ್ದವು. 'ಚಾಕೋಲೇಟ್ ತನ್ನಿ' ಎಂಬ ಇ ಮೇಲ್ ಅನ್ನು ಸಿಬಿಐ ಅಧಿಕಾರಿಗಳು ಡಿಕೋಡ್ ಮಾಡಿದ್ದು, ಚಾಕೋಲೇಟ್ ಎಂದರೆ ಗುಂಡು ಎಂದು ತಾವಡೆ ವಿಚಾರಣೆ ವೇಳೆ ಹೇಳಿದ್ದಾರೆ.
ಡಾ.ವಿರೇಂದ್ರ ತಾವಡೆ ಅವರ ಬಂಧನದಿಂದ ದಾಬೋಲ್ಕರ್, ಕಲಬುರ್ಗಿ ಮತ್ತು ಪನ್ಸಾರೆ ಹತ್ಯೆಯ ತನಿಖೆಗೆ ವೇಗ ಸಿಕ್ಕಿದಂತಾಗಿದೆ. ಹಿಂದೂಗಳ ಭಾವನೆ ವಿರೋಧಿಸುವವರ ಮೇಲೆ ಕಣ್ಣಿಡಲು 15 ಸಾವಿರ ಜನರ ಸೇನೆ ಕಟ್ಟಲು ನಿರ್ಧರಿಸಲಾಗಿತ್ತು ಎಂದು ತಾವಡೆ ವಿಚಾರಣೆ ವೇಳೆ ಹೇಳಿದ್ದಾರೆ.
2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದ ನಿವಾಸದಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಮೊದಲು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದರು. ನಂತರ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು.












Click it and Unblock the Notifications