ಕೊರೊನಾ ತಡೆಗೆ ಬೆಳಗಾವಿಯಲ್ಲಿ ವಾರ್ ರೂಂ ಆರಂಭ
ಬೆಳಗಾವಿ, ಏಪ್ರಿಲ್ 23 : ಕೋವಿಡ್ - 19 ಪತ್ತೆ ಮತ್ತು ನಿಯಂತ್ರಣ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಗೆ ಬೆಳಗಾವಿಯಲ್ಲಿ ವಾರ್ ರೂಮ್ ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ತಡೆಯಲು ಅನೇಕ ಕ್ರಮ ಕೈಗೊಳ್ಳಲಾಗಿದೆ.
Recommended Video
ನಗರದ ವಿಶ್ವೇಶ್ವರಯ್ಯ ಸ್ಮಾರ್ಟ್ ಸಿಟಿಯ ಕಮಾಂಡ್ ಅಂಡ್ ಕಂಟ್ರೋಲ್ ಕೇಂದ್ರದಲ್ಲಿ ವಾರ್ ಸ್ಥಾಪನೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಗುರುವಾರ ಕೇಂದ್ರವನ್ನು ಉದ್ಘಾಟಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
"ಕೋವಿಡ್ - 19 ನಿಯಂತ್ರಣ, ಸೋಂಕಿತರ ಸಂಪರ್ಕದಲ್ಲಿ ಇರುವವರ ಪತ್ತೆ, ಜನರು ಮತ್ತು ವಾಹನ ಸಂಚಾರದ ಮೇಲೆ ವಾರ್ ರೂಮ್ ಮೂಲಕ ನಿಗಾ ವಹಿಸಲಾಗುತ್ತದೆ" ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ. ಬೊಮ್ಮನಹಳ್ಳಿ ವಿವರಣೆ ನೀಡಿದರು.
ಮೊಬೈಲ್ ಅಪ್ಲಿಕೇಶನ್, ವಿಡಿಯೋ ಫುಷ್ ಮತ್ತು ಸರ್ವೇಲನ್ಸ್, ಕಸ್ಮೈಸ್ಡ್ ಡ್ಯಾಶ್ ಬೋರ್ಡ್, ಸೋಂಕಿತರ ಜತೆ ಸಂಪರ್ಕಕ್ಕೆ ಬಂದವರನ್ನು ಮೊಬೈಲ್ ಸಂಖ್ಯೆ ಮೂಲಕ ಪತ್ತೆ ಹಚ್ಚುವಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಜನರ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಸಂಗ್ರಹಿಸಲು ವಾರ್ ರೂಮ್ ಬಳಸಲಾಗುತ್ತದೆ.

ಕ್ವಾರಂಟೈನ್ ಕೇಂದ್ರಗಳು
ನಗರದಲ್ಲಿನ ಕ್ವಾರಂಟೈನ್ ಕೇಂದ್ರಗಳು, ಕಂಟೈನ್ಮೆಂಟ್ ಝೋನ್ ಮತ್ತಿತರ ಕಡೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಕೂಡ ವಾರ್ ರೂಮ್ಗೆ ಸಂಪರ್ಕಿಸಲಾಗುತ್ತದೆ. ಕಂಟೈನ್ಮೆಂಟ್ ಝೋನ್ಗಳಲ್ಲಿನ ಜನರು ದಿನಸಿ, ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಪಡೆಯಲು ಹೊರಗಡೆ ಬರುವುದು ಅಗತ್ಯವಿಲ್ಲ. ವಿಶೇಷ ಆಪ್ ಮೂಲಕ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಬಹುದು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಅಗತ್ಯ ವಸ್ತುಗಳ ಪೂರೈಕೆ
"ಕಂಟೈನ್ಮೆಂಟ್ ಝೋನ್ಗಳಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಿರುವುದರಿಂದ ದಿನಸಿ, ತರಕಾರಿ ಮತ್ತಿತರರ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕು. ಕುಡಚಿ, ಹಿರೇಬಾಗೇವಾಡಿ, ಸಂಕೇಶ್ಚರ ಮತ್ತಿತರ ಕಡೆಗಳಲ್ಲಿ ಡ್ರೋನ್ ಕ್ಯಾಮರಾ ಮೂಲಕ ನಿಗಾ ವಹಿಸಬೇಕು. ನಿಯಮಾವಳಿ ಉಲ್ಲಂಘಿಸಿದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವಾರ್ ರೂಮ್ ಮೂಲಕ ತಕ್ಷಣ ಎಚ್ಚರಿಕೆ ನೀಡಬೇಕು" ಎಂದು ಜಗದೀಶ್ ಶೆಟ್ಟರ್ ಸೂಚಿಸಿದರು.

ತೀವ್ರ ನಿಗಾವಹಿಸಬೇಕು
"ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿರುವ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವವರ ಮೇಲೆ ಕೂಡ ಸಿಸಿಟಿವಿ ಕ್ಯಾಮೆರಾ ಮೂಲಕ ನಿಗಾ ವಹಿಸಿದಾಗ ಮಾತ್ರ ಕ್ವಾರಂಟೈನ್ ಉದ್ದೇಶ ಈಡೇರುವುದು ಸಾಧ್ಯವಾಗುತ್ತದೆ. ಆದ್ದರಿಂದ ಅವರ ಮೇಲೆ ಕೂಡ ತೀವ್ರ ನಿಗಾ ವಹಿಸಬೇಕು" ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಕೇಂದ್ರ ಸಚಿವರು ಇದ್ದರು
ವಾರ್ ರೂಮ್ ಕಾರ್ಯ ಸ್ವರೂಪದ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಪಡೆದುಕೊಂಡರು. ವಾರ್ ರೂಮ್ನಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನವನ್ನು ಕರೊನಾ ನಿಯಂತ್ರಣಕ್ಕೆ ಸಮರ್ಥವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications