ಸಿಎಂ ಸಿದ್ದರಾಮಯ್ಯ ದೆಹಲಿ ಓಡಾಟಕ್ಕೆ ಹೊಸ ಕಾರು!
ಬೆಳಗಾವಿ, ಡಿ. 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಪ್ರವಾಸದ ಬಳಕೆಗೆ ಹೊಸ ಕಾರು ಖರೀದಿಸಲು 23 ಲಕ್ಷ ಸೇರಿದಂತೆ 2014-15ನೇ ಸಾಲಿನ ಎರಡನೇ ಕಂತಿನ ಪೂರಕ ಅಂದಾಜುಗಳ ಬಗ್ಗೆ ರೂ.3,296 ಕೋಟಿ ಹೆಚ್ಚುವರಿ ಬೇಡಿಕೆಗೆ ಅನುಮೋದನೆ ನೀಡುವ ಪ್ರಸ್ತಾಪವನ್ನು ಸರ್ಕಾರ ವಿಧಾನಪರಿಷತ್ತಿನಲ್ಲಿ ಮಂಡಿಸಿದೆ.
ಸರ್ಕಾರದ ಪರವಾಗಿ ಪರಿಷತ್ ಸಭಾನಾಯಕ ಎಸ್.ಆರ್.ಪಾಟೀಲ್ ಈ ಪಸ್ತಾವನೆಯನ್ನು ಬುಧವಾರ ಮಂಡಿಸಿದ್ದಾರೆ. ಕುಡಿಯುವ ನೀರಿನ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ 100 ಕೋಟಿ ರೂ, ವಿದ್ಯಾಸಿರಿ ಯೋಜನೆಗೆ ಹೆಚ್ಚುವರಿಯಾಗಿ 39.14 ಕೋಟಿ ರೂ., ಲೋಕಾಯುಕ್ತ ಸಂಸ್ಥೆಗೆ ಹೆಚ್ಚುವರಿ 10 ವಾಹನಗಳ ಖರೀದಿಗೆ 65 ಲಕ್ಷ ರೂ. ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚುವರಿ ವೆಚ್ಚದ ವಿವರಗಳನ್ನು ಪ್ರಸ್ತಾವನೆ ಒಳಗೊಂಡಿದೆ.

ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಸಮಯದಲ್ಲಿ ಬಳಕೆ ಮಾಡಲು ಹೊಸ ಕಾರು ಖರೀದಿ ಮಾಡಲು 23 ಲಕ್ಷ, ಗಣಿ ಅಕ್ರಮಗಳ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ದಳದ ಕಟ್ಟಡ ದುರಸ್ತಿಗೆ 36.30 ಲಕ್ಷ ಹಾಗೂ ಘಟಕಕ್ಕೆ ವಾಹನಗಳ ಖರೀದಿಗೆ 16.44 ಲಕ್ಷ ವೆಚ್ಚ ಮಾಡುವ ಪ್ರಸ್ತಾಪವಿದೆ. [ಕಸ್ತೂರಿ ರಂಗನ್ ವರದಿಗೆ ಶಾಸಕರ ವಿರೋಧ]
ಕಲಬುರಗಿಯಲ್ಲಿ ನ.28ರಂದು ನಡೆದ ಸಚಿವ ಸಂಪುಟ ಸಭೆಯ ಪೂರ್ವಭಾವಿ ಸಿದ್ಧತೆಗೆ ಹೆಚ್ಚುವರಿಯಾಗಿ ಒದಗಿಸಲಾದ 75 ಲಕ್ಷ ರೂ, ಲೋಕಾಯುಕ್ತ ಸಂಸ್ಥೆಗೆ ಕಂಪ್ಯೂಟರ್ ಹಾಗೂ ಪರಿಕರಗಳ ಖರೀದಿಗೆ 4 ಕೋಟಿ ರೂ., ಪೊಲೀಸ್ ಇಲಾಖೆಗೆ ಅಗತ್ಯವಿರುವ 339 ವಾಹನಗಳ ಖರೀದಿಗೆ 21.13 ಕೋಟಿ ರೂ., ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚುವರಿ 1.4 ಕೋಟಿ ರೂ. ಸೇರಿ ಒಟ್ಟು 3296.46 ಕೋಟಿ ರೂ. ವೆಚ್ಚವನ್ನು ಪೂರಕ ಅಂದಾಜು ಒಳಗೊಂಡಿದೆ.[ಕಲಬುರಗಿ ಸಂಪುಟ ಸಭೆಯ ನಿರ್ಣಯಗಳು]
ಈ ಪೂರಕ ಅಂದಾಜು ಕೃಷಿ ಮತ್ತು ತೋಟಗಾರಿಕೆ ಇಲಾಖೆ 2187.36 ಕೋಟಿ ರೂ., ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 32.36 ಕೋಟಿ ರೂ., ಆರ್ಥಿಕ ಇಲಾಖೆ 5 ಕೋಟಿ ರೂ., ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 31.65 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ 323.54 ಕೋಟಿ ರೂ. ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡಿದೆ.












Click it and Unblock the Notifications