Chikkodi: ಬಿಜೆಪಿಯಲ್ಲಿ ಮೂಲೆಗುಂಪು ವ್ಯವಸ್ಥೆ ಇದೆ: ಲಕ್ಷ್ಮಣ ಸವದಿ ಕಿಡಿ
ಚಿಕ್ಕೋಡಿ, ಮಾರ್ಚ್ 26: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರ ಪೈಪೋಟಿ ಒಡ್ಡಲು ಸಜ್ಜಾಗಿವೆ. ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಅಥಣಿ ಶಾಸಕ ಲಕ್ಷ್ಮಣ ಸವದಿಯವರು ರಾಜ್ಯ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪ್ರಾಮಾಣಿಕ ನಾಯಕರಿಗೆ ಕರ್ನಾಟಕ ಬಿಜೆಪಿಯಲ್ಲಿ ಜಾಗ ಇಲ್ಲ. ಅಂತಹ ಪ್ರಾಮಾಣಿಕ ನಾಯಕರನ್ನು ಮೂಲೆಗುಂಪು ಮಾಡುವ ವ್ಯವಸ್ಥೆ ಬಿಜೆಪಿಯಲ್ಲಿದೆ ಎಂದು ಅವರು ಹರಿಹಾಯ್ದಿದ್ದಾರೆ.

ಇನ್ನೂ ಬೆಳಗಾವಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ವಿರುದ್ಧ ಸ್ಪರ್ಧೆಗೆ ನಿಂತಿರುವ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕುರಿತು ಲೇವಡಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಣಕ್ಕಿಳಿಸುವ ಮೂಲಕ ಅವರನ್ನು ಹರಕೆಯ ಕುರಿಯಾಗಿ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ಚಿಕ್ಕೋಡಿ ಕಾಂಗ್ರೆಸ್ ಪರ ಶಾಸಕ ಪ್ರಚಾರ
ಬಿಜೆಪಿಯಿಂದ ಕಾಂಗ್ರೆಸ್ಗೆ ತೆರಳಿರುವ ಲಕ್ಷ್ಮಣ ಸವದಿಯವರು ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಿಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಸ್ವಪಕ್ಷದ ಕುರಿತು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಇನ್ನೂ ಚುನಾವಣಾ ಪ್ರಚಾರ ಆರಂಭವಾಗಿಲ್ಲ. ಈಗಷ್ಟೇ ಅಭ್ಯರ್ಥಿಗಳ ಹೆಸರು ಘೋಷಣೆ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಇದುವರೆಗೆ ಯಾರಿಗೂ ಕ್ಷೇತ್ರಗಳ ಜವಾಬ್ದಾರಿ ಹೊಣೆ ಕೊಟ್ಟಿಲ್ಲ. ಅಭ್ಯರ್ಥಿಗಳ ಆಯ್ಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಮೀಕ್ಷೆಗಳನ್ನು ನೀಡುವ ಕೆಲಸ ನೀಡಿತ್ತು.

ಕಾಂಗ್ರೆಸ್ ಯಾರನ್ನು ಕಡೆಗಣಿಸಿಲ್ಲ
ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ ಕೆಲವರನ್ನು ಕಡೆಗಣಿಸಿದ್ದಾರೆ ಎಂಬು ಮಾತು ಕೇಳಿ ಬರುತ್ತಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಚುನಾವಣೆಯ ಸಂದರ್ಭದಲ್ಲಿ ಜವಾಬ್ದಾರಿ ನೀಡಿದರೆ ಮಾತ್ರ ಕೆಲಸ ಮಾಡಬೇಕು. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗುತ್ತದೆ ಎಂದು ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಬೆಳಗಾವಿ ಟಿಕೆಟ್ ಘೋಷಣೆಗೂ ಮೊದಲು ಪಕ್ಷ ತೊರೆದ ಇದೇ ಕಾಂಗ್ರೆಸ್ನ ಲಕ್ಷ್ಮಣ ಸವದಿಯವರಿಗೆ ಬಿಜೆಪಿ ಬಲೆ ಬೀಸಿತ್ತು ಎನ್ನಲಾಗಿದೆ. ಸೂಕ್ತ ಸ್ಥಾನ ಮಾನದ ಆಮಿಷ ತೋರಿಸಿದ್ದ ಬಿಜೆಪಿಯು ತನ್ನೆಡೆಗೆ ಸೆಳೆಯುವ ಮೂಲಕ ಕಾಂಗ್ರೆಸ್ಗೆ ಠಕ್ಕರ್ ಕೊಡಲು ಪ್ಲಾನ್ ಮಾಡಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.












Click it and Unblock the Notifications