ಸಿದ್ದರಾಮಯ್ಯನದ್ದು ರಾಕ್ಷಸ ಮುಖ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ
ಬೆಳಗಾವಿ, ಡಿಸೆಂಬರ್ 12 : ಬಿಜೆಪಿಯ ಫೈರ್ ಬ್ರಾಂಡ್ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ರಾಜ್ಯ ಸರ್ಕಾರದ ಮೇಲೆ ತಮ್ಮ ಬಿಡು ಬೀಸಿನ, ತೀಕ್ಷ್ಣ ಶಬ್ದಗಳ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಇತ್ತೀಚೆಗಷ್ಟೆ ಸಿದ್ದರಾಮಯ್ಯ ಅವರನ್ನು ಪಾಪದ ಪಿಂಡ ಎಂದು ಕರೆದಿದ್ದ ಅನಂತಕುಮಾರ ಹೆಗಡೆ ಇಂದು 'ಸಿದ್ದರಾಮಯ್ಯನದ್ದು ರಾಕ್ಷಸ ಮುಖ' ಎಂದು ಏಕವಚನದಲ್ಲಿಯೇ ಬೈದಿದ್ದಾರೆ.
ಪರೇಶ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೂಗಳ ಹತ್ಯೆಗೆ ಕಾಂಗ್ರೆಸ್ ಪರೋಕ್ಷ ಕಾರಣ, ಸಿದ್ದರಾಮಯ್ಯನದ್ದು ಹಾಗೂ ಕಾಂಗ್ರೆಸ್ನದ್ದು ರಾಕ್ಷಸ ಮುಖ ಎಂದಿದ್ದಾರೆ.

ಪರೇಶ ಮೆಸ್ತಾ ಸಾವು ಮಾನವೀಯತೆಯ ಕಗ್ಗೊಲೆ ಎಂದು ಬಣ್ಣಿಸಿರುವ ಅವರು ಪರೇಶನನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ, ಈಗ ವ್ಯವಸ್ಥಿತವಾಗಿ ಕೇಸು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ.
ನ್ಯಾಯಯುತ ತನಿಖೆ ಮಾಡುವ ಮನಸ್ಸು ಕಾಂಗ್ರೆಸ್ ಗೆ ಇಲ್ಲ, ಅಲ್ಪಸಂಖ್ಯಾರ ಮತಗಳನ್ನು ಉಳಿಸಿಕೊಳ್ಳುವುದಕ್ಕೆ ಕಾಂಗ್ರೆಸ್ ಮಾಡುತ್ತಿರುವ ನಾಟಕ ಇದು ಎಂದು ಅವರು ಆರೋಪಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಿಪಿಐ ಪೊಲೀಸ್ ಅಧಿಕಾರಿಗಳು ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ, ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಅಲ್ಲಿನ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು..
ಪರೇಶ ಮೇಸ್ತಾ ಸೇರಿದಂತೆ ರಾಜ್ಯದಲ್ಲಿ 20 ಜನ ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಗಿದೆ, ರಾಜ್ಯ ಸರ್ಕಾರದಿಂದ ನಮಗೆ ನ್ಯಾಯ ಸಿಗುವ ಭರವಸೆಯಿಲ್ಲ ಹಾಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ನಡೆಸುವಂತೆ ಅನಂತಕುಮಾರ್ ಹೆಗಡೆ ಆಗ್ರಹಿಸಿದರು.












Click it and Unblock the Notifications