ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ
ಬೆಳಗಾವಿ, ನವೆಂಬರ್ 16: ಕರ್ನಾಟಕ ಸಾರ್ವಜನಿಕ ಸುರಕ್ಷತೆ ಜಾರಿ ಮಸೂದೆ ಬುಧವಾರ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ.
ಈ ಕಾಯಿದೆ ಪ್ರಕಾರ ವಾಣಿಜ್ಯ, ಕೈಗಾರಿಕಾ ಸಂಸ್ಥೆಗಳು, ಶಿಕ್ಷಣ, ಧಾರ್ಮಿಕ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಕೆ ಮಾಡುವುದು ಕಡ್ಡಾಯವಾಗಿದೆ.
ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ಕ್ರೀಡಾ ಸಂಕೀರ್ಣಗಳಿಗೂ ಈ ಕಾಯಿದೆ ಅನ್ವಯವಾಗಲಿದೆ. ಜತೆಗೆ ಸಂಸ್ಥೆಗಳ ಮಾಲಿಕರು ಪೊಲೀಸರು ಕೇಳಿದಾಗ ಇವುಗಳ ದೃಶ್ಯಾವಳಿಗಳನ್ನೂ ಹಸ್ತಾಂತರಿಸುವುದು ಕಡ್ಡಾಯವಾಗಿದೆ.

ಅಪರಾಧ ಪ್ರಕರಣಗಳ ನಿಯಂತ್ರಣ, ಭಯೋತ್ಪಾದಕ ದಾಳಿಗಳ ತಡೆ ಮತ್ತು ಕಾನೂನು ವಿರೋಧಿ ಚಟುವಟಿಕೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಸಿಸಿಟಿವಿ ಅನುಷ್ಠಾನವನ್ನು ಕಡ್ಡಾಯಗೊಳಿಸಲಾಗಿದೆ.
ಮಸೂದೆಯನ್ನು ಸದನದಲ್ಲಿ ಮಂಡಿಸಿ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, "ಮಾಲಿಕರು ತಮ್ಮ ಸ್ವತ ಖರ್ಚಿನಲ್ಲಿ ಸಿಸಿಟಿವಿಗಳನ್ನು ಅಳವಡಿಸಿಕೊಳ್ಳಬೇಕು. ಈ ದೃಶ್ಯಾವಳಿಗಳನ್ನು ಯಾವುದೇ ತನಿಖೆಗೆ ಬಳಸಿಕೊಳ್ಳುವ ಅಧಿಕಾರ ಸರಕಾರಕ್ಕಿದೆ. ಈ ಕಾರಣಕ್ಕೆ ದೃಶ್ಯಾವಳಿಗಳನ್ನು 30 ದಿನಗಳ ಕಾಲ ಇಟ್ಟುಕೊಂಡಿರಬೇಕು. ಫೂಟೇಜ್ ಗಳನ್ನು ಹಸ್ತಾಂತರಿಸಲು ನಿರಾಕರಿಸುವವರ ಮೇಲೆ ರೂ. 5,000 ದಂಡ ವಿಧಿಸಲಾಗುವುದು," ಎಂದು ಹೇಳಿದ್ದಾರೆ.
ಸಂಸ್ಥೆಗಳು ತಾವು ಅಳವಡಿಸಿಕೊಂಡ ಸುರಕ್ಷಾ ವಿಧಾನಗಳ ಕಾರ್ಯ ನಿರ್ವಹಣೆ ಬಗ್ಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮೂರು ತಿಂಗಳಿಗೊಮ್ಮೆ ವರದಿ ನೀಡುವಂತೆ ಕಾಯಿದೆಯಲ್ಲಿ ಹೇಳಲಾಗದೆ. ಒಂದೊಮ್ಮೆ ವರದಿ ನೀಡದಿದ್ದಲ್ಲಿ ಮೊದಲ ಬಾರಿಗೆ 5,000 ದಂಡ, ಎರಡನೇ ಬಾರಿಗೆ 10,000 ದಂಡ ವಿಧಿಸಲು ಕಾಯಿದೆಯಲ್ಲಿ ಅವಕಾಶವಿದೆ.
ಈ ಕಾಯ್ದೆ ಉಲ್ಲಂಘಿಸುವ ಧಾರ್ಮಿಕ ಸ್ಥಳಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸೀಜ್ ಮಾಡುವುದರಿಂದ ವಿನಾಯ್ತಿ ನೀಡುತ್ತೇವೆ. ಉಳಿದ ವಾಣಿಜ್ಯ ಸಂಸ್ಥೆಗಳಿಗೆ ಮಾತ್ರ ಕಾಯ್ದೆ ಉಲ್ಲಂಘಿಸಿದರೆ, ಪೊಲೀಸರು ಸೀಜ್ ಮಾಡಬಹುದು ಎಂದು ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿಸಿಟಿವಿ ಅಳವಡಿಕೆಗೆ ಪ್ರತಿ ಕಾರ್ಪೋರೇಟರ್ ಗೆ ಹತ್ತು ಲಕ್ಷ ರೂಪಾಯಿ ನೀಡಲಾಗುತ್ತಿದೆ. ಗುರಪ್ಪನ ಪಾಳ್ಯ ವಾರ್ಡ್ ನಲ್ಲಿ ಪ್ರಾಯೋಗಿಕವಾಗಿ 100 ಹೈ ಡೆಫಿನೇಷನ್ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ.
ರಾಜ್ಯಾದ್ಯಂತ ಖಾಸಗಿ ವ್ಯಕ್ತಿಗಳು ಆರು ಲಕ್ಷಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಿಕೊಂಡಿದ್ದಾರೆ. ಇದೀಗ ನಾವೂ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ ಮಾಡುತ್ತಿದ್ದು, ಇದರಿಂದ ಅಪರಾಧ ಪ್ರಕರಣಗಳ ನಿಯಂತ್ರಣ ಸಾಧ್ಯ ಎಂದಿದ್ದಾರೆ.











Click it and Unblock the Notifications