ಭೀಮ ಕೊರೆಗಾಂವ್ ಗಲಭೆ: ನಿಪ್ಪಾಣಿ, ಚಿಕ್ಕೋಡಿ ಬಂದ್
ಬೆಳಗಾವಿ, ಜನವರಿ 05: ಮಹಾರಾಷ್ಟ್ರಾದ ಪುಣೆ ಸಮೀಪ ಭೀಮಾ ಕೊರೆಗಾಂವ್ ನಲ್ಲಿ ನಡೆದ ದಲಿತರ ಮೇಲೆ ಹಿಂಸಾಚಾರ ಹಾಗೂ ಒಬ್ಬ ದಲಿತ ಯುವಕನ ಹತ್ಯೆ ಖಂಡಿಸಿ ಇಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಮತ್ತು ಯಕ್ಸಂಭಾ ಪಟ್ಟಣಗಳ ಬಂದ್ಗೆ ಕರೆ ನೀಡಲಾಗಿದೆ.
ದಲಿತ ಸಂಘಟನೆಗಳು ಹಾಗೂ ಇನ್ನಿತರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ, ಬಸ್ ಸಂಚಾರ ಸ್ಥಬ್ದವಾಗಿದ್ದು, ಜನಜೀವನ ಅಸ್ಥವ್ಯಸ್ಥಗೊಂಡಿದೆ.
ಬಂದ್ ಕಾರಣ ನಿಪ್ಪಾಣಿಯಿಂದ ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಹೋಗಬೇಕಿದ್ದ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಟ್ಟಣದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ನಿಪ್ಪಾಣಿಯಲ್ಲಿ ದಲಿತರು ಮತ್ತು ಮರಾಠಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಂದ್ ಸಮಯ ಪರಸ್ಪರ ಘರ್ಷಣೆಗಳಾಗದೇ ಇರಲೆಂದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದು, ಭೀಮ ಕೊರೆಂಗಾವ್ ಗಲಭೆ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.












Click it and Unblock the Notifications