ಖಾಲಿ ಕುರ್ಚಿಗಳ ಅಧಿವೇಶನ, ಅತ್ತ ಮರಾಠಿ ಪುಂಡಾಟ; ದಿನದ 10 ಬೆಳವಣಿಗೆಗಳು
ಬೆಳಗಾವಿ, ನವೆಂಬರ್ 13: ಪ್ರತೀ ವರ್ಷದಂತೆ ಈ ವರ್ಷವೂ ಬೆಳಗಾವಿ ಅಧಿವೇಶನ ನೀರಸವಾಗಿಯೇ ಆರಂಭವಾಗಿದೆ. ಮೊದಲ ದಿನ ವಿಧಾನಸಭೆಯಲ್ಲಿ ಸಚಿವರು ಸೇರಿ ಕೇವಲ 53 ಜನರು ಹಾಜರಿದ್ದರು. ಇನ್ನೊಂದು ಕಡೆ ಅಧಿವೇಶನದ ಸಮಯದಲ್ಲೇ ಮರಾಠಿಗರು ಪುಂಡಾಟ ಮೆರೆದಿದ್ದಾರೆ.
ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಪಟ್ಟು ಬಿಡದ ಬಿಜೆಪಿ... ಮಹಾಮೇಳಾವದಲ್ಲಿ ಕರ್ನಾಟಕಕ್ಕೆ ಸವಾಲೆಸೆದ ಮಹಾರಾಷ್ಟ್ರದ ಮಾಜಿ ಸಚಿವ ಜಯಂತ್ ಪಾಟೀಲ್... ಮೇಲ್ಮನೆಯಲ್ಲಿ ಈಶ್ವರಪ್ಪ -ಸಿದ್ದರಾಮಯ್ಯ 'ಇಲಿ-ಹುಲಿ' ಜಟಾಪಟಿ... ಕರ್ತವ್ಯ ನಿರತವಾಗಿದ್ದಾಗಲೇ ಅಸುನೀಗಿದ ಪೊಲೀಸ್ ಪೇದೆ...
ಹೀಗೆ ಹಲವು ರೋಚಕವೂ ಅಷ್ಟೇ ನೀರಸವೂ ಆದ ಬೆಳವಣಿಗೆಗಳಿಗೆ ಇಂದಿನ ಬೆಳಗಾವಿ ವಿಧಾನಸಭೆ ಕಲಾಪ ಸಾಕ್ಷಿಯಾಯಿತು. ಒಟ್ಟಾರೆ ಇಡೀ ದಿನ ನಡೆದ ಬೆಳವಣಿಗೆಗಳ ಸಮಗ್ರ ಚಿತ್ರಣ ಇಲ್ಲಿದೆ.
ನೀರಸ ಕಲಾಪ
ಬೆಳಗಾವಿಯಲ್ಲಿ ವಿಧಾನ ಮಂಡಲ ಕಲಾಪ ನಡೆಯುತ್ತಿದ್ದರೆ ಶಾಸಕರು, ಸಚಿವರು ಅತ್ತ ಬೆನ್ನು ತಿರುಗಿಸಿದ್ದರು. ವಿಧಾನಸಭೆ ಕಲಾಪ ಆರಂಭವಾದಾಗ ಕಾಂಗ್ರೆಸ್ ನ 8, ಜೆಡಿಎಸ್ ನ ಒಬ್ಬರು, ಬಿಜೆಪಿಯ 6 ಜನ ಶಾಸಕರು ಹಾಜರಿದ್ದರು.
ಕನಿಷ್ಠ
ಕೋರಂ
ಭರ್ತಿಗೆ
24
ಸದಸ್ಯರು
ಹಾಜರಿಬೇಕು.
ಹೀಗಾಗಿ
ಕಲಾಪವನ್ನು
ಸ್ಪೀಕರ್
ಕೆ.ಬಿ
ಕೋಳಿವಾಡ್
ಮುಂದೂಡಿದರು.
ಒಂದು
ಹಂತದಲ್ಲಿ
ಶಾಸಕರ
ಸಂಖ್ಯೆ
100
ದಾಟಿತಾದರೂ
ಮಧ್ಯಾಹ್ನದ
ನಂತರ
ಪರಿಸ್ಥಿತಿ
ಮತ್ತೆ
ಅದೇ
ರೀತಿ
ಮುಂದುವರಿಯಿತು.
ಮಧ್ಯಾಹ್ನದ ನಂತರ ವಿಧಾನಸಭೆಯಲ್ಲಿ ಕೇವಲ 53 ಜನರು ಮಾತ್ರ ಉಪಸ್ಥಿತರಿದ್ದರು. ಇವರಲ್ಲಿ 31 ಜನ ಆಡಳಿತ ಪಕ್ಷದವರು. 22 ಜನ ವಿರೋಧ ಪಕ್ಷದವರು.
ಹೀಗೆ ನೋಡಿದವರಿಗೆ ಮೊದಲ ದಿನವೇ ಸಾಲು ಸಾಲು ಖಾಲಿ ಆಸನಗಳೇ ಕಣ್ಣಿಗೆ ರಾಚುತ್ತಿತ್ತು.
ಸಂತಾಪ ಸೂಚನೆ
ಇತ್ತೀಚೆಗೆ ನಿಧನರಾದ ಮಾಜಿ ಸಿಎಂ ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ, ಹಾಲಿ ಶಾಸಕ ಎಸ್ ಚಿಕ್ಕಮಾದು, ವಿಧಾನ ಪರಿಷತ್ ಮಾಜಿ ಸಭಾಪತಿ ಪೋತದಾರ ರಾಮಭಾವು ಬೀಮಾರಾವ್, ಮಾಜಿ ಶಾಸಕ ವಿದ್ಯಾಧರ ಗುರೂಜಿ, ಮಾಜಿ ಶಾಸಕ ಬೀಳಗಿಯ ಸಿದ್ಧನಗೌಡ ಸೋಮನಗೌಡ ಪಾಟೀಲ್, ಮಾಜಿ ಶಾಸಕರಾದ ಬಿ ಬಿ ಶಿವಪ್ಪ, ಜಯಪ್ರಕಾಶ್ ಶೆಟ್ಟಿ ಕೊಳ್ಕೆಬೈಲು, ಬಿ ಜಿ ಕೊಟ್ರಪ್ಪ, ವಿಜ್ಞಾನಿ ಪ್ರೊ. ಯು ಆರ್ ರಾವ್, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ, ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಸಂತಾಪ ಸೂಚಿಸಲಾಯಿತು.
ಮರಾಠಿ ಭಾಷೆ ಮಾತನಾಡಲು ಮುಂದಾದ ಶಾಸಕ
ಸಂತಾಪ ಸೂಚನೆ ವೇಳೆ ಮರಾಠಿ ಭಾಷೆಯಲ್ಲಿ ಎಂಇಎಸ್ ಶಾಸಕ ಅರವಿಂದ್ ಪಾಟೀಲ್ ಮಾತನಾಡಲು ಮುಂದಾದರು. ಆದರೆ ಮರಾಠಿಯಲ್ಲಿ ಮಾತನಾಡದಂತೆ ಸದನದ ಸದಸ್ಯರಿಂದ ಭಾರೀ ವಿರೋಧ ವ್ಯಕ್ತವಾಯಿತು. ನಂತರ ಕನ್ನಡದ ಹಾದಿಗೆ ಮರಳಿದರು.
ಇಲಿ - ಹುಲಿ ಚರ್ಚೆ
ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್ ರಾಜೀನಾಮೆ ಬಗ್ಗೆ ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಾರ್ಜ್ ರನ್ನು ಪ್ರಭಾವಿ ಎಂದು ಬಿಜೆಪಿಯ ಸುನೀಲ್ ಸುಬ್ರಮಣ್ಯ ಸಂಬೋಧಿಸಿದರು. ಆಗ ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ "ಹಾಗಾದ್ರೆ ನೀವು ಪ್ರಭಾವಿ ಅಲ್ವಾ?" ಎಂದು ಮರು ಪ್ರಶ್ನೆ ಹಾಕಿದರು.
ತಕ್ಷಣ ತಮ್ಮ ಶಾಸಕನ ಬೆಂಬಲಕ್ಕೆ ಧಾವಿಸಿದ ಈಶ್ವರಪ್ಪ, "ಪಾಪ ಅವರು ಹೊಸ ಶಾಸಕ. ಇಲಿ ಮೇಲೆ ಯಾಕೆ ಹುಲಿ ಥರಾ ಬೀಳುತ್ತಿದ್ದೀರಾ," ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಾಸ್ಯ ಚಟಾಕಿಗಳಿಗೆ ಹೆಸರುವಾಸಿಯಾಗಿರುವ ಸಿಎಂ ತಕ್ಷಣ "ನೋಡಿ ಶಾಸಕರನ್ನು ಈಶ್ವರಪ್ಪ ಇಲಿ ಅಂತಿದ್ದಾರೆ," ಅಂತಾ ಕಾಲೆಳೆದರು.
"ಹಾಗಾದ್ರೆ ನೀವು ಹುಲಿಯಾ?" ಅಂತಾ ಈಶ್ವರಪ್ಪ ಅಷ್ಟೇ ವೇಗವಾಗಿ ತೀಕ್ಷ್ಣ ಪ್ರಶ್ನೆ ಎಸೆದರು.
ಆಗ ಗಂಭೀರ ಹೇಳಿಕೆ ನೀಡಿದ ಸಿಎಂ, "ನಾನು ಹುಲಿಯೂ ಅಲ್ಲ. ಇಲಿಯೂ ಅಲ್ಲ. ಮಾನವೀಯ ಮೌಲ್ಯಗಳನ್ನು ಗೌರವಿಸುವ ಮನುಷ್ಯ," ಎಂದು ಉತ್ತರಿಸಿದರು.
ಸಿದ್ದು -ಈಶು ಏಟು, ತಿರುಗೇಟು
ವಿಧಾನ ಪರಿಷತ್ ನಲ್ಲಿ ರೋಷಾವೇಶದಿಂದ ಮಾತನಾಡಿದ ಸಿದ್ದರಾಮಯ್ಯ, "ಬನ್ನಿ ಫೀಲ್ಡ್ ಗೆ ವಿ ವಿಲ್ ಫೇಸ್ ಯು" ಎಂದು ಸವಾಲು ಹಾಕಿದರು. ಜಾರ್ಜ್ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿರುವ ಬಿಜೆಪಿಯವರಿಗೆ ಜನ ಪಾಠ ಕಲಿಸುತ್ತಾರೆ. ಮತ್ತೆ ಇವರು ಗೆಲ್ಲಲು ಸಾಧ್ಯವೇ ಇಲ್ಲ. ಈ ಹಿಂದೆ 110 ಸ್ಥಾನದಲ್ಲಿ ಗೆದ್ದಿದ್ದವರು 40ಕ್ಕೆ ಇಳಿದಿದ್ದೀರಿ ಎಂದು ಕುಟುಕಿದರು.
ಬಿಜೆಪಿ- ಕೆಜೆಪಿ ಅಂತ ಒಡೆದ ಕಾರಣ ಲಾಟರಿ ಹೊಡೆದು ಮುಖ್ಯಮಂತ್ರಿ ಆದಿರಿ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಕೂಡ ತಿರುಗೇಟು ನೀಡಿದರು.
ಕೆ.ಜೆ. ಜಾರ್ಜ್ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ
ಕೇಂದ್ರದಲ್ಲಿ ಹಲವಾರು ಸಚಿವರ ವಿರುದ್ ಎಫ್ಐಆರ್ ದಾಖಲಾಗಿರುವ ಹಿನ್ನಲೆಯಲ್ಲಿ ಕೇಂದ್ರದಲ್ಲಿ ಯಾವ ಸಚಿವರೂ ರಾಜಿನಾಮೆ ನೀಡಿಲ್ಲ ಹೀಗಾಗಿ ರಾಜ್ಯದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷ ಬಿಜೆಪಿ ಸಚಿವರು ಸಚಿವ ಜಾರ್ಜ್ ರಾಜಿನಾಮೆಗೆ ಪಟ್ಟು ಹಿಡಿದರು. ಮಾತ್ರವಲ್ಲ ಸಚಿವ ಜಾರ್ಜ್ ವಿರುದ್ಧ ನಿಲುವಳಿ ಸೂಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಪ್ರತಿಪಕ್ಷಗಳ ಧಾಳಿಗೆ ಉತ್ತರಿಸಿ ಮಾತನಾಡಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳಿದಾಕ್ಷಣ ಕೊಡಲು ಸಾಧ್ಯವಿಲ್ಲ. ಈಗಾಗಲೇ ಸಿಐಡಿ ಜಾರ್ಜ್ ವಿರುದ್ಧ ಕ್ಲೀನ್ ಚಿಟ್ ನೀಡಿದ್ದರಿಂದ ಅವರನ್ನು ನಾನೇ ಖುದ್ದಾಗಿ ಸಂಪುಟಕ್ಕೆ ಹಿಂಪಡೆದಿದ್ದೇನೆ ಎಂದರು.
ಖಾಸಗಿ ವೈದ್ಯರ ಮುಷ್ಕರ
ಬೆಳಗಾವಿಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕೆಎಂಪಿಎ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿ ಚಲೋ ಎಂಬ ಘೋಷಣೆಯಡಿಯಲ್ಲಿ ನೂರಾರು ವೈದ್ಯರು ಬೆಳಗಾವಿಗೆ ಆಗಮಿಸಿದ್ದು, ತಾರಿಹಾಳದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದರು.
ಅದರಂತೆ ಮುಖ್ಯಮಂತ್ರಿ ವೈದ್ಯರ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ್ದು ಸಂಧಾನ ವಿಫಲವಾಗಿದೆ.
ಈ ಕುರಿತು ಸುವರ್ಣವಿಧಾನಸೌಧದಲ್ಲಿ ಮಾತನಾಡಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು, 'ವೈದ್ಯರು ಪ್ರತಿಭಟನೆ ನಡೆಸಲಿ ಸಂತೋಷ. ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಬೆಳಗಾವಿ ಅಧಿವೇಶನದಲ್ಲಿ ಪ್ರತಿಭಟನೆ ಸಾಮಾನ್ಯ. ಕೆಎಂಪಿಎ ಕಾಯ್ದೆ ತಿದ್ದುಪಡಿ ಕುರಿತು ಸದಸ ಸಮಿತಿ ವರದಿ ಬಂದಿದೆ. ಈ ಬಗ್ಗೆ ಸದನ ತೀರ್ಮಾನ ಮಾಡಲಿದೆ' ಎಂದರು.
ಕರವೇ ಕಾರ್ಯಕರ್ತರ ಬಂಧನ
ಬೆಳಗಾವಿ ಅಧಿವೇಶನದ ವಿರುದ್ಧವಾಗಿ ಎಂ.ಇ.ಎಸ್ ಆಯೋಜಿಸಿದ್ದ ಮಹಾಮೇಳಾವ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕ.ರ.ವೇ ಕಾರ್ಯಕರ್ತರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಅಧಿವೇಶನದ ದಿನದಂದೆ ಮಹಾಮೇಳಾವ ಆಯೋಜಿಸಿದ್ದ ಎಂ.ಇ.ಎಸ್ ನ ನಾಡ ವಿರೋಧಿ ನೀತಿಯನ್ನು ಖಂಡಿಸಿ ನಗರದ ಚೆನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಟೈರುಗಳಿಗೆ ಬೆಂಕಿ ಹಚ್ಚಿ ಎಂ.ಇ.ಎಸ್ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಮೇಳಾವಕ್ಕೆ ಆಗಮಿಸಿರುವ ಎಂ.ಇ.ಎಸ್ ನಾಯಕರನ್ನು ಗಡಿ ಪಾರು ಮಾಡಬೇಕೆಂದು ಒತ್ತಾಯಿಸಿದರು. ಕಾರ್ಯಕ್ಕೆ ಅಡ್ಡಿಪಡಿಸಲೆಂದು ಮೇಳಾವದ ಕಡೆಗೆ ಕಾರ್ಯಕರ್ತರು ಹೊರಟಾಗ ಪೊಲೀಸರು ಅವರನ್ನು ಬಂಧಿಸಿದರು.
ಕರ್ನಾಟಕ ಸರಕಾರಕ್ಕೆ ಸವಾಲ್
ಮುಂಬೈ ಮತ್ತು ನಾಗಪುರದಲ್ಲಿ ಮಹಾರಾಷ್ಟ್ರ ಸರಕಾರದ ಅಧಿವೇಶನ ನಡೆಯುತ್ತದೆ. ಮುಂದಿನ ವರ್ಷ ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರಕಾರದ ಅಧಿವೇಶನ ನಡೆಸಲು ಉತ್ಸುಕರಾಗಿದ್ದೇವೆ ಎಂದು ಹುಸಿ ಪ್ರತಾಪ ತೋರಿದ್ದಾರೆ ಮಹಾರಾಷ್ಟ್ರದ ಮಾಜಿ ಸಚಿವ ಜಯಂತ್ ಪಾಟೀಲ್.
ಬೆಳಗಾವಿ ಮರಾಠಿಗರ ಬೆನ್ನಿಗೆ ಮಹಾರಾಷ್ಟ್ರ ಸರಕಾರವಿದೆ. ಮುಂದಿನ ಚುನಾವಣೆಯಲ್ಲಿ ಎಂಇಎಸ್ ಶಾಸಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿ. ಎಂಇಎಸ್ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೆ ಸುಪ್ರೀಂ ಕೋರ್ಟ್ ನಲ್ಲಿ ಅನುಕೂಲವಾಗುತ್ತದೆ ಎಂದು ಜಯಂತ್ ಪಾಟೀಲ್ ಹೇಳಿದ್ದಾರೆ.
ಮಹಾಮೇಳಾವ
ಬೆಳಗಾವಿ
ಅಧಿವೇಶನ
ಹಿನ್ನೆಲೆಯಲ್ಲಿ
ಅಧಿವೇಶನದ
ವಿರುದ್ಧ
ಎಂಇಎಸ್
ಮಹಾಮೇಳಾವ್
ಆಯೋಜಿಸಿತ್ತು.
ಜಿಲ್ಲಾಡಳಿತದಿಂದ
ಅನುಮತಿ
ಪಡಿಯದಿದ್ದರೂ
ಮೇಳಾವ್
ಆಯೋಜಿಸಲಾಗಿತ್ತು.
ಬೆಳಗಾವಿ
ಅಧಿವೇಶನ
ಬಹಿಷ್ಕರಿಸಿದ
ಶಾಸಕ
ಸಂಭಾಜಿ
ಪಾಟೀಲ
ಮತ್ತು
ಅರವಿಂದ
ಪಾಟೀಲ್
ಮಹಾಮೇಳಾವ್
ನಲ್ಲಿ
ಭಾಗಿಯಾಗಿದ್ದರು.
ಮಾತ್ರವಲ್ಲ ಡಿಸಿ ಆದೇಶ ಧಿಕ್ಕರಿಸಿ ಮೇಳಾವ್ ಗೆ ಕೊಲ್ಲಾಪುರ ಜಿಲ್ಲೆ ಚಂದಗಢ ಶಾಸಕಿ ಸಂಧ್ಯಾದೇವಿ ಕುಪ್ಪೇಕರ ಹಾಗೂ ಬುದ್ಧರಗಡ ಶಾಸಕ ಕೆ.ಪಿ.ಪಾಟೀಲ ಭಾಗಿಯಾಗಿದ್ದರು.
ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಸಾವು
ಬೆಳಗಾವಿಯಲ್ಲಿ ಚಳಿಗಾಲ ಅದಿವೇಶನದಲ್ಲಿ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದ ಪೊಲೀಸ್ ಪೇದೆ ಖಾನಾಪುರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಕೆ.ಎಸ್.ಅರ್.ಪಿ. ಪೇದೆ ತಿಪ್ಪೆಸ್ವಾಮಿ (57) ಹ್ರದಯಾಘಾತದಿಂದ ಸಾವನ್ನಪ್ಪಿದ ಪೊಲೀಸ್ ಪೇದೆಯಾಗಿದ್ದಾರೆ. ಇವರಿಗೆ ಖಾನಾಪುರ ಪಟ್ಟಣದ ಪಟ್ಟಣ ಪಂಚಾಯತ್ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಕಲ್ಪಿಸಿ ಕೊಡಲಾಗಿತ್ತು. ಇಲ್ಲೇ ಅವರು ಅಸುನೀಗಿದ್ದಾರೆ.