ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದ 5 ಸ್ವಾರಸ್ಯಕರ ಘಟನೆ
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ದೇವರು, ಮಾಟ-ಮಂತ್ರ್, ನೈಸ್ ಯೋಜನೆ ಹೀಗೆ ತುಂಬ ಆಸಕ್ತಿಕರ ಚರ್ಚೆಗಳು ನಡೆದಿವೆ. ಹೌದಲ್ಲವಾ? ವಿಧಾನಸಭಾ ಅಧಿವೇಶನ ಅಂದರೆ ಆರೋಪ- ಪ್ರತ್ಯಾರೋಪ, ತಮಾಷೆ, ಗಂಭೀರ ಆರೋಪ...ಹೀಗೆ ನಾನಾ ಬಗೆಯಲ್ಲಿ ಆಸಕ್ತಿಕರವಾಗಿರುತ್ತದೆ.
ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಕೂರುಂಬು ಬದಲಾವಣೆಯಾಗುತ್ತವೆ. ಕೆಲವರಿದ್ದಾರೆ, ಉದಾಹರಣೆಗೆ ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಚರ್ಚೆ, ವಾಗ್ವಾದ ಮತ್ತು ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವುದು ತಮಾಷೆಯಾಗಿರುತ್ತದೆ. ಲಘು ಹಾಸ್ಯ ಧಾಟಿಯಲ್ಲಿ ಒಬ್ಬರನ್ನೊಬ್ಬರು ಛೇಡಿಸುವುದನ್ನು ನೋಡುವುದು ಕೂಡ ತಮಾಷೆಯೇ.
ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ
ತುಂಬ ಸ್ವಾರಸ್ಯಕರ ಅನಿಸಿದ ಅಯ್ದ ಚರ್ಚೆಗಳನ್ನು ಪ್ರಸ್ತಾವ ಮಾಡುವುದು ಈ ಲೇಖನದ ಉದ್ದೇಶ. ಅದೇ ರೀತಿ ಬುಧವಾರ ನಡೆದ ಪ್ರಮುಖ 5 ಆಸಕ್ತಿಕರ ಚರ್ಚೆಯನ್ನು ನಿಮ್ಮ ಗಮನಕ್ಕೆ ತರಲಾಗುತ್ತಿದೆ. ವಾಟಾಳ್ ನಾಗರಾಜ್ ಅವರ ಪ್ರತಿಭಟನೆ ಹಾಗೂ ಬಂಧನ ಕೂಡ ಇಲ್ಲಿ ಸೇರಿಕೊಂಡಿದೆ.

ಪೂಜೆಗೆ ಒಂದೂವರೆ ಲಕ್ಷ ರುಪಾಯಿ ಖರ್ಚು
ಐವನ್ ಡಿಸೋಜಾ ಹಾಗೂ ಬಸವನಗೌಡ ಪಾಟೀಲ ಯತ್ನಾಳ ವಾಮಾಚಾರದ ವಿಚಾರವಾಗಿ ಮಾತನಾಡಿದ್ದು ಆಸಕ್ತಿಕರವಾಗಿತ್ತು. ಮಂಗಳೂರಿನಲ್ಲಿ ಚುನಾವಣೆ ಗೆಲ್ಲುವ ಸಲುವಾಗಿ ಸ್ನೇಹಿತರೊಬ್ಬರ ಮಾತು ಕೇಳಿ, ಐವನ್ ಡಿಸೋಜಾ ಕೇರಳ ಮಾಂತ್ರಿಕರೊಬ್ಬರ ಬಳಿ ತೆರಳಿದ್ದರಂತೆ. ಆತ ಹೇಳಿದ ಯಾವುದೋ ಪೂಜೆಗೆ ಒಂದೂವರೆ ಲಕ್ಷ ರುಪಾಯಿ ಖರ್ಚು ಕೂಡ ಮಾಡಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲ್ಲಲಿಲ್ಲವಂತೆ
ಇನ್ನು ಬಸವನ ಗೌಡ ಪಾಟೀಲ ಯತ್ನಾಳ ತಾವು ಮಂತ್ರಿಯಾಗಲು ಯಾವ ಪೂಜೆ ಮಾಡಬೇಕು ಎಂದು ಕೇಳಲು ತೆರಳಿದ್ದರಂತೆ. ಆ ಪೂಜೆಗೆ ಏಳೆಂಟು ಲಕ್ಷ ರುಪಾಯಿ ಖರ್ಚಾಗುತ್ತದೆ ಎಂಬ ಮಾತು ಕೇಳಿ ಸುಮ್ಮನೆ ವಾಪಸ್ ಬಂದಿದ್ದರಂತೆ. ಈ ಥರ ಬಹಳ ರಾಜಕಾರಣಿಗಳು ಹೋಗ್ತಾರೆ ಅನ್ನೋದು ಅವರ ಅಭಿಪ್ರಾಯ

ಸರ್ವ ಋತು ಹೋರಾಟಗಾರ ವಾಟಾಳ್ ನಾಗರಾಜ್ ಬಂಧನ
ಎಲ್ಲ ಋತು ಮಾನದಲ್ಲೂ ಚಳವಳಿ- ಹೋರಾಟಗಳಲ್ಲೇ ಕಾಣಿಸಿಕೊಳ್ಳುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿ, ಬಂಧನಕ್ಕೆ ಒಳಗಾದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ ಆಗುತ್ತಿಲ್ಲ ಅನ್ನೋದು ಅವರ ಆಕ್ಷೇಪವಾಗಿತ್ತು. ಇನ್ನು ಮಹಾದಾಯಿ ವಿವಾದ ಬಗೆಹರಿಸಬೇಕು ಎಂದು ಒತ್ತಾಯಿಸಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ನಾಗರಾಜ್ ರನ್ನು ಪೊಲೀಸರು ಹೊತ್ತೊಯ್ದರು.

ಸಿದ್ದರಾಮಯ್ಯ ವರ್ಸಸ್ ಈಶ್ವರಪ್ಪ ಜಗಳಬಂದಿ
ಸಿದ್ದರಾಮಯ್ಯ ಹಾಗೂ ಈಶ್ವರಪ್ಪನವರ ಜಗಳ್ ಬಂದಿ ಆಸಕ್ತಿಕರವಾಗಿರುತ್ತದೆ. "ಈಚೆಗೆ ಸಿದ್ದರಾಮಯ್ಯ ಅವರಿಗೂ ದೇವರ ಮೇಲೆ ಭಕ್ತಿ ಬಂದಿದೆ. ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ" ಎಂದು ಈಶ್ವರಪ್ಪ ಕುಟುಕಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ನಾಸ್ತಿಕ ಅಲ್ಲ. ಶಾಸಕ ಆದ ಮೇಲೆ ದೇವಸ್ಥಾನಗಳಿಗೆ ಹೋಗ್ತಿದೀನಿ. ಆದರೆ ದೇವಸ್ಥಾನದಲ್ಲಿ ದೇವರಿದ್ದಾನೆ ಅನ್ನೋದು ನಂಬಲ್ಲ. ಎನ್ನ ಕಾಲ ಕಂಬ...ಎಂಬ ವಚನ ಹೇಳುತ್ತಾ, ಈಶ್ವರಪ್ಪನವರಲ್ಲೂ ದೇವರಿದ್ದಾನೆ ಎಂದಾಗ ಸದನದಲ್ಲಿ ಜೋರು ನಗು.

ನಿವೃತ್ತ ಸರಕಾರಿ ನೌಕರರು ನೈಸ್ ನಿರ್ದೇಶಕರು
ನೈಸ್ ಅಕ್ರಮಗಳ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕತ್ತಿ ಝಳಪಿಸಿದರು. ನೈಸ್ ಸಂಸ್ಥೆ ಪರವಾಗಿ ಕೆಲ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆ ಸಂಸ್ಥೆಯಲ್ಲಿ ರಾಜ್ಯ ಸರಕಾರದ ಕೆಲವು ನಿವೃತ್ತ ಅಧಿಕಾರಿಗಳು ನಿರ್ದೇಶಕರಾಗಿದ್ದಾರೆ. ಅವರು ಅಧಿಕಾರದ ಆಯಕಟ್ಟಿನಲ್ಲಿದ್ದಾಗ ನೈಸ್ ಅಕ್ರಮಕ್ಕೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು. ಇನ್ನು ವಿದ್ಯುತ್ ಖರೀದಿ ಹಗರಣದ ಬಂಡವಾಳ ಬಿಚ್ಚಿಡುತ್ತೇನೆ ಎಂದು ಗುಡುಗಿದರು.

ಹೌದು, ನಾನು ಆರೆಸ್ಸೆಸ್ ಹಿನ್ನೆಲೆಯವನು
ವಿನಯ ಕುಲಕರ್ಣಿ ಅವರು ಧಾರ್ಮಿಕ ಕೆಲಸದಲ್ಲಿ ನಿರತರಾಗಿರುವುದರಿಂದ ಸದನಕ್ಕೆ ಬರುತ್ತಿಲ್ಲ ಎಂದು ಆಕ್ಷೇಪ ಎತ್ತಿದ್ದು ಕುಮಾರಸ್ವಾಮಿ ಅವರು. ಅದಕ್ಕೆ ಬಿಜೆಪಿಯ ಸಿ.ಟಿ.ರವಿ, ವಚನವೊಂದನ್ನು ಹೇಳಿದರು. ಆಗ ರಾಯರೆಡ್ಡಿ, ರವಿಯವರೇ ನೀವು ಆರೆಸ್ಸೆಸ್ಸಿನವರು. ನಿಮಗೂ ಬಸವಣ್ಣನಿಗೂ ಸಂಬಂಧವಿಲ್ಲ ಬಿಡಿ ಎಂದರು.
ಈ ಮಾತನ್ನು ಗಂಭೀರವಾಗಿ ತೆಗೆದುಕೊಂಡ ರವಿ, ನಾನು ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದವನು ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ರಾಯರೆಡ್ಡಿ ಅವರನ್ನು ಸುಮ್ಮನಾಗಿಸಿದರು.












Click it and Unblock the Notifications