ಅನರ್ಹರನ್ನು ಸೋಲಿಸಿ ಮತದಾರ ನನ್ನ ತೀರ್ಪನ್ನು ಪೂರ್ಣಗೊಳಿಸುತ್ತಾರೆ
ಬೆಳಗಾವಿ, ನ 27: "ಈ ದೇಶದ ಸಂವಿಧಾನಕ್ಕೆ ನಾವು ತಲೆಬಾಗಿದ್ದೇವೆ. ಅದರ ಪ್ರಕಾರ ನಾವು ಶಾಸಕರಾಗಿ ಅಸೆಂಬ್ಲಿಗೆ ಪ್ರವೇಶ ಮಾಡುತ್ತೇವೆ. ಆ ಸಂವಿಧಾನದ ಅನುಚ್ಚೇದಗಳ ಪ್ರಕಾರ, ನಾನು ಅವರನ್ನು ಅನರ್ಹರೆಂದು ತೀರ್ಪು ನೀಡಿದ್ದೇನೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಕುಮಾರ್, "ಅನರ್ಹರು ಸದನದಲ್ಲಿ ನಡೆದುಕೊಂಡ ರೀತಿ ಸರಿಯಲ್ಲ. ಅದಕ್ಕೆ ಬೇಕಾದ ದಾಖಲೆಗಳನ್ನು ಕೊಟ್ಟು, ಅವರಿಗೆ ಉತ್ತರಿಸಲು ಸಮಯಾವಕಾಶ ನೀಡಿ ಅವರನ್ನು ಅನರ್ಹರೆಂದು ತೀರ್ಪು ನೀಡಲಾಗಿದೆ".
"ಅದಾದ ನಂತರ ಅವರೆಲ್ಲಾ ಸುಪ್ರೀಂಕೋರ್ಟ್ ಮೆಟ್ಟಲೇರಿದರು, ಅವರೆಲ್ಲಾ ಅನರ್ಹರೆನ್ನುವ ತೀರ್ಪು ಅಲ್ಲೂ ಬಂತು. ಇಷ್ಟಾದ ಮೇಲೂ ಅವರೆಲ್ಲಾ ತಾವೆಲ್ಲಾ ಅರ್ಹರೆಂದು ಹೇಳಿದರೆ. ಅವರಿಗೆ ತಲೆ ಸರಿಯಿಲ್ಲ.ಯಾವುದಾದರೂ ವೈದ್ಯರ ಬಳಿ ತಪಾಸಣೆ ಮಾಡುವುದು ಸೂಕ್ತ" ಎಂದು ರಮೇಶ್ ಕುಮಾರ್ ಲೇವಡಿ ಮಾಡಿದ್ದಾರೆ.

"ತೀರ್ಪು ನೀಡಿದ ನಂತರ, ಬಹಳ ಕಡೆ ಪ್ರವಾಸ ಮಾಡಿದ್ದೇನೆ. ಜನ ನೀವು ತೆಗೆದುಕೊಂಡ ನಿರ್ಧಾರ ಸರಿಯೆಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ನೀವು ಚುನಾವಣೆಗೂ ಸ್ಪರ್ಧಿಸಬಾರದೆಂದು ಹೇಳಿದ್ದೀರಿ, ಆದರೆ ಸುಪ್ರೀಂಕೋರ್ಟ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದೆ" ಎಂದು ಜನ ಹೇಳುತ್ತಾರೆ.
"ಅದಕ್ಕೆ ನಾನು ಹೇಳಿದೆ. ನಾನು ಹೇಳಿದ ಉಳಿದ ಕೆಲಸವನ್ನು, ಅಂದರೆ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಕೆಲಸವನ್ನು ಜನ ಮಾಡಲಿದ್ದಾರೆ" ಎಂದು ರಮೇಶ್ ಕುಮಾರ್ ವಿಶ್ವಾಸದ ಮಾತನ್ನಾಡಿದ್ದಾರೆ.
"ಈ ದೇಶದಲ್ಲಿ ಸುಪ್ರೀಂಕೋರ್ಟ್ ತೀರ್ಪು ಅಂತಿಮ. ಅದು ನೀಡುವ ವರ್ಡಿಕ್ಟ್ ಇಷ್ಟವಿದೆಯೋ, ಇಲ್ಲವೋ, ಅದನ್ನು ನಾವು ಒಪ್ಪಬೇಕಾಗುತ್ತದೆ" ಎಂದು ರಮೇಶ್ ಕುಮಾರ್ ಹೇಳಿದರು.












Click it and Unblock the Notifications