ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!
ಬೆಂಗಳೂರು, ಮೇ 31 : ಕೀಟನಾಶಕದಲ್ಲಿ ಬಳಸಲಾಗುವ ವಿಷಾಕಾರಕ ನಿಕೋಟಿನ್, ಜರ್ಮನಿಯಲ್ಲಿ ಹಿಂದೆ ಮನುಷ್ಯರನ್ನು ಕೊಲ್ಲಲು ಬಳಸಲಾಗುತ್ತಿದ್ದ ಹೈಡ್ರೋಜನ್ ಸೈನೈಡ್, ಇಲಿ ಪಾಶಾಣದಲ್ಲಿ ಉಪಯೋಗಿಸಲಾಗುವ ಅರ್ಸೆನಿಕ್, ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುವ ಕ್ಯಾಡ್ಮಿಯಂ... ಇವು ಮೂರು ಇಂಚು ಉದ್ದದ ಸಿಗರೇಟಿನಲ್ಲಿ ಇರುವ ಹಾನಿಕಾರಕ ಪದಾರ್ಥಗಳಲ್ಲಿ ಇರುವ ಡೆಡ್ಲಿ ಕಿಲ್ಲರ್ಸ್. [ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣ]
ಸಿಗರೇಟಿನಲ್ಲಿ ಹುದುಗಿರುವ ಶೇಕಡಾ 70ರಷ್ಟು ರಾಸಾಯನಿಕಗಳು ಕ್ಯಾನ್ಸರ್ ರೋಗವನ್ನು ಬಳುವಳಿಯಾಗಿ ನೀಡುತ್ತವೆ. ಸಿಗರೇಟಿನ ಒಂದೊಂದು ಜುರುಕಿಯೂ ಸಾವಿನತ್ತ ವೇಗವಾಗಿ ನಮ್ಮನ್ನು ತಳ್ಳುತ್ತದೆ. ಗಂಟಲು, ಮೂಗು, ಬಾಯಿ, ಪುಪ್ಪುಸ, ಜಠರ, ಮೂತ್ರಕೋಶ, ಯಕೃತ್ತು ಕ್ಯಾನ್ಸರಿಗೆ ಸಿಗರೇಟು ಕಾರಣವಾಗುತ್ತದೆ. ಹೃದಯಬೇನೆ, ಮಾನಸಿಕ ಖಿನ್ನತೆ ಸಿಗರೇಟಿನಿಂದ ಸಿಗುವ ಉಡುಗೊರೆ. [ಧೂಮಪಾನಿಗಳೆ ನಿಮಗಿದು ನೆನಪಿರಲಿ]
ತಂಬಾಕು ಸಂಬಂಧಿತ ರೋಗದಿಂದ ಪ್ರತಿ 6 ಸೆಕೆಂಡಿಗೆ ಒಬ್ಬ, ಪ್ರತಿ ಒಂದು ನಿಮಿಷಕ್ಕೆ 10 ಜನರು ಜಾಗತಿಕವಾಗಿ ಸಾವಿಗೀಡಾಗುತ್ತಿದ್ದಾರೆ. ಪರೋಕ್ಷ ಸಿಗರೇಟು ಸೇವನೆಯಿಂದಾಗಿ ಪ್ರತಿವರ್ಷ 6 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಧೂಮಪಾನಿಗಳಿಗೆ ಹುಟ್ಟುವ ಮಕ್ಕಳು ವಿಕಲಾಂಗವಾಗುವ ಸಾಧ್ಯತೆ ಹೆಚ್ಚು. ಧೂಮಪಾನ ಪುರುಷರ ಪುರುಷತ್ವವನ್ನು ಕಸಿಯುತ್ತದೆ.
ಸಿಗರೇಟಿನ ಹೊಗೆಯಲ್ಲಿ 4 ಸಾವಿರಕ್ಕೂ ಹೆಚ್ಚು ರಾಸಾಯನಿಕ ಪದಾರ್ಥಗಳಿದ್ದು, 250 ಪದಾರ್ಥಗಳು ಆರೋಗ್ಯವನ್ನು ಕೆಡಿಸುತ್ತವೆ. ಧೂಮಪಾನ ಖಿನ್ನತೆ ದೂರವಾಗಿಸುತ್ತದೆ, ಸಿಟ್ಟನ್ನು ಶಮನ ಮಾಡುತ್ತದೆ, ಸಿಕ್ಕಾಪಟ್ಟೆ ಸುಸ್ತಾದಾಗ ರೆಸ್ಟ್ ಸಿಗುತ್ತದೆ, ಒಂಟಿತನವನ್ನು ದೂರ ಮಾಡುತ್ತದೆ, ವಿಚಿತ್ರ ಖುಷಿಯನ್ನು ನೀಡುತ್ತದೆ ಎಂದೇನಾದರೂ ತಿಳಿದಿದ್ದಲ್ಲಿ ನಿಮಗಿಂತ ಮೂರ್ಖರು ಇನ್ನೊಬ್ಬರಿಲ್ಲ ಅಂತಾರೆ ವೈದ್ಯರು. [ಸಿಗರೇಟ್ ಕೊಲ್ಲಲ್ಲ, ಕ್ಯಾನ್ಸರ್ ಕೊಲ್ಲತ್ತೆ!]
ಇಷ್ಟೆಲ್ಲ ಓದಿದ ಮೇಲೆಯೂ, ಧೂಮಪಾನ ಮಾಡುವುದು ಬಿಡುವುದು, ತಂಬಾಕು ಸೇವನೆ ಮಾಡುವುದು ಬಿಡುವುದು, ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು. ದಿನಕ್ಕೆ ಒಂದು ಪ್ಯಾಕ್ ಸಿಗರೇಟು ಸೇವಿಸುವವರಾಗಿದ್ದರೆ, ಅದನ್ನು ಈ ಕ್ಷಣ ತ್ಯಜಿಸಿದರೆ, ಐದು ವರ್ಷದಲ್ಲಿ ಎಷ್ಟು ಹಣ ಉಳಿಸುತ್ತೀರೆಂದು ಲೆಕ್ಕ ಹಾಕಿ.
ಮೋದಿ ಸೇರಿದಂತೆ ಯಾರು ಏನು ಹೇಳುತ್ತಿದ್ದಾರೆ
ತಂಬಾಕು ಸೇವನೆಯ ದುಷ್ಪರಿಣಾಮದ ಬಗ್ಗೆ, ಮೇ 31ರಂದು ಆಚರಿಸಲಾಗುವ ವಿಶ್ವ ತಂಬಾಕು ವಿರೋಧಿ ದಿನ, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರ್ಯಾರು ಏನು ಹೇಳಿದ್ದಾರೆ ಮುಂದೆ ಓದುತ್ತ ಸಾಗಿರಿ.
|
ಆರೋಗ್ಯವಂತ ಭಾರತಕ್ಕಾಗಿ ಸಿಗರೇಟು ಬಿಡಿ - ಮೋದಿ
ಧೂಮಪಾನದಿಂದ ಸೇವಿಸುವವರ ಆರೋಗ್ಯ ಮಾತ್ರ ಹದಗೆಡುವುದಿಲ್ಲ, ಸುತ್ತಲಿನವರ ಆರೋಗ್ಯ ಕೂಡ ಕೆಡುತ್ತದೆ. ಆರೋಗ್ಯಕರ ಭಾರತದ ನಿರ್ಮಾಣಕ್ಕಾಗಿ ಸಿಗರೇಟು ಬಿಟ್ಟುಬಿಡಿ.
|
ವಿಶ್ವ ಸಂಸ್ಥೆಯ ಸಂದೇಶ
ವಿಶ್ವ ತಂಬಾಕು ವಿರೋಧಿ ದಿನ 2014ರ ಥೀಮ್ ಏನೆಂದರೆ, ತಂಬಾಕಿನ ಮೇಲಿನ ತೆರಿಗೆ ಹೆಚ್ಚಿಸಿ, ಸಾವು ಅನಾರೋಗ್ಯದ ಪ್ರಮಾಣ ತಗ್ಗಿಸಿ.
|
ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ
ವಿಶ್ವ ತಂಬಾಕು ವಿರೋಧಿ ದಿನ ಮಾತ್ರವಲ್ಲ, ನಿಮಗಾಗಿ ನಿಮ್ಮವರಿಗಾಗಿ ಪ್ರತಿದಿನ ತಂಬಾಕು ವಿರೋಧಿ ದಿನ ಆಚರಿಸಿ. ಜೀವನವನ್ನು ಸೆಲಿಬ್ರೇಟ್ ಮಾಡಿರಿ.
|
ಕ್ರಿಕೆಟ್ ಕಾಮೆಂಟರ್ ಹರ್ಷಾ ಬೋಗ್ಳೆ
ಇವತ್ತು ನೋ ಟೊಬ್ಯಾಕೋ ಡೇನಾ? ಸಿಗರೇಟು ತ್ಯಜಿಸಿ, ಬದುಕು ಪಡೆಯಲು ಇದಕ್ಕಿಂತ ಉತ್ತಮ ದಿನ ಯಾವುದಿದೆ? ಇದರಿಂದ ಕೆಟ್ಟದು ಮಾತ್ರ ಆಗುತ್ತದೆ.
|
ಬೆಂಗಳೂರಿನ ವೈದ್ಯ ಡಾ. ಗಿರಿಧರ್
ವಿಶ್ವ ಧೂಮರಹಿತವಾಗಲು ನಿಮ್ಮ ಪುಟ್ಟ ಕಾಣಿಕೆ ನೀಡಿರಿ. ಈ ಚಿತ್ರದಲ್ಲಿರುವ ಸಂದೇಶ ಎಲ್ಲೆಡೆ ಪಸರಿಸಿ.
ಸಿಗರೇಟು ತುಂಡು ತುಂಡು ಮಾಡಿದ ಆಟಗಾರರು
ನಟ ಹಿರನ್ ಚಟರ್ಜಿ ಅವರು ಫುಟ್ಬಾಲ್ ಆಟಗಾರರಾದ ಮೆಹ್ತಾಬ್ ಹುಸೇನ್ ಮತ್ತು ಅರ್ನಬ್ ಮೊಂಡಾಲ್ ಜೊತೆ ಸೇರಿ ಸಿಗರೇಟನ್ನು ತುಂಡು ತುಂಡು ಮಾಡುತ್ತಿರುವುದು.
ಮರಳಿನ ಮೇಲೆ ಕಲಾವಿದನ ಸಂದೇಶ
ಪೂರಿ ಸಮುದ್ರ ತಟದ ಮೇಲೆ ಕಲಾವಿದ ಸುದರ್ಶನ್ ಅವರು ತಂಬಾಕು ದುಷ್ಪರಿಣಾಮದ ಬಗ್ಗೆ ರಚಿಸಿರುವ ಕಲಾಸಂದೇಶ.