ಜಲ್ಲಿಕಟ್ಟಿಗಾಗಿ ಬೆಂಗಳೂರಿನಲ್ಲಿಯೂ ದನಿಯೆತ್ತಿದ ತಮಿಳರು
ಬೆಂಗಳೂರು, ಜನವರಿ 19 : "ನಾವು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ತಮಿಳರು. ನಾವು ಜಲ್ಲಿಕಟ್ಟು ಕ್ರೀಡೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ನಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆಯೂ ಇದೆ."
ಇದು ನಿಷೇಧಿಸಲಾಗಿರುವ ಜಲ್ಲಿಕಟ್ಟು ಕ್ರೀಡೆಯನ್ನು ಬೆಂಬಲಿಸಿ ಬೆಂಗಳೂರಿನ ಟೌನ್ ಹಾಲ್ ಮುಂದೆ ಉಗ್ರ ಪ್ರತಿಭಟನೆ ನಡೆಸುತ್ತಿರುವ ನೆರೆದಿರುವ ನೂರಾರು ತಮಿಳರಲ್ಲಿ ಒಬ್ಬನಾಗಿರುವ ರಮೇಶ್ ಕಣ್ಣನ್ನ ಭಾವೋದ್ವೇಗದ ಮಾತು.[ಗ್ಯಾಲರಿ : ಜಲ್ಲಿಕಟ್ಟುಗಾಗಿ ಪ್ರತಿಭಟನೆ, ತಮಿಳರ ಅರ್ಭಟ]
ಇಡೀ ತಮಿಳುನಾಡನ್ನು ಪಸರಿಸಿರುವ ಪ್ರತಿಭಟನೆ ಈಗ ಬೆಂಗಳೂರಿನಲ್ಲಿಯೂ ಕಾಲಿಟ್ಟಿದೆ. ಜಲ್ಲಿಕಟ್ಟು ಮೇಲೆ ಹೇರಲಾಗಿರುವ ನಿಷೇಧವನ್ನು ಹಿಂತೆಗೆಯಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿರುವ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ.

ಜಲ್ಲಿಕಟ್ಟು ಪರ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ
ಪೊಂಗಲ್ ಸಂದರ್ಭದಲ್ಲಿ ನಡೆಸಲಾಗುವ, ತಮಿಳುನಾಡಿನ ಸಂಕೇತವಾಗಿರುವ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿದ್ದನ್ನು ವಿರೋಧಿಸಿ ಬೆಂಗಳೂರಿನಲ್ಲಿಯೂ ಪ್ರತಿಭಟನೆ ನಡೆಸಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಬೆಂಗಳೂರಿನ ತಮಿಳರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಜಲ್ಲಿಕಟ್ಟು ಪರವಾಗಿ ಘೋಷಣೆ ಕೂಗಿದರು.

ಟೌನ್ ಹಾಲಿಗೆ ಓಡೋಡಿ ಬಂದ ಟೆಕ್ಕಿಗಳು
ಟೌನ್ ಹಾಲ್ ಮುಂದೆ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಟೆಕ್ಕಿಗಳು ಕೆಲಸಕ್ಕೆ ಅರ್ಧ ದಿನ ಚಕ್ಕರ್ ಹಾಕಿ ಬಂದಿದ್ದರು.

ಹಲಸೂರಿನಲ್ಲೂ ಪ್ರತಿಭಟನೆ ನಡೆಯಲಿದೆ
ತಮಿಳರು ಹೆಚ್ಚು ವಾಸಿಸುತ್ತಿರುವ ಹಲಸೂರು ಪ್ರದೇಶದಲ್ಲಿಯೂ ಇನ್ನೂ ದೊಡ್ಡ ಪ್ರಮಾಣದಲ್ಲಿ ಜಲ್ಲಿಕಟ್ಟು ಪರವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇದು ಬರುವ ಭಾನುವಾರ ನಡೆಯಲಿದೆ. ಇದಕ್ಕೆ ಪೊಲೀಸರು ಪರವಾನಗಿ ಕೊಟ್ಟಿದ್ದಾರಾ ಇನ್ನೂ ಗೊತ್ತಿಲ್ಲ.

ನಿಷೇಧ ಹೇರುವುದು ಸಮಸ್ಯೆಗೆ ಪರಿಹಾರವಲ್ಲ
ಪೇಟಾ ತಗಾದೆ ತೆಗೆದ ಮಾತ್ರಕ್ಕೆ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರುವುದು ಸಾಧುವಲ್ಲ. ಈ ಕ್ರೀಡೆಯನ್ನು ನಿಯಂತ್ರಿಸಲು, ಹೆಚ್ಚು ಹಿಂಸೆಯಾಗದಂತೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವನ್ನು ಜಾರಿಗೆ ತರಬೇಕು ಅಷ್ಟೇ. ಗೂಳಿ ಮತ್ತು ಆಟಕ್ಕಿಳಿಯುವವರ ಆರೋಗ್ಯದ ತಪಾಸಣೆ ಮಾಡಲಾಗುತ್ತದೆ. ಇದು ತಮಿಳರನ್ನು ಒಗ್ಗೂಡಿಸಲು ಸಹಾಯ ಮಾಡುತ್ತದೆ ಅಂತಾರೆ ಟೆಕ್ಕಿ ಕಾರ್ತಿಕ್.












Click it and Unblock the Notifications