ಆದಿವಾಸಿಗಳ ಕೊಂದು ಬೆಂಗಳೂರಲ್ಲಿ ಅಡಗಿದ್ದ ಉಗ್ರ
ಬೆಂಗಳೂರು, ಜ.27 : ಬೆಂಗಳೂರಿನಲ್ಲಿ ಅಡಗಿದ್ದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಉಗ್ರನನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತ ಉಗ್ರ ಅಸ್ಸಾಂನಲ್ಲಿ ನಡೆದ ಆದಿವಾಸಿಗಳ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ.
ಬಂಧಿತ ಉಗ್ರನನ್ನು ಸಂಜು ಬೋಡೊಲೋಯಿ (29)ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಪೊಲೀಸರಿಗೆ ಉಗ್ರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಡಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು.

ಸಂಜು ಡಿಸೆಂಬರ್ 23ರಂದು ಅಸ್ಸಾಂನಲ್ಲಿ ನಡೆದ ಆದಿವಾಸಿಗಳ ಹತ್ಯೆಯ ಪ್ರಮುಖ ಆರೋಪಿಯಾಗಿದ್ದು ಗೌಹಾತಿಯ ಎನ್ಐಎ ತಂಡ ಸಂಜುಗಾಗಿ ಹುಡುಕಾಟ ನಡೆಸಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಎಂ.ಎನ್.ರೆಡ್ಡಿ ಅವರು, ಅವರು ಸಿಸಿಬಿ ಪೊಲೀಸರ ತಂಡವನ್ನು ಸಂಜುವನ್ನು ಬಂಧಿಸುವ ಕಾರ್ಯಾಚರಣೆಗಾಗಿ ರಚಿಸಿದ್ದರು.[ಅಸ್ಸಾಂ ದಾಳಿಯ ಪ್ರಮುಖ ಸೂತ್ರಧಾರ ಸಂಜು]
ಜನವರಿ 26ರ ಸೋಮವಾರ ಸಿಸಿಬಿ ಪೊಲೀಸರ ತಂಡ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೀಲಾದ್ರಿ ನಗರದ 8ನೇ ಕ್ರಾಸ್ನ ಮನೆಯ ಮೇಲೆ ದಾಳಿ ನಡೆಸಿ ಸಂಜುವನ್ನು ಬಂಧಿಸಿದ್ದಾರೆ. ಪೊಲೀಸರು ದಾಳಿ ನಡೆಸುವಾಗ ಸಂಜು ಮನೆಯಲ್ಲಿ ಅಡಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸಂಜುವನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ ಮೊಬೈಲ್ ಫೋನ್ಅನ್ನು ವಶಪಡಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿಯೇ ವೋಡಾಫೋನ್ ಸಿಮ್ ಅನ್ನು ಸಂಜು ಖರೀದಿ ಮಾಡಿದ್ದ, ಈತನ ಹೆಸರಿನಲ್ಲಿದ್ದ ಪಾನ್ ಕಾರ್ಡ್ಅನ್ನು ಎಂದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿಮ್ ಕಾರ್ಡ್ ಪಡೆಯಲು ಸಂಜು ನಕಲಿ ವಿಳಾಸ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಿಮ್ ಕಾರ್ಡ್ ನೀಡುವಾಗಲೂ ವಿಳಾಸದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಸಂಗ್ರಹಿಸಿಲ್ಲ. ಆದ್ದರಿಂದ ನಕಲಿ ವಿಳಾಸ ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಆದ ಸಂಜು, ಬಾಂಗ್ಲಾದೇಶದಲ್ಲಿ ಎಕೆ-47 ಸೇರಿದಂತೆ ಮತ್ತಿತರ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ಪಡೆದುಕೊಂಡಿದ್ದ. ಅಸ್ಸಾಂನಲ್ಲಿ ಮಾರಣಹೋಮ ನಡೆದ ಬಳಿಕ ಬಂಧನದ ಭೀತಿಯಿಂದ ಸಂಜು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ.
ಗೌಹಾತಿಯ ಎನ್ಐಎ ತಂಡ ಈತನಿಗಾಗಿ ಹುಡುಕಾಟ ನಡೆಸುತ್ತಿತ್ತು. ಅಸ್ಸಾಂನಲ್ಲಿ ಮಾರಣ ಹೋಮ ನಡೆಸಿದ ಬಳಿಕ ರೈಲಿನಲ್ಲಿ ಬೆಂಗಳೂರಿಗೆ ಆಗಮಿಸಿ ಈತ ಅಡಗಿ ಕುಳಿತಿದ್ದ. ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಸ್ಸಾಂ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಸಂಜುವನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.












Click it and Unblock the Notifications