ತಿಪ್ಪೆರುದ್ರಸ್ವಾಮಿಗೆ ಕಸವೆಂದರೆ ಬಲು ಇಷ್ಟವಂತೆ
(ಡಂಪಿಂಗ್ ಸ್ವಾಮಿ ಮಹಾತ್ಮೆ - ಭಾಗ 2) ಈ ಕ್ಷೇತ್ರದ ಮಹಿಮೆಯ ಬಗ್ಗೆ ಕೊಂಚ ಹೇಳಲೆಬೇಕು. ಕೆಲವು ವರ್ಷಗಳ ಹಿಂದೆ ನಮ್ಮ ಬಿಬಿಎಂಪಿಯವರು ಇಲ್ಲಿ ಡಂಪಿಂಗ್ ಸ್ವಾಮಿಯ ಚಿಕ್ಕ ಮೂರ್ತಿಯನ್ನು ಪ್ರತಿಷ್ಠಾಪಿಸಿದಾಗ 3,000 ಜನಸಂಖ್ಯೆ ಇರುವ ಮಂಡೂರಿನ ಜನ ಸ್ವಾಮಿಯ ಮಹಿಮೆಯನ್ನು ತಿಳಿಯದೇ ಸ್ವಾಗತಿಸಬೇಕೋ ಬಿಡಬೇಕೋ ಎಂಬ ಗೊಂದಲದಲ್ಲಿದ್ದರು. ನಮ್ಮ ಜನಪ್ರತಿನಿಧಿಗಳು ಈ ದೇವರು ಇಲ್ಲಿ ಬರುವುದರಿಂದ ಈ ಕ್ಷೇತ್ರದ ಮಹಿಮೆ ಹೆಚ್ಚಾಗುತ್ತದೆ, ಯಾತ್ರಿಗಳ ಸಂಖ್ಯೆ ಹೆಚ್ಚುತ್ತದೆ, ನಿಮಗೆಲ್ಲ ಉದ್ಯೋಗ ಸಿಗುತ್ತದೆ ಹಾಗೂ ನಿಮ್ಮೆಲ್ಲರ ಬಾಳು ಹಸನಾಗುತ್ತದೆ ಎಂದು ಆಶ್ವಾಸನೆ ನೀಡಿದರು. ಅರೆಮನಸ್ಸಿನಿಂದಲೇ ಒಪ್ಪಿದರು ಜನ.

ಈ ದೇವರಿಗೆ ಕಸವೆಂದರೆ ತುಂಬಾ ಇಷ್ಟವಂತೆ ಅದನ್ನ ಎಲ್ಲಿಂದ ತರುವುದು ಎಂದು ಗ್ರಾಮಸ್ಥರು ಯೋಚನೆಯಲ್ಲಿದ್ದಾಗ, ಬಿಬಿಎಂಪಿಯವರು ನೀವೇನು ಯೋಚನೆ ಮಾಡಬೇಡಿ ನಾವು ನಮ್ಮ ಖರ್ಚಿನಲ್ಲೇ ಇಡಿ ಬೆಂಗಳೂರಿನ ಪ್ರತಿಯೊಂದು ಮನೆಯಿಂದಲೂ ಕಸವನ್ನು ಸಂಗ್ರಹಿಸಿ ನಮ್ಮ ಖರ್ಚಿನಲ್ಲೇ ಸ್ವಾಮಿಯ ಸನ್ನಿಧಿಗೆ ತಲುಪಿಸುತ್ತೇವೆ ಎಂದರು. ಹಾಗೆಯೆ ನಡೆದುಕೊಂಡರು ಕೂಡ. ನೋಡನೋಡುತ್ತಿದ್ದಂತೆ ತಿಪ್ಪೆರುದ್ರಸ್ವಾಮಿ ಬೆಳೆಯತೊಡಗಿದ. ಇವರು ಕಳುಹಿಸುವ 5-10 ಲಾರಿಗಳ ಕಸ ಸ್ವಾಮಿಗೆ ಸಾಲದಾಯ್ತು. ಇನ್ನೂ ಬೇಕು ಇನ್ನೂ ಬೇಕು ಎಂದು ಹೂಂಕರಿಸತೊಡಗಿದ.
ಕಸದ ಜೊತೆಗೆ ಸತ್ತ ನಾಯಿಗಳು, ಇತರ ಪ್ರಾಣಿಗಳನ್ನು ಕಳುಹಿಸತೊಡಗಿದರು. ಕೊನೆಗೆ ಸತ್ತ ಮನುಷ್ಯರ ದೇಹಗಳನ್ನು ಕಳುಹಿಸಿದರು. ಆದರೂ ಸ್ವಾಮಿ ಸಂತೃಪ್ತನಾಗಲಿಲ್ಲ ಇನ್ನೂ ಬೇಕು ಎಂದಾಗ ಸ್ವಾಮಿಯ ವಾಹನಗಳಾದ ಕ್ರೂರ ನಾಯಿಗಳು ಗ್ರಾಮಸ್ಥರ ಸುಮಾರು 40-50 ಕುರಿಗಳನ್ನು ಬಲಿಪಡೆದು ಅಭಿಷೇಕ ಮಾಡಿದವು. ಇಷ್ಟಕ್ಕೆ ಸಂತೃಪ್ತನಾಗುವನೆ ಡಂಪಿಂಗ್ ಸ್ವಾಮಿ? ಇವನ ಕೋಪ ಊರ ಜನರ ಮೇಲೆ ಬಿತ್ತು. ಎಂಟತ್ತು ಜನ ಒಬ್ಬರಾದ ಒಬ್ಬರು ಹಾಗೆಯೇ ತರಗೆಲೆಗಳಂತೆ ಸತ್ತು ಹೋದರು.












Click it and Unblock the Notifications