26ಕ್ಕೆ ಕೌದೇನಹಳ್ಳಿ ಕೆರೆ ಆವರಣದಲ್ಲಿ 'ಕೆರೆ ದೀಪೋತ್ಸವ'
ಬೆಂಗಳೂರು, ಅಕ್ಟೋಬರ್ 24: ಇದೇ ತಿಂಗಳ 29ರಂದು ನರಕ ಚತುರ್ದಶಿ. ಪಟಾಕಿ ಹೊಡೆದು ಪರಿಸರ ಮಲಿನಗೊಳಿಸುವ ನಿರ್ಧಾರ ಕೈ ಬಿಟ್ಟು, ಪರಿಸರ ಸ್ನೇಹಿ ಹಬ್ಬದಾಚರಣೆಗೆ ಉತ್ತೇಜನ ನೀಡುವ ಉದ್ದೇಶದಿಂದ 'ಕೆರೆ ದೀಪೋತ್ಸವ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಿವಿಧ ಸಂಘ-ಸಂಸ್ಥೆಗಳು ಒಟ್ಟಾಗಿ ಕೈಗೊಂಡಿರುವ ಈ ವಿಶಿಷ್ಟ ಕಾರ್ಯಕ್ರಮದ ವಿವರಗಳನ್ನು ಇಲ್ಲಿ ನೀಡಲಾಗಿದೆ. ಯುನೈಟೆಡ್ ವೇ ಬೆಂಗಳೂರು, ಪರಿಸರ ಸಂರಕ್ಷಣಾ ಟ್ರಸ್ಟ್ ಮತ್ತು ಬಿಬಿಎಂಪಿ ಸಂಯುಕ್ತವಾಗಿ ಅಕ್ಟೋಬರ್ 26ರಂದು 'ಕೆರೆ ದೀಪೋತ್ಸವ' ಆಯೋಜಿಸಿವೆ. ದೀಪಾವಳಿ ಪ್ರಯುಕ್ತ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.[ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ]
26ರ ಸಂಜೆ 4ರಿಂದ 6 ಗಂಟೆವರೆಗೆ ಕೃಷ್ಣರಾಜಪುರದ ಐಟಿಐ ಕಾಲೋನಿ ಸಮೀಪದ ಕೌದೇನಹಳ್ಳಿ ಕೆರೆ ಅವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಕ್ಕೆ ಚಿತ್ರಕಲೆ ಹಾಗೂ ರಂಗೋಲಿ ಕಾರ್ಯಕ್ರಮ ಇದೆ. 5.30ಕ್ಕೆ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಅರಿವು ಮೂಡಿಸಲಾಗುವುದು. 5.45ಕ್ಕೆ ಮುಖ್ಯ ಅತಿಥಿಗಳು ಹಾಗೂ ನಾಗರಿಕರು ದೀಪ ಬೆಳಗಿಸಲಿದ್ದಾರೆ.[ಅಜ್ಞಾನದ ಕತ್ತಲೆಯನ್ನು ನೀಗಿಸುವ ಜ್ಞಾನ ಜ್ಯೋತಿ ದೀಪಾವಳಿ]
ಮುಖ್ಯ ಅತಿಥಿಯಾಗಿ ಮೇಯರ್ ಪದ್ಮಾವತಿ, ಕೆ.ಆರ್.ಪುರಂನ ಶಾಸಕ ಬಿ.ಎ.ಬಸವರಾಜು, 26ನೇ ವಾರ್ಡ್ ನ ಕಾರ್ಪೋರೇಟರ್ ಪದ್ಮಾವತಿ ಶ್ರೀನಿವಾಸ್, ಮುಖ್ಯ ಎಂಜಿನಿಯರ್ ಗಳಾದ ಸೋಮಶೇಖರ್, ಬಿ.ವಿ.ಸತೀಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿಯಾದ ಸಾಸಿವೆ ಎಣ್ಣೆ, ಬೇವಿನ ಎಣ್ಣೆ, ಕಡ್ಲೇಕಾಯಿ ಎಣ್ಣೆ, ಎಳ್ಳೆಣ್ಣೆ, ಇಪ್ಪೆ ಎಣ್ಣೆ, ಹರಳೆಣ್ಣೆ -ಈ ಐದು ಬಗೆಯ ಎಣ್ಣೆಗಳನ್ನು ಬಳಸಲಾಗುತ್ತದೆ. ಇದರ ಜತೆಗೆ ಆರೋಗ್ಯಕ್ಕೂ ಪೂರಕವಾದ, ಸೊಳ್ಳೆಗಳನ್ನು ದೂರವಿಡಬಲ್ಲಂಥ ಎಣ್ಣೆಗಳನ್ನು ದೀಪ ಬೆಳಗಲು ಬಳಸಲಾಗುತ್ತದೆ.[ಸೊಳ್ಳೆಗಳಿಗೆ ಯಮಪಾಶ, ಮಂಗಳೂರಿನ ಈ ಮೋಝಿಕ್ವಿಟ್]
ರೆಡ್ ಎಫ್ ಎಂನ ಹೆಸರಾಂತ ರೆಡಿಯೋ ಜಾಕಿ ರಾಜ್ ಕೂಡ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಎಲೆ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತಿತರ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.
ಸಂಜೆ 6ಕ್ಕೆ ಉಪಾಹಾರ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗಾಗಿ [email protected] ಹಾಗೂ ಮೊಬೈಲ್ ಸಂಖ್ಯೆ 9739059886 ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.