ಗಾಲಿ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು
ಬೆಂಗಳೂರು, ಆ.6: ಎಎಂಸಿ (ಅಸೋಸಿಯೇಟೆಡ್ ಮೈನಿಂಗ್ ಕಂಪನಿ) ಹಾಗೂ ಡೆಕ್ಕನ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಶುಭ ಸುದ್ದಿ ಸಿಕ್ಕಿದೆ. ಎಎಂಸಿ ಮೈನಿಂಗ್ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಗಾಲಿ ರೆಡ್ಡಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಎಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಬಾರದು, ವಿಚಾರಣೆಗೆ ಹಾಜರಾಗತಕ್ಕದ್ದು, ಇಬ್ಬರ ವೈಯಕ್ತಿಕ ಶ್ಯೂರಿಟಿ 10 ಲಕ್ಷ ರು ಮೌಲ್ಯದ ಬಾಂಡ್ ನೀಡಬೇಕು ಎಂದು ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ನೀಡಿದೆ. ಕಳೆದ ಎರಡೂವರೆ ವರ್ಷಗಳಿಂದ ಜೈಲಿನಲ್ಲಿರುವ ರೆಡ್ಡಿ ಅವರಿಗೆ ಕರ್ನಾಟಕದಲ್ಲಿ ಸಿಕ್ಕಿರುವ ಮೊದಲ ಜಾಮೀನಾಗಿದೆ. ಐದು ಪ್ರಕರಣಗಳಲ್ಲಿ ಒಂದರಲ್ಲಿ ಜಾಮೀನು ಸಿಕ್ಕಿದೆ.
ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ರೆಡ್ಡಿ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಗಾಲಿ ರೆಡ್ಡಿ ಅವರಿಗೆ ಜಾಮೀನು ನೀಡಬಾರದು ಎಂದು ಸಿಬಿಐ ಆಕ್ಷೇಪ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸಿಬಿಐ ವಿಶೇಷ ನ್ಯಾಯಾಲಯ ಎರಡೂ ಕಡೆ ವಾದ ಪ್ರತಿವಾದವನ್ನು ಆಲಿಸಿದ್ದು, ತೀರ್ಪನ್ನು ಆ.6ಕ್ಕೆ ಕಾಯ್ದಿರಿಸಿತ್ತು.[ಜನಾರ್ದನ ರೆಡ್ಡಿ ಆರೋಪಿ ನಂ.1]
ಓಬಳಾಪುರಂ ಗಣಿ ಸಂಸ್ಥೆ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಾಡಿ ವಾರೆಂಟ್ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು. ಈ ಹಿಂದೆ ಓಎಂಸಿ ಪ್ರಕರಣದಲ್ಲಿ ಗಾಲಿ ರೆಡ್ಡಿ ಪಡೆದಿದ್ದ ಜಾಮೀನನ್ನು ನಾಂಪಲ್ಲಿ ಸಿಬಿಐ ಕೋರ್ಟ್ ಆದೇಶ ನೀಡಿತ್ತು. ಒಟ್ಟಾರೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದರೂ ಚಂಚಲಗುಡ ಜೈಲು ಬಾಗಿಲು ರೆಡ್ಡಿಗಾಗಿ ಸದಾ ತೆರೆದಿರುತ್ತದೆ. ಜಾಮೀನು ಪಡೆದರೂ ಜೈಲಿನಲ್ಲೇ ಉಳಿಯಬೇಕಾದ ಪರಿಸ್ಥಿತಿ ರೆಡ್ಡಿ ಅವರದ್ದಾಗಿದೆ.

ಎಎಂಸಿ ಕಂಪನಿ ಲಾಭ ಎಷ್ಟಿದೆ?
ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ರಾಜ್ಯದಿಂದ 80 ಲಕ್ಷ ಟನ್ ಕಬ್ಬಿಣದ ಅದಿರನ್ನು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಕುಟುಂಬ ಅಕ್ರಮವಾಗಿ ಸಾಗಿಸಿದೆ. ಇದರಿಂದ ಸುಮಾರು 2,800 ಕೋಟಿ ರೂಪಾಯಿಗೂ ಹೆಚ್ಚು ನಿವ್ವಳ ಲಾಭ ಪಡೆದುಕೊಂಡಿದೆ ಎಂದು ಸಿಬಿಐ ದಾಖಲೆಗಳು ಹೇಳಿವೆ.

ಅಕ್ರಮ ಹೇಗೆ ನಡೆದಿತ್ತು?
ಕಬ್ಬಿಣ ಅದಿರು ತೆಗೆಯುವ ಹಂತದಲ್ಲೇ ಎರಡು ಬಗೆಯ ಅಕ್ರಮ ಮಾರ್ಗಗಳನ್ನು ಅನುಸರಿಸಲಾಗುತ್ತಿತ್ತು. ಮೊದಲನೆಯದಾಗಿ ಕೆಲ ಗಣಿಗಳನ್ನು ಉಪ ಗುತ್ತಿಗೆಗೆ ಪಡೆದುಕೊಂಡಿದ್ದ ಜನಾರ್ದನ ರೆಡ್ಡಿ ಹಾಗೂ ಸಹಚರರು, ಅಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ್ದ ಅನುಮತಿಗಿಂತಲೂ ಹೆಚ್ಚು ಅದಿರು ತೆಗೆಯುತ್ತಿದ್ದರು. ಬೇರೆಡೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮೂಲಕವೂ ದೊಡ್ಡ ಪ್ರಮಾಣದ ಅದಿರು ತೆಗೆಯುತ್ತಿದ್ದರು. ಎರಡರಲ್ಲೂ ಸಮತೋಲನ ಕಾಯ್ದುಕೊಂಡು ನಿಭಾಯಿಸುವುದನ್ನು ಕರಗತ ಮಾಡಿಕೊಂಡಿದ್ದರು.

ಲಾಭ ಹಂಚಿಕೆ ಹೇಗೆ ನಡೆಯಿತು
ಸ್ಥಗಿತ ಗಣಿಗಳ ಹೆಸರಿನಲ್ಲಿ ನಡೆಯುವ ವಹಿವಾಟಿನಲ್ಲಿ ಶೇಕಡ 75ರಷ್ಟು ಲಾಭಾಂಶ ಜನಾರ್ದನ ರೆಡ್ಡಿ ಅವರಿಗೆ ಸಂದಾಯವಾಗುತ್ತಿತ್ತು. ಸ್ಥಗಿತ ಗಣಿಗಳ ಹೆಸರಿನಲ್ಲಿ ಅಕ್ರಮ ವ್ಯವಹಾರಕ್ಕೆ ಸಹಕಾರ ನೀಡಿದ ಗಣಿ ಮಾಲೀಕರಿಗೆ ಶೇ 25ರಷ್ಟು ಪಾಲು ದೊರೆಯುತ್ತಿತ್ತು. ನೋಂದಾಯಿತ ಮಾರಾಟಗಾರರ ಮೂಲಕ ನಡೆಯುವ ವ್ಯವಹಾರದಲ್ಲಿ ಶೇ 90ರಷ್ಟು ಲಾಭ ರೆಡ್ಡಿ ಅವರ ಪಾಲಾದರೆ, ಶೇ 10ರಷ್ಟು 'ಬೇನಾಮಿ' ಮಾರಾಟಗಾರರ ಹೆಸರಿನ ರೆಡ್ಡಿ ಸಹಚರರಿಗೆ ತಲುಪುತ್ತಿತ್ತು. ಹೀಗಾಗಿ ಲಾಭ ನಷ್ಟ ಎಲ್ಲವೂ ರೆಡ್ಡಿ ಬಿಟ್ಟು ಬೇರೆಯವರಿಗೆ ಸಿಗುತ್ತಿರಲಿಲ್ಲ.

ಆಗ ಅದಿರಿಗೆ ಇದ್ದ ಬೆಲೆ ಎಷ್ಟು?
ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿದ್ದ ಅವಧಿಯಲ್ಲಿ ಕಬ್ಬಿಣದ ಅದಿರಿನ ದರ ಪ್ರತಿ ಟನ್ಗೆ 10,000 ರೂಪಾಯಿವರೆಗೂ ಇತ್ತು. ಎಎಂಸಿ ಹೆಸರಿನಲ್ಲಿ ಅಕ್ರಮವಾಗಿ ಸಾಗಿಸಿದ 80 ಲಕ್ಷ ಟನ್ ಅದಿರಿನ ಒಟ್ಟು ಮೌಲ್ಯ ರೂ 8,000 ಕೋಟಿಗೂ ಹೆಚ್ಚು. ಎಲ್ಲ ವೆಚ್ಚಗಳನ್ನೂ ಹೊರತುಪಡಿಸಿದ ಬಳಿಕ ನಡೆಯುವ ಲಾಭಾಂಶ ಹಂಚಿಕೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಪ್ರತಿ ಟನ್ಗೆ ಕನಿಷ್ಠ 3,500 ರೂಪಾಯಿ ದೊರೆಯುತ್ತಿತ್ತು ಎನ್ನಲಾಗಿದೆ. ಆದರೆ, ಸಾಗಾಣಿಕೆ ವೆಚ್ಚ, ಬಂದರಿನಲ್ಲಿ ಅಧಿಕಾರಿಗಳ ಕೈ ಬಿಸಿ ವೆಚ್ಚ ಕಳೆದುಕೊಂಡು ಲಾಭ ಎತ್ತುವುದರಲ್ಲಿ ನಿಪುಣರಾಗಿದ್ದರು.

ಮಾಸ್ಟರ್ ಮೈಂಡ್ ಅಲಿ ಖಾನ್
ಸ್ಥಗಿತ ಗಣಿಗಳ ಮಾಲೀಕರು ಮತ್ತು ನೋಂದಾಯಿತ ಮಾರಾಟಗಾರರ ಬ್ಯಾಂಕ್ ಖಾತೆಗಳಿಂದ ಈ ಲಾಭಾಂಶದ ಮೊತ್ತ ಹಲವು ಖಾತೆಗಳನ್ನು ದಾಟಿಕೊಂಡು, ಜನಾರ್ದನ ರೆಡ್ಡಿ ಮತ್ತು ಒಎಂಸಿ ಒಡತಿ ಗಾಲಿ ರೆಡ್ಡಿ ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಅವರ ಖಾತೆ ಸೇರುತ್ತಿತ್ತು. ನಂತರ ರೆಡ್ಡಿ ದಂಪತಿ ಸ್ವಂತ ಚೆಕ್ಕುಗಳ ಮೂಲಕವೇ ಹಣವನ್ನು ಡ್ರಾ ಮಾಡುತ್ತಿದ್ದರು. ಹೀಗೆ 2,800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಅವರ ಖಜಾನೆಗೆ ಬಂದಿದೆ.
ಬಳ್ಳಾರಿ ಮತ್ತು ಹೊಸಪೇಟೆಯ ಎಕ್ಸಿಸ್ ಬ್ಯಾಂಕ್, ವಿಕಾಸ್ ಸೌಹಾರ್ದ ಸಹಕಾರಿ ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ ಬ್ಯಾಂಕ್ ಶಾಖೆಗಳ ಮೂಲಕ ಈ ವ್ಯವಹಾರ ನಡೆದಿದೆ. ಈ ಎಲ್ಲ ವ್ಯವಹಾರವನ್ನೂ ರೆಡ್ಡಿ ಆಪ್ತ ಮೆಹಫೂಜ್ ಅಲಿಖಾನ್ ನಿರ್ವಹಿಸಿ, ನಿಯಂತ್ರಿಸುತ್ತಿದ್ದ.











Click it and Unblock the Notifications