ಭಾರತ ತನ್ನ 'ರತ್ನ' ಕಳೆದುಕೊಂಡಿದೆ : ಕಲಾಂ ಕುರಿತು ಮೋದಿ ಲೇಖನ
ಭಾರತ 'ರತ್ನ'ವನ್ನು ಕಳೆದುಕೊಂಡಿದೆ. ಆದರೆ, ಈ ರತ್ನ ಬೀರುವ ಬೆಳಕು, ಭಾರತ ಜ್ಞಾನದ ಬೃಹತ್ ಶಕ್ತಿಯಾಗಬೇಕು ಎಂಬ ಎಪಿಜೆ ಅಬ್ದುಲ್ ಕಲಾಂ ಕನಸಿನತ್ತ ನಮ್ಮನ್ನು ಕರೆದೊಯ್ಯಲಿದೆ. ದೇಶದ ಸಮಸ್ತ ಜನರಿಂದ ನಿಷ್ಕಳಂಕ ಪ್ರೀತಿಯನ್ನು ಮತ್ತು ಪ್ರಶಂಸೆಯನ್ನು ಗಳಿಸಿದ ನಮ್ಮ ವಿಜ್ಞಾನಿ-ರಾಷ್ಟ್ರಪತಿ ಯಾವುದೇ ಯಶಸ್ಸನ್ನು ಭೌತಿಕ ಆಸ್ತಿಯ ಆಧಾರದ ಮೇಲೆ ಅಳೆಯಲಿಲ್ಲ.
ವೈಜ್ಞಾನಿಕವಾಗಿಯಾಗಲಿ, ಆಧ್ಯಾತ್ಮಿಕವಾಗಿಯಾಗಲಿ ಕಲಾಂ ಅವರಿಗೆ ಜ್ಞಾನಸಂಪತ್ತೆಂಬುದು ಬಡತನಕ್ಕೆ ವಿರುದ್ಧಪದವಾಗಿತ್ತು. ಭಾರತದ ರಕ್ಷಣಾ ಕಾರ್ಯಕ್ರಮದ ಹೀರೋ ಆಗಿದ್ದ ಅವರು, ತಮ್ಮ ಆತ್ಮಸ್ಥೈರ್ಯದಿಂದಲೇ ಸಾಮಾನ್ಯರ ಗ್ರಹಿಕೆಗೆ ಅಸಾಧ್ಯವಾದ ಅಸಾಮಾನ್ಯ ಸಾಧನೆಯನ್ನು ಮಾಡಿ ತೋರಿಸಿದರು.
ಪ್ರತಿಯೊಬ್ಬ ಅಸಾಧಾರಣ ವ್ಯಕ್ತಿಯೂ ಪ್ರಿಸಂ ಇದ್ದಂತೆ. ಅದು ಹೊರಸೂಸುವ ಕಿರಣಗಳಿಂದಲೇ ನಾವು ಉಸಿರಾಡುತ್ತಿರುತ್ತೇವೆ. ಕಲಾಂ ಅವರು ಕಂಡುಕೊಂಡ ಪ್ರಬುದ್ಧ ಆದರ್ಶವಾದ ವಾಸ್ತವತೆಯ ತಳಹದಿಯ ಮೇಲೆ ನಿರ್ಮಿತವಾಗಿದ್ದರಿಂದ ಅದು ಸುಭದ್ರವಾಗಿತ್ತು.
ಬಡತನವೆಂಬುದು ಎಂತಹ ಪಿತ್ರಾರ್ಜಿತ ಆಸ್ತಿಯೆಂದರೆ, ಮಗು ಕನಸು ಕಾಣುವ ಮೊದಲೇ ಮಗುವನ್ನು ಸೋಲಿಸಿಬಿಡುತ್ತದೆ. ಆದರೆ, ಸಾಂದರ್ಭಿಕವಾಗಿ ಎದುರಾದ ಸೋಲಿಗೆ ಕಲಾಂ ಹೆದರಲಿಲ್ಲ. ಕಲಾಂ ಹುಡುಗನಾಗಿದ್ದಾಗ ತನ್ನ ಓದಿಗಾಗಿ ಹಣ ಗಳಿಸಲು ಪೇಪರ್ ಹಾಕುವ ಕೆಲಸ ಮಾಡಬೇಕಾಯಿತು. ಆದರೆ, ಇಂದು ಪ್ರತಿ ಪೇಪರಿನ ಪುಟಗಳು ಕಲಾಂ ಅವರ ಶ್ರದ್ಧಾಂಜಲಿಯಿಂದ ತುಂಬಿವೆ.
ನಾನು ಯಾರಿಗೂ ರೋಲ್ ಮಾಡೆಲ್ ಆಗಲು ಇಷ್ಟಪಡುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಆದರೆ, ತಮ್ಮ ವ್ಯಕ್ತಿತ್ವ ನಿಸ್ಸಹಾಯಕತೆ ಮತ್ತು ದಾಸ್ಯದಿಂದ ಯಾವುದೇ ವ್ಯಕ್ತಿಯನ್ನು ಮುಕ್ತಗೊಳಿಸಲು ಸಹಾಯ ಮಾಡಿದರೆ ಅದಕ್ಕಿಂತ ದೊಡ್ಡದಾದ ಸಾರ್ಥಕತೆ ಇನ್ನೊಂದಿಲ್ಲ ಎಂದು ಅವರು ನಂಬಿದ್ದರು.
ಅವರು ನನಗೆ ಮಾತ್ರ ಮಾರ್ಗದರ್ಶಕ ಮಾತ್ರವಲ್ಲ, ಸಮಾಜದಿಂದ ತುಳಿತಕ್ಕೊಳಗಾಗಿದ್ದ ಪ್ರತಿಯೊಬ್ಬ ವ್ಯಕ್ತಿಗೂ ಮಾರ್ಗದರ್ಶಕರು.
ಅವರ ವ್ಯಕ್ತಿತ್ವ, ಬದ್ಧತೆ ಮತ್ತು ಸ್ಫೂರ್ತಿಯುವ ದೃಷ್ಟಿಕೋನ ಅವರ ವ್ಯಕ್ತಿತ್ವದಲ್ಲಿ ಪ್ರತಿಫಲಿಸುತ್ತದೆ. ಅವರಲ್ಲಿ ಅಹಂಕಾರದ ಸೋಂಕೂ ಇರಲಿಲ್ಲ ಮತ್ತು ಅವರು ಅನವಶ್ಯಕ ಹೊಗಳಿಕೆಗಳನ್ನು ಎಂದೂ ಸಹಿಸುತ್ತಿರಲಿಲ್ಲ.
ಎಂಥದೇ ಪ್ರತಿಭಾವಂತ ಪ್ರೇಕ್ಷಕರಿರಲಿ, ಜಗತ್ತು ಸುತ್ತುವ ಮಿನಿಸ್ಟರುಗಳಿರಲಿ ಅಥವಾ ಯುವ ವಿದ್ಯಾರ್ಥಿಗಳೇ ಇರಲಿ ಅವರು ನಿಶ್ಚಿಂತೆಯಿಂದಿರುತ್ತಿದ್ದರು. ಕಲಾಂ ಅವರನ್ನು ಕಂಡಾಗ ನನಗೆ ಮೊದಲಿಗೆ ಹೊಳೆದದ್ದೇನೆಂದರೆ, ಅವರಲ್ಲಿ ಮಗುವಿನಲ್ಲಿರುವ ಸ್ನಿಗ್ಧ ಪ್ರಾಮಾಣಿಕತೆಯಿತ್ತು, ಯುವಕನ ಅಗಾಧ ಶಕ್ತಿಯಿತ್ತು ಮತ್ತು ವಯಸ್ಸಾದವರಲ್ಲಿರಬೇಕಾದ ಪ್ರಬುದ್ಧತೆಯಿತ್ತು.
ಅವರು ಜಗತ್ತಿನಿಂದ ಪಡೆದದ್ದು ಕಡಿಮೆಯೆ, ಆದರೆ, ಸಮಾಜಕ್ಕೆ ತಮ್ಮ ಸರ್ವಸ್ವವನ್ನೂ ಧಾರೆಯೆರೆದರು. ಎಲ್ಲದರಲ್ಲೂ ನಂಬಿಕೆ ಇಟ್ಟಿದ್ದ ಅವರಲ್ಲಿ, ಸದ್ಗುಣಗಳಾದ ಸ್ವನಿಗ್ರಹ, ತ್ಯಾಗ ಮತ್ತು ದಯೆ ಎರಕಹೊಯ್ದಿದ್ದವು.
ನಮಗೆ ದಕ್ಕಿದ ಸ್ವಾತಂತ್ರ್ಯಕ್ಕೆ ರಾಜಕೀಯ ಬಣ್ಣ ಬಳಿಯಲಾಗಿದೆಯಾದರೂ, ಭಾರತ ಅಭಿವೃದ್ಧಿ ಹೊಂದದ ರಾಷ್ಟ್ರ ಎಂಬ ಹಣೆಪಟ್ಟಿಯಿಂದ ಕಳಚಿಕೊಳ್ಳಬೇಕು ಮತ್ತು ಆರ್ಥಿಕ ಪ್ರಗತಿಯ ಮೂಲಕ ಭಾರತಕ್ಕಂಟಿದ ಬಡತನ ಎಂಬ ಶಾಪದಿಂದ ಮುಕ್ತಿ ಸಿಗಬೇಕು ಎಂದು ಅವರು ಕನಸು ಕಂಡಿದ್ದರು.
ಭಾರತದ ರಾಜಕಾರಣಿಗಳು ಶೇ.30ರಷ್ಟು ಮಾತ್ರ ರಾಜಕೀಯಕ್ಕೆ ಮೀಸಲಿಡಬೇಕು ಮತ್ತು ಶೇ.70ರಷ್ಟು ಸಮಯವನ್ನು ದೇಶದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕಲಾಂ ಕಿವಿಮಾತು ಹೇಳಿದ್ದರು. ಇದನ್ನು ಸಾಕಾರಗೊಳಿಸಲು ಅವರು ಹಲವಾರು ಸಂಸತ್ ಸದಸ್ಯರೊಂದಿಗೆ ಸಾಮಾಜಿಕ ಆರ್ಥಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿದ್ದರು.
ಮೂರನೇ ಆಧಾರಸ್ತಂಭವಾದ ಶಕ್ತಿ ಆಕ್ರಮಣಕಾರಿ ಧೋರಣೆಯಿಂದ ಬರುವುದಿಲ್ಲ, ಬದಲಿಗೆ ತಿಳಿವಳಿಕೆಯಿಂದ ಬರುತ್ತದೆ. ಅಭದ್ರ ದೇಶ ಸಮೃದ್ಧಿಯ ಹಾದಿಯನ್ನು ಎಂದು ಕಂಡುಕೊಳ್ಳುವುದಿಲ್ಲ. ಶಕ್ತಿ ಯಾವತ್ತೂ ಗೌರವವನ್ನು ಬಯಸುತ್ತದೆ. ಪರಮಾಣು ಮತ್ತು ಖಗೋಳ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅಂಥದೊಂದು ಶಕ್ತಿ, ವಿಶ್ವಾಸವನ್ನು ಭಾರತಕ್ಕೆ ತುಂಬಿದೆ.
ಕಲಾಂಜಿ ಮರದಲ್ಲಿ ಕಾವ್ಯವನ್ನು ಕಂಡವರು, ಮತ್ತು ನೀರು, ಗಾಳಿ, ಸೂರ್ಯನಿಂದ ಇಂಧನ ಉತ್ಪತ್ತಿಯ ಬಗ್ಗೆ ಹೇಳಿಕೊಟ್ಟವರು. ನಮ್ಮ ಸುತ್ತಲಿನ ಜಗತ್ತನ್ನು ನಾವು ಅವರ ದೃಷ್ಟಿಯ ಮೂಲಕ ಮತ್ತು ಅವರಷ್ಟೇ ಉತ್ಸಾಹದಿಂದ ನೋಡುವುದನ್ನು ಕಲಿಯಬೇಕು.
ದೃಢವಾದ ಮನಸ್ಸು, ನಿರಂತರ ಪ್ರಯತ್ನ, ಸಾಮರ್ಥ್ಯ ಮತ್ತು ಧೈರ್ಯದ ಮೂಲಕ ಜನರು ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು. ಹೀಗೆಯೇ ಅವರು ಬದುಕನ್ನು ರೂಪಿಸಿಕೊಂಡವರು. ಅವರಿಗೆ ಆಯ್ಕೆಯ ಅವಕಾಶ ಕೊಟ್ಟಿದ್ದರೆ, ತಮ್ಮ ನೆಚ್ಚಿನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪಾಠ ಮಾಡುತ್ತಲೇ ಪ್ರಾಣ ತ್ಯಾಗ ಮಾಡಲು ಇಚ್ಛಿಸುತ್ತಿದ್ದರೇನೋ.
ಅವರ ಬ್ರಹ್ಮಚಾರಿಯಾಗಿದ್ದರಿಂದ ಅವರಿಗೆ ಮಕ್ಕಳಿರಲಿಲ್ಲ ಎಂದು ವ್ಯಾಖ್ಯಾನಿಸಿದರೆ ತಪ್ಪಾಗುತ್ತದೆ. ಸಾಧ್ಯವಾದಾಗಲೆಲ್ಲ ಪಾಠ ಮಾಡುತ್ತ, ಅವರನ್ನು ಸಾಧಿಸಲು ಉತ್ತೇಜಿಸುತ್ತ, ಅಂಧಕಾರವನ್ನು ತೊಡೆದುಹಾಕುತ್ತ ಮತ್ತು ಪ್ರತಿಯೊಂದರಲ್ಲೂ ತೊಡಗಿಕೊಳ್ಳುವ ಮೂಲಕ ಅವರು ಭಾರತದ ಪ್ರತಿ ಮಗುವಿಗೆ ತಂದೆಯ ಸ್ಥಾನದಲ್ಲಿ ನಿಂತಿದ್ದರು.
ಅವರು ಭವಿಷ್ಯವನ್ನು ಕಂಡಿದ್ದರು ಮತ್ತು ದಾರಿ ತೋರಿದರು. ನಿನ್ನೆ ಅವರ ಪಾರ್ಥಿವ ಶರೀರ ಇಟ್ಟ ಕೋಣೆಯನ್ನು ಪ್ರವೇಶಿಸಿದಾಗ, ಮಕ್ಕಳಿಗಾಗ ಅವರು ಬರೆದ ಪುಸ್ತಕ ಇಗ್ನೈಟೆಡ್ ಮೈಂಡ್ಸ್ ದಲ್ಲಿನ ಕೆಲ ಸ್ಫೂರ್ತಿಯುತ ಬರಹಗಳ ಕೆಲ ಲೈನುಗಳನ್ನು ಪೇಂಟ್ ಮಾಡಿದ್ದು ನನ್ನನ್ನು ಬಹುವಾಗಿ ಆಕರ್ಷಿಸಿತು. [ಮೂಲ ಲೇಖನ]