ಬೆಂಗಳೂರು ಸ್ಫೋಟ : ಮದನಿ ವಿರುದ್ಧ ಉಲ್ಟಾ ಹೊಡೆದ ಸಾಕ್ಷಿಗಳು
ಬೆಂಗಳೂರು, ಸೆ. 16 : 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ತನಿಖೆಗೆ ಮತ್ತೆ ಹಿನ್ನಡೆ ಉಂಟಾಗಿದೆ. ಸ್ಫೋಟದ ರೂವಾರಿ ಎಂದು ಆರೋಪಿಸಲಾಗಿರುವ ಅಬ್ದುಲ್ ನಾಸೀರ್ ಮದನಿ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯುವುದಾಗಿ ಎರಡನೇ ಸಾಕ್ಷಿ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾನೆ.
ಸ್ಫೋಟದ ಸಂಚನ್ನು ಮದನಿ ರೂಪಿಸಿದ್ದಾನೆ ಎಂದು ಆರೋಪಿಸಲಾಗಿದ್ದು ಈ ಕುರಿತ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಜೋಸ್ ವರ್ಗೀಸ್ ಮೊದಲನೇ ಸಾಕ್ಷಿಯಾಗಿದ್ದ. ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಈತ ಕೋರ್ಟ್ಗೆ ಹೋದಾಗ ಹೇಳಿಕೆ ಹಿಂಪಡೆಯುವುದಾಗಿ ತಿಳಿಸಿದ್ದ. [ಬೆಂಗಳೂರು ಸರಣಿ ಸ್ಫೋಟ ಎಲ್ಲಿ, ಯಾವಾಗ?]
ಸದ್ಯ, ಪ್ರಕರಣದಲ್ಲಿ ಎರಡನೇ ಸಾಕ್ಷಿಯಾಗಿರುವ ರಫೀಕ್ ಸಹ ಪೊಲೀಸರು ಸಾಕ್ಷಿ ಹೇಳುವಂತೆ ಒತ್ತಾಯಿಸಿದರು. ನಾನು ಹೇಳಿಕೆಯನ್ನು ಹಿಂಪಡೆಯುತ್ತೇನೆ. ಕೋರ್ಟ್ನಲ್ಲೇ ಮೊದಲ ಬಾರಿ ನಾನು ಮದನಿಯನ್ನು ನೋಡುತ್ತಿರುವುದು ಎಂದು ಹೇಳಿಕೆ ನೀಡಿದ್ದು, ತನಿಖೆಗೆ ಹಿನ್ನೆಡೆ ಉಂಟು ಮಾಡಿದೆ.[ಬೆಂಗಳೂರು ಸ್ಫೋಟ : ಮದನಿಗೆ ಜಾಮೀನು]

ಕೋರ್ಟ್ನಲ್ಲಿ ಉಲ್ಪಾ ಹೊಡೆದ ಜೋಸ್ : ಬೆಂಗಳೂರು ಸರಣಿ ಸ್ಫೋಟದ ಸಂಚನ್ನು ಕೇರಳದ ಕೊಟ್ಟಾಯಂನಲ್ಲಿ ರೂಪಿಸಲಾಗಿತ್ತು ಎಂಬುದು ಆರೋಪ. ಸಂಚು ರೂಪಿಸಿದ ಮನೆ ಜೋಸ್ ವರ್ಗೀಸ್ಗೆ ಸೇರಿದ್ದು, ಆದ್ದರಿಂದ ಆತನನ್ನು ಪ್ರಮುಖ ಸಾಕ್ಷಿ ಎಂದು ಪೊಲೀಸರು ಪರಿಗಣಿಸಿದ್ದರು. [ಜಾಮೀನು ಪಡೆದರೂ ಮದನಿ ಕೇರಳಕ್ಕೆ ಹೋಗುವಂತಿಲ್ಲ]
ಪೊಲೀಸರ ಮುಂದೆ ನಾನು ಮದನಿಯನ್ನು ಭೇಟಿ ಮಾಡಿದ್ದೆ ಎಂದು ಜೋಸ್ ಒಪ್ಪಿಕೊಂಡಿದ್ದ. ಆದರೆ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಂದಾಗ ಆತ ತನ್ನ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿಕೆ ನೀಡಿ ತನಿಖೆಗೆ ಹಿನ್ನಡೆ ಉಂಟು ಮಾಡಿದ್ದ.
ಮದನಿ ಪರ ವಕೀಲರು ಪೊಲೀಸರು ಹೇಳಿರುವ ದಿನ ಮದನಿ ಕೊಟ್ಟಾಯಂನಲ್ಲಿ ವಾಸ್ತವ್ಯ ಹೂಡಿರಲಿಲ್ಲ ಎಂದು ದಾಖಲೆಗಳನ್ನು ಸಲ್ಲಿಸಿದರು. ಜೋಸ್ನನ್ನು ಕೋರ್ಟ್ನಲ್ಲಿ ಮತ್ತೆ ಪ್ರಶ್ನಿಸಿದಾಗ ಆತ ಪೊಲೀಸರ ಒತ್ತಡದಿಂದ ಹೇಳಿಕೆ ನೀಡಿದ್ದೆ ಎಂದು ಹೇಳಿದ್ದ.
ಮದನಿಯನ್ನು ಮೊದಲ ಬಾರಿ ನೋಡುತ್ತಿದ್ದೇನೆ : ಈ ಪ್ರಕರಣದಲ್ಲಿ ಸೋಮವಾರ ಪೇಟೆ ಮೂಲದ ರಫೀಕ್ ಎರಡನೇ ಸಾಕ್ಷಿಯಾಗಿದ್ದ. ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಮದನಿ ಹಲವು ಬಾರಿ ಸೋಮವಾರ ಪೇಟೆಗೆ ಭೇಟಿ ನೀಡಿದ್ದ. ಅವನೊಂದಿಗೆ ಹಲವು ಜನರು ಆಗಮಿಸುತ್ತಿದ್ದರು ಎಂದು ಹೇಳಿದ್ದ.
ಆದರೆ, ಕೋರ್ಟ್ ಮುಂದೆ ಬಂದಾಗ ರಫೀಕ್ ಹೇಳಿಕೆ ಬದಲಾಯಿಸಿದ್ದಾನೆ. ಮದನಿಯನ್ನು ಇದೇ ಮೊದಲ ಬಾರಿಗೆ ನಾನು ನೋಡುತ್ತಿದ್ದೇನೆ. ಮದನಿ ವಿರುದ್ಧ ಹೇಳಿಕೆ ನೀಡುವಂತೆ ಪೊಲೀಸರು ಒತ್ತಾಯಿಸಿದರು. ಒತ್ತಾಯ ಪೂರ್ವಕವಾಗಿ ಹೇಳಿಕೆಗಳಿಗೆ ಸಹಿ ಮಾಡಿಸಿಕೊಂಡರು ಎಂದು ಹೇಳಿಕೆ ನೀಡಿದ್ದಾನೆ.












Click it and Unblock the Notifications