ರೈತರೇ ಗಮನಿಸಿ ಏಪ್ರಿಲ್ 1ರಿಂದ ತುಂಗಭದ್ರಾ ಡ್ಯಾಂ ನೀರು ಬಿಡುಗಡೆ, ವೇಳಾಪಟ್ಟಿ
ಬಳ್ಳಾರಿ, ಮಾರ್ಚ್ 30: ಬೇಸಿಗೆ ಹಂಗಾಮಿನ ಬೆಳೆಗಳನ್ನು ಬೆಳೆಯುವ ರೈತರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸುವ ವೇಳಾಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಏಪ್ರಿಲ್ 1ರಿಂದಲೇ ಆರಂಭವಾಗುವಂತೆ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು, ಬೇಸಿಗೆ ಅವಧಿಯ ಬೆಳೆಗಳಿಗೆ ಅನುಕೂಲವಾಗಲಿದೆ.
ಮುನಿರಾಬಾದ್ನ ತುಂಗಭದ್ರಾ ಯೋಜನಾ ವೃತ್ತದ ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಲ್. ಬಸವರಾಜ ಈ ಕುರಿತು ಮಾಹಿತಿ ನೀಡಿದ್ದಾರೆ.

ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬಿತ್ತನೆ ವಿಳಂಬವಾಗಿ ಮಾಡಿರುವುದರಿಂದ ಹಿಂಗಾರು ಹಂಗಾಮಿಗೆ ನಿಂತಿರುವ ಬೆಳಗಳನ್ನು ಸಂರಕ್ಷಿಸಲು ಜಲಾಶಯದಲ್ಲಿ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜಿಸಿ ವಿವಿಧ ಕಾಲುವೆಗಳಿಗೆ ಕುಡಿಯುವ ನೀರು ಒಳಗೊಂಡಂತೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ಎಸ್. ತಂಗಡಗಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ 2024-25ನೇ ಸಾಲಿನ 123ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಿಂತೆ ವೇಳಾಪಟ್ಟಿ ಪ್ರಕಾರ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ.
ನೀರು ಹರಿಸುವ ಕಾಲಾವಧಿ
* ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ: ಎಡದಂಡೆ ಕಾಲುವೆಯಡಿ ಲಭ್ಯವಾಗುವ ನೀರಿನಲ್ಲಿ ಏಪ್ರಿಲ್ 1 ರಿಂದ 10 ರವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 3000 ಕ್ಯೂಸೆಕ್ನಂತೆ ನೀರು ಹರಿಸಲಾಗುವುದು.
* ಎಡದಂಡೆ ವಿಜಯನಗರ ಕಾಲುವೆ: ಏಪ್ರಿಲ್ 11ರಿಂದ ರಿಂದ ಮೇ 10ರ ತನಕ 150 ಕ್ಯೂಸೆಕ್ನಂತೆ ವಿತರಣಾ ಕಾಲುವೆ 1 ರಿಂದ 11ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
* ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ: ಬಲದಂಡೆ ಕೆಳಮಟ್ಟದ ಕಾಲುವೆಯಡಿ ಲಭ್ಯವಾಗುವ ನೀರಿನಲ್ಲಿ ಏಪ್ರಿಲ್ 1 ರಿಂದ 10ರ ವರೆಗೆ ಕುಡಿಯುವ ನೀರು ಒಳಗೊಂಡಂತೆ ಹಾಗೂ ನಿಂತ ಬೆಳೆಗಳ ಸಂರಕ್ಷಣೆಗಾಗಿ 450 ಕ್ಯೂಸೆಕ್ನಂತೆ ನೀರು ಹರಿಸಲಾಗುವುದು.
* ರಾಯ ಬಸವಣ್ಣ ಕಾಲುವೆ: ಏಪ್ರಿಲ್ 1 ರಿಂದ ಮೇ 31ರ ತನಕ ಲಭ್ಯವಾಗುವ ನೀರಿನಲ್ಲಿ 200ಕ್ಯೂಸೆಕ್ನಂತೆ ನೀರು ಹರಿಸಲಾಗುವುದು. ನದಿ ಪೂರಕವಾಗಿ ಸುಮಾರು 90 ಕ್ಯೂಸೆಕ್ನಂತೆ ನದಿ ಪೂರಕ ಕಾರ್ಖಾನೆ ಒಳಗೊಂಡಂತೆ ನೀರು ಹರಿಸಲಾಗುವುದು.
ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಹಿಂಗಾರು ಹಂಗಾಮಿನ ಬೆಳೆದು ನಿಂತ ಬೆಳಗಳನ್ನು ಸಂರಕ್ಷಿಸಲು ಹಾಗೂ ಕುಡಿಯುವ ನೀರು ಒಳಗೊಂಡಂತೆ ಹರಿಸಲಾಗುವುದು. ಹಾಗಾಗಿ ರೈತರು ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಲಾಗಿದೆ.
ರೈತರು ಅನಧಿಕೃತವಾಗಿ ನೀರು ಪಡೆದು ಭತ್ತ, ಇತರೆ ಬೆಳೆಗಳನ್ನು ಬೆಳೆದಲ್ಲಿ ನೀರಾವರಿ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications