ನೊಂದವರ ಬಾಳಿನಲ್ಲಿ ಭರವಸೆಯ ಬೆಳಕಾದ ಕೊಟ್ಟೂರಿನ ರುದ್ರಮ್ಮ
ಬಳ್ಳಾರಿ, ಜುಲೈ. 04: ಆಕೆಯ ಹೆಸರು ಎಂ. ರುದ್ರಮ್ಮ. ವಯಸ್ಸು 78 ವರ್ಷ. ಆದರೆ ಆಕೆಯ ನಿಸ್ವಾರ್ಥ ಸೇವೆ ಅನೇಕರಿಗೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವಂಥಹದ್ದು. ಮಕ್ಕಳಿಲ್ಲದಿದ್ದರೂ ಅನಾಥರ ಸೇವೆ ಮಾಡುತ್ತಲೇ ಅನೇಕರಿಗೆ ಅಮ್ಮಳಾಗಿ, ಅವ್ವಳಾಗಿ, ದೈವವಾಗಿ, ಅಕ್ಕಳಾಗಿ ಸೇವೆ ಮಾಡುತ್ತಲೇ ಇದ್ದಾಳೆ.
ಪತಿಯ ಬದುಕಿನ ಮಹೋನ್ನತ ಕನಸನ್ನು ನನಸು ಮಾಡಲು ಹಗಲೂ -ರಾತ್ರಿ ಶ್ರಮಿಸುತ್ತಿರುವ ರುದ್ರಮ್ಮ, ಸ್ವಸಾಮರ್ಥ್ಯದಿಂದಲೇ ಅನಾಥಾಶ್ರಮ ನಡೆಸುತ್ತಿರುವುದು ಅವರ ಸೇವಾ ಮಹಾತ್ವಾಕಾಂಕ್ಷೆಗೆ ಹಿಡಿದ ಕೈಗನ್ನಡಿ.
ಬೆಂಗಳೂರು ಬಳಿ ಸಾಧ್ವಿ ರೀತಾಂಬರಾ 'ವಾತ್ಸಲ್ಯ ಗ್ರಾಮ'
ಎಂ. ರುದ್ರಮ್ಮ ಅವರ ಪತಿ ಎಂ. ಕೊಟ್ರಸ್ವಾಮಿ ಅವರ ನಿವೃತ್ತಿಯ ನಂತರ, 2011 ರಲ್ಲಿ ನಿಧನರಾದರು. ಮಕ್ಕಳಿಲ್ಲದೇ ಕೊರಗಿ ಸೊರಗಿದ್ದ ಅವರು, ಪತಿಯ ನಿಧನದ ನಂತರ, ಪತಿಯ ಕೊನೆಯ ಆಸೆಯನ್ನು ನನಸು ಮಾಡಲು 2016 ರ ಜುಲೈ 14 ರಂದು ಟ್ರಸ್ಟ್ ರಚಿಸಿ, ಕೊಟ್ಟೂರಿನಲ್ಲಿ ಅನಾಥಾಶ್ರಮ ಆರಂಭಿಸಿಯೇಬಿಟ್ಟರು.
ಅದನ್ನು ರುದ್ರಮ್ಮ ಬೆಳೆಸಿದ ಬಗೆ ಇದೆಯೆಲ್ಲ ಎಂಥವರಿಗೂ ಅನುಕರಣೀಯ. ಮುಂದೆ ಓದಿ...
ಟೀಕೆಗಳಿಗೆ ಅಂಜಲಿಲ್ಲ
ಅನಾಥಾಶ್ರಮ ಪ್ರಾರಂಭ ಆದಾಗ ನಕ್ಕವರು ಅನೇಕರು. ತಾತ್ಸಾರದ ಮಾತುಗಳನ್ನಾಡಿದವರು ಬಹುತೇಕರು. ಇನ್ನೂ ಅನೇಕರು ಟೀಕೆ, ತೆಗಳಿಕೆ ಮಾಡಿದರು. ಬಹುತೇಕರು ನೋಡೋಣ, ಅಜ್ಜಿ ಏನೋ ಮಾಡ್ತಿದ್ದಾಳೆ. ಏನಾಗುತ್ತೋ' ಅಂದವರೂ ಇದ್ದಾರೆ. ಆದರೆ ಇಂದು ಅದೇ ಅನಾಥಾಶ್ರಮ ಅನೇಕರಿಗೆ ಆಶ್ರಯ ನೀಡಿ ಅವರ ಬದುಕಿನಲ್ಲಿ ಬೆಳಕಾಗಿದೆ.
ಈ ಅನಾಥಶ್ರಮದಲ್ಲಿ 20ವರ್ಷದ ಒಬ್ಬ ಬುದ್ಧಿಮಾಂದ್ಯ ಯುವಕ ಸೇರಿ ಒಂಭತ್ತು ಜನರಿದ್ದಾರೆ. ಎಲ್ಲರಿಗೂ ಇವರೇ ಅಡುಗೆ ಮಾಡಿ ಉಣಬಡಿಸುತ್ತಾರೆ. ವೈದ್ಯರ ಬಳಿ ಕರೆದುಕೊಂಡು ಹೋಗುವುದಕ್ಕೂ ಎಂ. ರುದ್ರಮ್ಮ ಸದಾ ಸಿದ್ಧ.
ಕೌಟುಂಬಿಕ ವೇತನವೇ ಸರ್ವಸ್ವ
ಆರೋಗ್ಯ ಇಲಾಖೆಯಲ್ಲಿದ್ದು, ನಿವೃತ್ತಿ ಹೊಂದಿದ ಪತಿಯ ನಿಧನ ನಂತರ ಇವರಿಗೆ ಸಿಗುತ್ತಿರುವ ಕೌಟುಂಬಿಕ ವೇತನವೇ ಇವರಿಗೆ ಸರ್ವಸ್ವ. ಆದಾಯದ ಮೂಲ. ಅನಾಥಾಶ್ರಮದ ಆಧಾರ.
ತುರ್ತು ಅಗತ್ಯಗಳು ಬಿದ್ದಲ್ಲಿ ನೆರೆಹೊರೆಯವರಿಗೆ ಕೈಸಾಲ ಮಾಡಿ, ಸಮಸ್ಯೆ ಪರಿಹಾರ ಆದ ನಂತರ, ಹಣ ಮರುಪಾವತಿ ಮಾಡುತ್ತಿರುವ ಇವರಿಗೆ, ಸಹೋದರರಾದ ಶರಣಪ್ಪ, ಗಿರೀಶ, ಮಂಜುನಾಥ ಸಹಾಯ ಮಾಡುತ್ತಿದ್ದಾರೆ. ಅಕ್ಕಪಕ್ಕದ ಮನೆಯವರು ರುದ್ರಮ್ಮನವರ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.
ಸೇವೆಗೆ ಗೌರವ ಸಿಕ್ಕಿದೆ
ಹಗರಿಬೊಮ್ಮನಹಳ್ಳಿಯ ಜೆಸಿಐ ಮಹಿಳಾ ವಿಭಾಗ ಇವರ ಸೇವೆಯನ್ನು ಒಪ್ಪಿ, ಮೆಚ್ಚಿ, ಗೌರವಿಸಿ, ಅಭಿನಂದಿಸಿದೆ. ಇತ್ತೀಚಿನ ದಿನಗಳಲ್ಲಿ ಕೊಟ್ಟೂರಿನವರು ಹುಟ್ಟುಹಬ್ಬ, ಮದುವೆ ಸಂಭ್ರಮ ಇನ್ನಿತರೆಗಳ ಸಂದರ್ಭಗಳಲ್ಲಿ ಈ ಆಶ್ರಮವನ್ನು ನೆನಪು ಮಾಡಿಕೊಂಡು ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ.
ಸ್ವಂತ ಮನೆಯೇ ಆಶ್ರಮ
"ಆರಂಭದಲ್ಲಿ 3 ಸಾವಿರ ರೂಪಾಯಿ ಬಾಡಿಗೆ ಮನೆಯಲ್ಲಿ ಅನಾಥಶ್ರಮ ನಡೆಸುತ್ತಿದ್ದೆ. ನಿರ್ವಹಣೆ ಕಷ್ಟವಾಯಿತು. ಅಲ್ಲಿದ್ದವರನ್ನೆಲ್ಲಾ ನನ್ನ ಸ್ವಂತ ಮನೆಗೇ ಕರೆದುಕೊಂಡು ಬಂದೆ. ಮನೆಯಲ್ಲೇ ಆಶ್ರಮ ನಡೆದಿದೆ. ನಾನಿರುವಷ್ಟು ದಿನ ನಡೆಯುತ್ತದೆ.
ಮುಂದೆ, ಕೊಟ್ಟೂರೇಶ್ವರನೇ ದಾರಿ ತೋರಿಸಬೇಕು. ಅನಾಥಶ್ರಮ ನಡೆಸುವ ಕನಸು ನನ್ನ ಪತಿಯವರಿಗಿತ್ತು. ಅವರು ಬದುಕಿದ್ದಾಗ ಸಾಧ್ಯವಾಗಲಿಲ್ಲ. ಅವರ ನಿಧನದ ನಂತರ, ನಾನೇ ಮುತುವರ್ಜಿವಹಿಸಿ, ಆಶ್ರಮ ಪ್ರಾರಂಭಿಸಿದೆ" ಎನ್ನುತ್ತಾರೆ ರುದ್ರಮ್ಮ
ಕೊಟ್ಟೂರು ನಿವಾಸಿಗಳು ಹೇಳೋದೇನು?
"ಎಂ. ರುದ್ರಮ್ಮ ಅವರ ಸೇವೆ ಮಹತ್ತರವಾದದ್ದು. ಒಂಟಿ ಹೋರಾಟ. ಆರಂಭದಲ್ಲಿ ಅಷ್ಟೊಂದು ಮಹತ್ವ ಪಡೆಯದ ಅವರ ಸೇವೆ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹತ್ವ ಪಡೆಯುತ್ತಿದೆ. ಕೊಟ್ಟೂರು ಜನರು ಕೂಡ ಇವರ ಸೇವೆಯನ್ನು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ" ಎನ್ನುತ್ತಾರೆ ಎಸ್.ಎಂ. ಗುರುಪ್ರಸಾದ್
"ಎಂ. ರುದ್ರಮ್ಮಜ್ಜಿಗೆ ಈಗ 78 ವರ್ಷ ವಯಸ್ಸು. ಇಳಿ ವಯಸ್ಸಿನಲ್ಲೂ ಉತ್ಸಾಹ ಬತ್ತಿಸಿಕೊಳ್ಳದೇ ಗಂಡನ ಕನಸನ್ನು ನನಸು ಮಾಡುವ ಛಲದಿಂದ ಅನಾಥಶ್ರಮ ನಡೆಸುತ್ತಿದ್ದಾರೆ. ಬುದ್ದಮಾಂಧ್ಯ ಮಗುವಿನ ಆರೈಕೆ ಜೊತೆಗೆ ಉಳಿದ ಎಲ್ಲರಿಗೂ ತಿಂಡಿ ಊಟ ಇತರೆ ಉಪಚಾರ ಮಾಡುವ ಅವರ ತಾಳ್ಮೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ' ಎನ್ನುತ್ತಾರೆ ಅರುಣಾ
ನಮ್ಮಂಥವರ ಪಾಡೇನು?
ಅನಾಥಾಶ್ರಮದ ನಿವಾಸಿಗಳಾದ ತಿಮ್ಮಾರೆಡ್ಡಿ, ಹಂಪಮ್ಮ, ಹೊಸಪೇಟೆ, ಜಗದಮ್ಮ, ಚಪ್ಪರದಹಳ್ಳಿ, ಮಲ್ಲಪ್ಪ ಅವರು ಹೇಳುವಂತೆ, ನಮ್ಮ ರುದ್ರಮ್ಮಜ್ಜಿಯ ಆರೈಕೆಯಿಂದ ನಾವು ಅನಾಥರು ಅನಿಸುತ್ತಿಲ್ಲ. ಮಕ್ಕಳಿದ್ದರೂ ಕೆಲವೊಮ್ಮೆ ಪರಿಸ್ಥಿತಿ ನಮ್ಮನ್ನು ಅನಾಥರರನ್ನಾಗಿಸುತ್ತೆ.
ಆದರೆ ರುದ್ರಮ್ಮ ಒಬ್ಬಂಟಿಯಾಗಿ ನಮ್ಮನ್ನು ಸಲಹುತ್ತಿರುವುದು ತಾಯಿಯ ಮಮತೆ, ಅಕ್ಕರೆ, ಪ್ರೀತಿ ಎಲ್ಲವೂ ಒಟ್ಟಿಗೇ ನಮಗೆ ಸಿಗುತ್ತಿವೆ. ಇವರ ನಂತರ, ನಮ್ಮಂಥವರ ಪಾಡೇನು? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ' ಎನ್ನುತ್ತಾರೆ.