ವಿಜಯನಗರ ಜಿಲ್ಲೆ; ಮೇಲುಸ್ತುವಾರಿಗೆ ಐಎಎಸ್ ಅಧಿಕಾರಿ ನೇಮಕ
ಬಳ್ಳಾರಿ, ಫೆಬ್ರವರಿ 28: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆ ಮಾಡಿರುವ ಕರ್ನಾಟಕ ಸರ್ಕಾರ ನೂತನ ಜಿಲ್ಲೆ ಮೇಲುಸ್ತುವಾರಿಯಾಗಿ ಐಎಎಸ್ ಅಧಿಕಾರಿ ಡಾ. ರಜನೀಶ್ ಗೋಯಲ್ ನೇಮಿಸಿದೆ.
ಕರ್ನಾಟಕ ಸರ್ಕಾರ ಈ ಕುರಿತು ಆದೇಶವನ್ನು ಹೊರಡಿಸಿದೆ. ಸರ್ಕಾರದ ಮಟ್ಟದಲ್ಲಿ ವಿಜಯನಗರ ಜಿಲ್ಲೆಯನ್ನು ಆರಂಭಿಸಲು ಎಲ್ಲಾ ಪೂರ್ವ ಸಿದ್ಧತೆಗಳ ಮೇಲುಸ್ತುವಾರಿಯಾಗಿ ಡಾ. ರಜನೀಶ್ ನೇಮಕಗೊಂಡಿದ್ದಾರೆ.
ವಿಜಯನಗರ ಜಿಲ್ಲೆಯ ವಿಶೇಷ ಅಧಿಕಾರಿಯಾಗಿ ಅನಿರುದ್ಧ್ ಶ್ರವಣ್ ನೇಮಕವಾಗಿದ್ದಾರೆ. ಈ ಮೂಲಕ ಸರ್ಕಾರ ಅಧಿಕೃತವಾಗಿ ವಿಜಯನಗರ ಜಿಲ್ಲೆಯ ಕಾರ್ಯವನ್ನು ಆರಂಭಿಸಿದೆ. ಕೆಲವು ದಿನಗಳ ಹಿಂದೆ ವಿಜಯನಗರ ಜಿಲ್ಲೆ ರಚನೆ ಮಾಡಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿತ್ತು.

ಸರ್ಕಾರಿ ಕಚೇರಿ ಕಾರ್ಯಾರಂಭ ಮಾಡಲು ಹುದ್ದೆಗಳ ವಿವರಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಬೇಕಾಗಿರುವ ಕಟ್ಟಡ, ಸಾಮಾಗ್ರಿ ಹಾಗೂ ಎಲ್ಲಾ ಪೂರ್ವ ಸಿದ್ಧತೆಗಳನ್ನು ಅನಿರುದ್ಧ್ ಶ್ರವಣ್ ನೋಡಿಕೊಳ್ಳಲಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿರುವ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ರಚನೆಗೆ ಒತ್ತಾಯ ಮಾಡಿದ್ದರು. 2019ರ ಸೆಪ್ಟೆಂಬರ್ನಲ್ಲಿ ಯಡಿಯೂರಪ್ಪ ಹೊಸ ಜಿಲ್ಲೆ ರಚನೆ ಘೋಷಣೆ ಮಾಡಿದ್ದರು. ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬಂದಿದೆ.
ತಾಲೂಕುಗಳ ವಿವರ; ವಿಜಯನಗರ ಜಿಲ್ಲೆಗೆ ಹೊಸಪೇಟೆ ಕೇಂದ್ರಸ್ಥಾನವಾಗಲಿದೆ. ಹೊಸಪೇಟೆ, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ತಾಲೂಕುಗಳು ಹೊಸ ಜಿಲ್ಲೆಯಲ್ಲಿ ಇರಲಿವೆ.
ಬಳ್ಳಾರಿ ಜಿಲ್ಲೆಗೆ ಬಳ್ಳಾರಿ ಕೇಂದ್ರಸ್ಥಾನವಾಗಿರಲಿದೆ. ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲೂಕುಗಳು ಬಳ್ಳಾರಿ ಜಿಲ್ಲೆಯಲ್ಲಿ ಇರಲಿವೆ.












Click it and Unblock the Notifications