ಬಳ್ಳಾರಿ; ಕೋವಿಡ್ ತಡೆಗೆ ಕಠಿಣ ನಿಯಮ, 8 ಗಂಟೆಯಿಂದ ರಾತ್ರಿ ಕರ್ಫ್ಯೂ
ಬಳ್ಳಾರಿ, ಜನವರಿ 16; ಕೋವಿಡ್ 3ನೇ ಅಲೆ ಹರಡುವಿಕೆ ತಡೆಗೆ ಬಳ್ಳಾರಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂ 8 ರಿಂದ ಬೆಳಗ್ಗೆ 6ರವರೆಗೆ ಜಾರಿಯಲ್ಲಿರುತ್ತದೆ. ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 410.
ಮೂರನೇ ಅಲೆ ಹರಡದಂತೆ ತಡೆಯಲು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಬಳ್ಳಾರಿ ನಗರ ಸೇರಿದಂತೆ ಬಳ್ಳಾರಿ ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಕಾಲೇಜುಗಳು, ಎಲ್ಲಾ ವಸತಿ ಶಾಲೆಗಳು, ಎಲ್ಲಾ ಹಾಸ್ಟೆಲ್ ಹಾಗೂ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ಮುಚ್ಚಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಬಳ್ಳಾರಿ; ವಿವಿಧ ಹುದ್ದೆಗಳ ಭರ್ತಿ, ಆಸಕ್ತರು ಅರ್ಜಿ ಹಾಕಿ
ಶನಿವಾರ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಬಳ್ಳಾರಿ ನಗರ ಸೇರಿ ಬಳ್ಳಾರಿ ತಾಲ್ಲೂಕಿನಲ್ಲಿ 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ತರಹದ ಸರ್ಕಾರಿ/ ಖಾಸಗಿ ಶಾಲೆಗಳು, ಎಲ್ಲಾ ತರಹದ ರೆಸಿಡೆನ್ಸಿಯಲ್ ಸ್ಕೂಲ್ಸ್, ಎಲ್ಲಾ ತರಹದ ವಿಶ್ವವಿದ್ಯಾಲಯಗಳು ಹಾಗೂ ಎಲ್ಲಾ ಹಾಸ್ಟೆಲ್ಗಳನ್ನು ಸಂಪೂರ್ಣವಾಗಿ ಜನವರಿ 23ರ ತನಕ ಮುಚ್ಚಲು ಆದೇಶ ನೀಡಲಾಗಿದೆ.
ಸಿ.ಆರ್. ಬಳ್ಳಾರಿ ಸ್ಪರ್ಧೆ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟ ಸಿಎಂ!
ಈ ಹಿಂದೆ ಹೊರಡಿಸಲಾಗಿರುವ ಆದೇಶದ ಪ್ರಕಾರ ಜಿಂದಾಲ್ ಸುತ್ತಮುತ್ತಲಿನ ಪ್ರದೇಶಗಳಾದ ತೋರಣಗಲ್ಲು, ಬಿ.ಟಿ.ಪಿ.ಎಸ್. ಕುಡಿತಿನಿ, ವಡ್ಡು, ಸುಲ್ತಾನಪುರ, ತಾರಾನಗರ, ಕುರೇಕುಪ್ಪ ಹಾಗೂ ಜಿಂದಾಲ್ ಟೌನ್ಶಿಪ್ ನಲ್ಲಿ ಬರುವ ಎಲ್ಲಾ 1 ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ಸಹ ಜನವರಿ 23ರ ತನಕ ಮುಚ್ಚಲು ಸೂಚನೆ ಕೊಡಲಾಗಿದೆ.
ಜ.15: ಜಗತ್ತಿನ ಯಾವ ರಾಷ್ಟ್ರದಲ್ಲಿ ಎಷ್ಟು ಕೊರೊನಾ ರೋಗಿಗಳು ಗುಣಮುಖ?
ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂ; ಬಳ್ಳಾರಿ ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂವನ್ನು ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಜಾರಿಗೊಳಿಸಲಾಗಿದೆ. ಜನವರಿ 31ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ. ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು ರಾತ್ರಿ 10 ರಿಂದ ಬೆಳಗ್ಗೆ 5ರ ತನಕ ಇದೆ.
ಬಳ್ಳಾರಿ ಜಿಲ್ಲೆಯ ಎಲ್ಲಾ ತರಹದ ಪ್ರಾರ್ಥನಾ ಮಂದಿರಗಳಾದ ದೇವಸ್ಥಾನ, ಮಸೀದಿಗಳು, ಚರ್ಚ್ಗಳು, ಜೈನ್ ಮಂದಿರ ಮತ್ತು ಇತ್ಯಾದಿಗಳಲ್ಲಿ ಭಕ್ತಾದಿಗಳ ಮತ್ತು ಸಾರ್ವಜನಿಕರ ದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇವಲ ಆಯಾ ಪ್ರಾರ್ಥನಾ ಮಂದಿರಗಳಲ್ಲಿ ಅರ್ಚಕರು/ ಮೌಲಿಗಳು/ ಫಾಧರ್ಗಳು ಮಾತ್ರ ದಿನ ನಿತ್ಯ ಪೂಜೆ, ಪ್ರಾರ್ಥನೆ ಮಾಡಬಹುದಾಗಿದೆ. ಜನವರಿ 16 ರಿಂದ 31ರ ತನಕ ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಸೂಚನೆ ಕೊಡಲಾಗಿದೆ.
ಬೋಧನಾ ಕ್ರಮ; ಜಿಲ್ಲೆಯ ಕೋವಿಡ್ ಪರಿಸ್ಥಿತಿ ಅವಲೋಕಿಸಿ ಮುಂದಿನ ದಿನಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಗಳು ಮುಚ್ಚಿರುವ ಅವಧಿಯಲ್ಲಿಆನ್ ಲೈನ್/ಇತರೆ ಮಾರ್ಗಗಳ ಮೂಲಕ ಶಾಲಾ/ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೋಧನಾ ಚಟುಚಟಿಕೆಗಳನ್ನು ಮುಂದುವರೆಸಬೇಕು ಎಂದು ತಿಳಿಸಲಾಗಿದೆ.
ಮದುವೆ ಸಮಾರಂಭಕ್ಕೆ 50 ಜನರ ಮಿತಿ; ಬಳ್ಳಾರಿ ಜಿಲ್ಲೆಯಾದ್ಯಂತ ತಕ್ಷಣದಿಂದಲೇ ಮದುವೆ ಸಮಾರಂಭಗಳಿಗೆ ಗರಿಷ್ಠ 50 ಜನರ ಮಿತಿ ಹೇರಲಾಗಿದೆ. ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರಿಂದ ಪೂರ್ವಾನುಮತಿ ಪಡೆದು ಮದುವೆ ಮಾಡತಕ್ಕದ್ದು. ಮದುವೆ ಕಾರ್ಯಕ್ರಮಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಈ ಆದೇಶವು ಜನವರಿ 31ರವರೆಗೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಜಿಲ್ಲೆಯಾದ್ಯಂತ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ರೀತಿಯ ಪ್ರತಿಭಟನೆ, ಧರಣಿ, ಮುಷ್ಕರಗಳು, ಇತರೆ ಎಲ್ಲಾ ತರಹದ ಸಭೆಗಳು/ ಸಮಾರಂಭಗಳು/ ಕಾರ್ಯಕ್ರಮಗಳನ್ನು ಮಾಡುವುದನ್ನು ಜನವರಿ 31ರವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕಠಿಣ ಕ್ರಮದ ಎಚ್ಚರಿಕೆ; ಜಿಲ್ಲಾಡಳಿತ ಆದೇಶವನ್ನು ಉಲ್ಲಂಘನೆ ಮಾಡಿದರೆ ಅಂತಹ ಶಾಲೆ/ ರೆಸಿಡೆನ್ಸಿಯಲ್ ಸ್ಕೂಲ್ಸ್/ ಕಾಲೇಜುಗಳ/ ಹಾಸ್ಟೆಲ್/ ಚಿತ್ರಮಂದಿರ/ ಈಜುಕೊಳ/ಜಿಮ್ ಮ್ಯಾನೆಜ್ ಮೆಂಟ್/ ಶಾಲಾ/ ಕಾಲೇಜು ಮುಖ್ಯಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 51 ರಿಂದ 60ರ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಪಾಸಿಟಿವಿಟಿ ದರ ಏರಿಕೆ; ಬಳ್ಳಾರಿ ಜಿಲ್ಲೆಯಲ್ಲಿ ಡಿಸೆಂಬರ್ 31ರಂದು ಪಾಸಿಟಿವಿಟಿ ದರ ಶೇ.0.14 ಇತ್ತು. ಈ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಾ ಜನವರಿ 14ರಂದು ಶೇ 10ಕ್ಕೆ ಏರಿಕೆಯಾಗಿದೆ. ಇದರಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ತಾಲ್ಲೂಕಿನಲ್ಲಿ ಪಾಸಿಟಿವಿಟಿ ರೇಟ್ ಶೇ13ರನ್ನು ಮೀರಿದೆ. ಸೋಂಕು ತ್ವರಿತಗತಿಯಲ್ಲಿ ಹರಡುತ್ತಿರುವುದನ್ನು ಗಮನಿಸಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಬಳ್ಳಾರಿ ನಗರ ಮತ್ತು ತಾಲೂಕಿನ ಕೆಲ ಸರಕಾರಿ/ ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ತಗುಲಿ ಕೋವಿಡ್ ಹಾಟ್ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿರುವುದರಿಂದ ಮತ್ತು ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಹೇಳಿದ್ದಾರೆ.