ಬಳ್ಳಾರಿ ಜೆಡಿಎಸ್ ಅಭ್ಯರ್ಥಿ ಮೈಸೂರು ಕಾರ್ಪೋರೇಟರ್!
ಬಳ್ಳಾರಿ, ಏ. 2 : ಗಡಿನಾಡು ಬಳ್ಳಾರಿಯಲ್ಲಿ ಚುನಾವಣೆ ಕಾವು ಏರುತ್ತಿದೆ. ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು, ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಹನುಮಂತಪ್ಪ, ಜೆಡಿಎಸ್ ಅಭ್ಯರ್ಥಿ ಆರ್.ರವೀಂದ್ರ ಕುಮಾರ್ ಮುಂತಾದವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ರವೀಂದ್ರ ಕುಮಾರ್ ಮೈಸೂರು ಮಹಾನಗರ ಪಾಲಿಕೆ ಸದಸ್ಯರು, ಆದರೆ, ಅವರು ಬಳ್ಳಾರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ವಿಶೇಷ.
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕೊನೆಯ ಕ್ಷಣದಲ್ಲಿ ಆರ್.ರವೀಂದ್ರ ಕುಮಾರ್ ಅವರನ್ನು ಅಭ್ಯರ್ಥಿ ಎಂದು ಜೆಡಿಎಸ್ ಘೋಷಿಸಿತು. ಮೈಸೂರು ಮಹಾನಗರ ಪಾಲಿಕೆ ಸದಸ್ಯರಾಗಿರುವ ರವೀಂದ್ರ ಅವರು, ಬಿ.ಶ್ರೀರಾಮುಲು, ಎನ್.ವೈ.ಹನುಂತಪ್ಪ ಮುಂತಾದ ಘಟಾನುಘಟಿಗಳ ವಿರುದ್ಧ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ರವೀಂದ್ರ ಕುಮಾರ್ ಬಳ್ಳಾರಿಯವರಲ್ಲ ಅವರು ಹುಟ್ಟಿದ್ದು ಕೊಳ್ಳೇಗಾಲದಲ್ಲಿ. ಸದ್ಯ ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ವಾಸ್ತವ್ಯ ಹೂಡಿರುವ ಅವರು, ಮೈಸೂರಿನ ಮಹಾನಗರಪಾಲಿಕೆ ಸದಸ್ಯರು. ಆದರೆ, ಜೆಡಿಎಸ್ ಅವರನ್ನು ಹಲವಾರು ಲೆಕ್ಕಾಚಾರಗಳ ಮೂಲಕ ಬಳ್ಳಾರಿಯಲ್ಲಿ ಅಭ್ಯರ್ಥಿಯನ್ನಾಗಿಸಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ರವೀಂದ್ರ ಕುಮಾರ್ ಈಗಾಗಲೇ ಬಳ್ಳಾರಿಯಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. "ನಾನು ಬಳ್ಳಾರಿಗೆ ಹೊಸಮುಖ ಅಲ್ಲ. ನನ್ನ ತಮ್ಮನ ಹೆಂಡತಿ ಇದೇ ಬಳ್ಳಾರಿಯ ಹುಡುಗಿ. ಅಲ್ಲದೇ, ನಮ್ಮ ನಾಯಕ ಜನಾಂಗದ ಬಹಳಷ್ಟು ಜನ ಇಲ್ಲೇ ಇದ್ದಾರೆ. ಇಲ್ಲಿ ಆಡಳಿತ ವಿರೋಧಿ ಅಲೆಯೂ ಇದೆ. ಆದ್ದರಿಂದ ನಮ್ಮ ಗೆಲುವು ಖಚಿತ" ಎಂದು ರವೀಂದ್ರ ಕುಮಾರ್ ಹೇಳುತ್ತಿದ್ದಾರೆ.
ಸದ್ಯ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾಗಿರುವ ರವೀಂದ್ರ ಕುಮಾರ್, ಮೊದಲು ಮೈಸೂರಿನ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1997-98ರಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾಗಿದ್ದರು. 2010ರಲ್ಲಿ ಕಾಂಗ್ರೆಸ್ ಪಕ್ಷದಿಂದ ಪಾಲಿಕೆಗೆ ಆಯ್ಕೆಯಾದ ರವೀಂದ್ರ 2013ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆಗೂ ಸ್ಪರ್ಧಿಸಿದ್ದರು : ರವೀಂದ್ರ ಕುಮಾರ್ 2013ರ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ತನ್ವೀರ್ ಸೇಠ್ ವಿರುದ್ಧ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸದ್ಯ ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.












Click it and Unblock the Notifications