ಜಾತಿ ನಿಂದನೆ ಆರೋಪ: ಹರಪನಹಳ್ಳಿ ಕಾಂಗ್ರೆಸ್ ಘಟಕದಲ್ಲಿ ಟ್ವೀಟ್ ವಾರ್
ವಿಜಯನಗರ, ಏಪ್ರಿಲ್ 6: ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಭೋವಿ ಸಮುದಾಯದ ನಿಂದನೆ ವಿಚಾರವಾಗಿ ಹರಪನಹಳ್ಳಿ ಕಾಂಗ್ರೆಸ್ ಘಟಕದಲ್ಲಿ ವಾಕ್ಸಮರ ಮುಂದುವರೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕಾಂಗ್ರೆಸ್ ಮುಖಂಡ ಎಂ.ವಿ ಅಂಜಿನೆಪ್ಪ ಮಾಡಿರುವ ಜಾತಿ ನಿಂದನೆ ಆರೋಪದ ವಿಚಾರವಾಗಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಟ್ವೀಟ್ ಮಾಡಿದ್ದಾರೆ.
"ನಾನು ಯಾವುದೇ ಸಮಾಜದ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗುತ್ತದೆ'' ಎಂದು ಸಮಜಾಯಿಷಿ ನೀಡಿದ್ದಾರೆ.

ನಾನು ಸಹ ಶೋಷಣೆಗೆ ಒಳಗಾದ ಸಮುದಾಯದಿಂದ ಬಂದಿದ್ದೇನೆ. ಹಾಗಾಗಿ, ನಾನು ಯಾವುದೇ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮತನಾಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೇನೆ, ಭೋವಿ ಸಮಾಜದ ಮೇಲೆ ನನಗೆ ಅಪಾರ ಪ್ರೀತಿ ಮತ್ತು ಗೌರವ ಇದೆ ಎಂದಿದ್ದಾರೆ.
ಕೆಲವರು ನನ್ನ ವಿರುದ್ಧ ಈ ಸಮಾಜದ ಹೆಸರು ಬಳಸಿಕೊಂಡು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್, ನನ್ನ ವಿರುದ್ಧ ಷಡ್ಯಂತ್ರ ನಡೆಸಿ ನನ್ನ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರ ಎದುರೇ, ಭೋವಿ ಸಮುದಾಯದ ಮುಖಂಡ ಎಂ.ವಿ ಅಂಜಿನೆಪ್ಪ ಎಂಬುವರನ್ನು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.












Click it and Unblock the Notifications