ಹೊಸಪೇಟೆ-ಕೊಟ್ಟೂರು ರೈಲಿಗೆ ಅ.17ರಂದು ಹಸಿರು ನಿಶಾನೆ
ಬಳ್ಳಾರಿ, ಅಕ್ಟೋಬರ್ 11 : ಬಹುನಿರೀಕ್ಷಿತ ಹೊಸಪೇಟೆ-ಕೊಟ್ಟೂರು ಪ್ರಯಾಣಿಕ ರೈಲು ಸೇವೆಗೆ ಚಾಲನೆ ಸಿಗುವ ದಿನಾಂಕ ನಿಗದಿಯಾಗಿದೆ. ಜನರ ಹಲವು ದಶಕಗಳ ಬೇಡಿಕೆ ಅಂತಿಮವಾಗಿ ಈಡೇರುತ್ತಿದೆ.
ಅಕ್ಟೋಬರ್ 17ರಂದು ಹೊಸಪೇಟೆ ರೈಲು ನಿಲ್ದಾಣದಲ್ಲಿ ಹೊಸಪೇಟೆ-ಕೊಟ್ಟೂರು ಪ್ರಯಾಣಿಕ ರೈಲು ಸೇವೆಗೆ ಚಾಲನೆ ನೀಡಲಾಗುತ್ತದೆ. ಸುಮಾರು 65 ಕಿ. ಮೀ. ಉದ್ದದ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ್ದರು.

ಎರಡು ದಿನಗಳ ಕಾಲ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಪರಿಶೀಲನೆ ನಡೆಸಿ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದ್ದರು. ಹಲವು ದಶಕಗಳಿಂದ ಹೊಸಪೇಟೆ-ಕೊಟ್ಟೂರು ನಡುವೆ ಪ್ರಯಾಣಿಕ ರೈಲು ಆರಂಭಿಸಬೇಕು ಎಂದು ಜನರು ಬೇಡಿಕೆ ಇಟ್ಟಿದ್ದರು.
ಹೊಸಪೇಟೆ-ವ್ಯಾಸನಕೆರೆ ಮಾರ್ಗದಲ್ಲಿ ಗಂಟೆಗೆ 40 ಕಿ. ಮೀ., ವ್ಯಾಸನಕೆರೆ-ಹಗರಿಬೊಮ್ಮನಹಳ್ಳಿ ನಡುವೆ 50 ಕಿ.ಮೀ., ಹಗರಿಬೊಮ್ಮನಹಳ್ಳಿ-ಕೊಟ್ಟೂರು ನಡುವೆ 60 ಕಿ. ಮೀ. ವೇಗದಲ್ಲಿ ರೈಲು ಸಂಚಾರ ನಡೆಸಲಿದೆ.
ಹೊಸಪೇಟೆ-ಕೊಟ್ಟೂರು ಪ್ರಯಾಣಿಕ ರೈಲು ಸಂಚಾರದಿಂದ ಎರಡು ದಶಕಗಳ ಬೇಡಿಕೆ ಈಡೇರುತ್ತಿದೆ. 1990ರಲ್ಲಿ ಹೊಸಪೇಟೆ-ಕೊಟ್ಟೂರು-ಸ್ವಾಮಿಹಳ್ಳ ನಡುವೆ ಮೀಟರ್ ಗೇಜ್ ಹಳಿ ಇತ್ತು. ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳು ಸಂಚಾರ ನಡೆಸುತ್ತಿದ್ದವು.
1995ರಲ್ಲಿ ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತನೆ ಮಾಡಲಾಯಿತು. ಸರಕು ಸಾಗಣೆ ರೈಲುಗಳು ಸಂಚಾರ ಮುಂದುವರೆಯಿತು. ಆದರೆ, ಪ್ರಯಾಣಿಕರ ರೈಲುಗಳ ಸಂಚಾರ ಸ್ಥಗಿತವಾಯಿತು. ಅಂದಿನಿಂದ ರೈಲು ಸೇವೆ ಆರಂಭಿಸುವಂತೆ ಹೋರಾಟ ಆರಂಭಿಸಲಾಗಿತ್ತು.












Click it and Unblock the Notifications