ವಿಜಯನಗರದಲ್ಲಿ ಮಳೆ ಅಬ್ಬರ; ಮನೆಗಳಿಗೆ ಹಾನಿ, ಬೆಳೆಗಳು ಜಲಾವೃತ
ವಿಜಯನಗರ, ಜುಲೈ 08; ವಿಜಯನಗರ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆ, ಗಾಳಿ ಅಪಾರ ನಷ್ಟವನ್ನು ಉಂಟು ಮಾಡಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಹೊಲಗಳಿಗೆ ನೀರು ನುಗ್ಗಿ ಬೆಳೆಗೆ ಸಹ ಹಾನಿಯಾಗಿದೆ.
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುಮಾರನಹಳ್ಳಿ ತಾಂಡದಲ್ಲಿ ಮಳೆ, ಗಾಳಿಯಿಂದಾಗಿ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 30 ಮನೆಗಳಲ್ಲಿ 12 ಮನೆಗಳು ಸಂಪೂರ್ಣಾವಾಗಿ ಜಖಂಗೊಂಡಿವೆ.
ಹೊಲಗಳಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ನೀರು ನುಗ್ಗಿದ್ದರಿಂದ ಪಪ್ಪಾಯಿ, ಪೇರಲೆ, ಕಬ್ಬು ಹೀಗೆ ಹಲವಾರು ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಇದರಿಂದಾಗಿ ರೈತರು ತಮ್ಮ ಫಸಲನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಸ್ತೆ ಬದಿ ಇರುವ ಮರಗಳು ಧರೆಗೆ ಉರುಳಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿಗಳು ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ರೈತರ ಆರೋಪವೇನು?; ಹೊಲಗಳಿಗೆ ನೀರು ನುಗ್ಗಲು ಅವೈಜ್ಞಾನಿಕ ಕೃಷಿ ಹೊಂಡ ನಿರ್ಮಾಣ ಮಾಡಿದ್ದು ಕಾರಣ ಎಂದು ರೈತರು ಆರೋಪಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ರೈತ ಜಾತಪ್ಪ ಈ ಕುರಿತು ಮಾತನಾಡಿದ್ದು, "ಬರ್ರಿ, ಬರ್ರಿ ವಿಡಿಯೋ ಮಾಡ್ಕೋಳ್ರಿ ಅಯ್ಯೋ ಶಿವ, ಶಿವ ಇದೇನ್ ಅನ್ಯಾಯ ಆಗೋತು ಯಪ್ಪಾ, ಇಷ್ಟಕೊಂದು ನೀರು ಹೋದ್ರ ಯಾವ ಬೆಳೆ ತಡಿತೈತಿ ನಾನು ಪ್ರಾಣ ಹೇಂಗುಟ್ಟುಕೊಳ್ಳಬೇಕ್ರೀ? ನಾನು ಬಡವ ಇದೀನಿ" ಎಂದು ಕಣ್ಣೀರು ಹಾಕಿದ್ದಾರೆ.
ದಾಳಿಂಬೆ ಮತ್ತು ಪಪ್ಪಾಯಿಯನ್ನು 3 ಎಕರೆ ಹೊಲದಲ್ಲಿ ಕಷ್ಟಪಟ್ಟು ಬೆಳೆಯಲಾಗಿತ್ತು. ನೀರು ನುಗ್ಗಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅವೈಜ್ಞಾನಿಕ ಕೃಷಿ ಹೊಂಡವನ್ನು ಹಳ್ಳದಲ್ಲಿ ನಿರ್ಮಾಣ ಮಾಡಿದ್ದರಿಂದ ಮಳೆ ನೀರು ನಮ್ಮ ಹೊಲಕ್ಕೆ ನುಗ್ಗಿದೆ, ಇದಕ್ಕೆ ಕೃಷಿ ಅಧಿಕಾರಿಗಳೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷವೂ ಇದೇ ರೀತಿಯಾಗುತ್ತಿದೆ. ನಮಗೆ ನ್ಯಾಯ ಕೊಡಿಸಿ ಎಂದು ರೈತರು ಬೇಡಿಕೆ ಇಟ್ಟಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications