ದೇಶದ್ರೋಹಿಗಳನ್ನು ಕ್ಷಮಿಸುವ ಮಾತೇ ಇಲ್ಲ: ಡಿಸಿಎಂ ಅಶ್ವಥ್ ನಾರಾಯಣ
ಬಳ್ಳಾರಿ, ಫೆಬ್ರವರಿ 26: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಿರುವ ಸಂದರ್ಭವನ್ನೇ ಬಳಕೆ ಮಾಡಿಕೊಂಡು ಸಿಎಎ ವಿಚಾರದಲ್ಲಿ ಯಾರು ಗೊಂದಲ ನಿರ್ಮಾಣ ಮಾಡಿದ್ದಾರೋ ಅಂತವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಬಳ್ಳಾರಿ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಂತಿ ಕಾಪಾಡಲು ರಾಜ್ಯ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ, ವಿಚಾರ ವಿನಿಮಯ ಮಾಡುವ ಹಕ್ಕು ಎಲ್ಲರಿಗೂ ಇದೆ ಆದರೆ ಯಾರು ಕೂಡಾ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬೇಡಿ ಎಂದರು.
ದೇಶದ್ರೋಹದಂತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬಾರದು, ಪೌರತ್ವ ಕಾಯ್ದೆ ವಿಷಯದಲ್ಲಿ ವಿದ್ಯಾರ್ಥಿಗಳು ಕ್ಯಾಂಪಸ್ ಹೊರಗಡೆ ವಿಚಾರ ವಿನಿಮಯ ಮಾಡಿಕೊಳ್ಳಲಿ, ಪೌರತ್ವ ಕಾಯ್ದೆ ಈಗಾಗಲೇ ದೇಶದ ದೇಗುಲ ಪಾರ್ಲಿಮೆಂಟ್ ನಲ್ಲಿ ಪಾಸಾಗಿದೆ ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಹಿತದೃಷ್ಟಿಯಿಂದ ಮಾಡಿದ ಕಾನೂನು, ಈ ವಿಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಅದರಲ್ಲಿರುವ ಅಂಶಗಳ ಬಗ್ಗೆ ಏನಿದೆ ಅಂತಾ ಯಾರೂ ಮಾತನಾಡುತ್ತಿಲ್ಲವೆಂದರು.
ಸಿಎಎ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡರೆ ಈ ಸಮಸ್ಯೆ ಬರುವುದಿಲ್ಲ. ಕೆಲವು ಕಡಿಮೆ ತಿಳುವಳಿಕೆ ಜನ ಸಮಾಜ ವಿರೋಧಿ ಚಿಂತನೆ ಕೊಡುತ್ತಿದ್ದಾರೆ. ಕೆಲವರು ಅಪನಂಬಿಕೆ ಸೃಷ್ಠಿಸಿ, ಯಾವುದೋ ಒಂದು ಧರ್ಮದ ವಿರುದ್ಧ ಕಾನೂನಿದೆ ಎಂದು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ದೇಶದಿಂದ ಹೊರ ಹಾಕ್ತಿವಿ ಅಂತಾ ಬಿಂಬಿಸಿ, ಸಮಸ್ಯೆ ಹಟ್ಟು ಹಾಕಿ, ದೇಶ ಜಾಗೂ ಸಮಾಜಕ್ಕೆ ಕಂಟಕ ತರುತ್ತಿದ್ದಾರೆ ಎಂದಿದ್ದಾರೆ.
ಬಳಿಕ ರಾಜ್ಯದಲ್ಲಿ ಸೂಪರ್ ಸಿಎಂ ವಿಚಾರಕ್ಕೆ ಪ್ರತಿಕ್ರೀಯೆ ನೀಡಿದ ಡಿಸಿಎಂ ಅಶ್ವಥ್ ನಾರಾಯಣ, ಇದು ವಿರೋಧ ಪಕ್ಷದವರು ಹಾಗೂ ಪಕ್ಷದ ವಿರೋಧಿಗಳು ಹುಟ್ಟು ಹಾಕಿದ ಸುಳ್ಳು ಸುದ್ದಿ ಎಂದು ಹೇಳಿದರು.
ಇನ್ನು ಮುಖ್ಯಮಂತ್ರಿಗೆ ವಯಸ್ಸಾಗಿದೆ ಎಂಬ ಅನಾಮಧೇಯ ಪತ್ರ ಬಂದಿದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಪ್ರಬಲರು, ಸಧೃಡರು ಹಾಗೂ ಪರಿಣಾಮಕಾರಿ ನಾಯಕ. ಎಲ್ಲ ಕೆಲಸ ಮಾಡುವ ಶಕ್ತಿ ಅವರಿಗಿದೆ. ಹೀಗಾಗಿ ಅವರಿಗೆ ಸೂಪರ್ ಸಿಎಂ ಎನ್ನುವ ಪ್ರಶ್ನೆ ಉದ್ಭವ ಆಗಲ್ಲ. ಎಲ್ಲ ಕಾರ್ಯದಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ ಎಂದರು.












Click it and Unblock the Notifications