ಕಂಪ್ಲಿ ಪುರಸಭೆ ಬಿಜೆಪಿ ತೆಕ್ಕೆಗೆ; ಕಾಂಗ್ರೆಸ್ ಶಾಸಕ ಗಣೇಶ್ ಗೆ ಮುಖಭಂಗ
ಬಳ್ಳಾರಿ, ನವೆಂಬರ್ 06: ಭಾರಿ ಕುತೂಹಲ ಕೆರಳಿಸಿದ್ದ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.
ಈ ಚುನಾವಣೆಯನ್ನು ಶಾಸಕ ಜೆ.ಗಣೇಶ ಹಾಗೂ ಮಾಜಿ ಶಾಸಕ ಸುರೇಶಬಾಬು ನಡುವೆ ಏರ್ಪಟ್ಟಿದ್ದ ರಾಜಕೀಯ ಜಿದ್ದಾಜಿದ್ದಿ ಎಂದೇ ಬಣ್ಣಿಸಲಾಗಿತ್ತು. ಕೊನೆಗೂ ಕಂಪ್ಲಿ ಪಟ್ಟಣದ ಪುರಸಭೆ ಆಡಳಿತದ ಗದ್ದುಗೆ ಶುಕ್ರವಾರ ಬಿಜೆಪಿ ಪಾಲಾಗಿದೆ.
ಬಹುಮತದ ಬಿಜೆಪಿಯು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ಸಡ್ಡು ಹೊಡೆದಿದೆ. ನೂತನ ಅಧ್ಯಕ್ಷೆಯಾಗಿ ವಿ.ಶಾಂತಲಾ ಹಾಗೂ ಉಪಾಧ್ಯಕ್ಷೆಯಾಗಿ ಕೆ.ನಿರ್ಮಲ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ್ರವರ್ಗ-ಎ ಮೀಸಲಾಗಿತ್ತು. ಎರಡು ಮೀಸಲಾತಿ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರಿಂದ ಪ್ರತ್ಯೇಕ ನಾಮಪತ್ರ ಸಲ್ಲಿಕೆಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವಿ.ಶಾಂತಲಾ ಹಾಗೂ ಕಾಂಗ್ರೆಸ್ ನಿಂದ ಸುಶೀಲಮ್ಮ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೆ.ನಿರ್ಮಲ ಹಾಗೂ ಕಾಂಗ್ರೆಸ್ ನಿಂದ ಎಂ.ಉಸ್ಮಾನ್ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ 12 ಜನ ಸದಸ್ಯರ ಬೆಂಬಲದೊಂದಿಗೆ ವಿ.ಶಾಂತಲಾ ನೂತನ ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷೆಯಾಗಿ ಕೆ.ನಿರ್ಮಲ ಆಯ್ಕೆಯಾದರು.
ಬಿಜೆಪಿ ಪುರಸಭೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಸಲಾಯಿತು. ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಕಂಪ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ವೇಳೆ ಮಾಜಿ ಶಾಸಕ ಸುರೇಶ ಬಾಬು ಸೇರಿ ಕಾರ್ಯಕರ್ತರು ಗುಂಪು ಗುಂಪಾಗಿ ಸೇರಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂತು.












Click it and Unblock the Notifications